24 ವರ್ಷದ ಮಗನನ್ನು ಪ್ರಿಯಕರನೊಂದಿಗೆ ಸೇರಿ ಕೊಲೆಗೈದು, ಮಗ ನಾಪತ್ತೆ ಎಂದು ದೂರು ನೀಡಿದ ತಾಯಿ | JANATA NEWS
ಬಾಗಲಕೋಟೆ: : ಮಗ ನಾಪತ್ತೆ ಎಂದು ತಾಯಿ ದೂರು ನೀಡಿದ್ದ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ನಾಪತ್ತೆಯಾಗಿದ್ದ ಯುವಕ ಚೀಲದಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಮುಧೋಳ ತಾಲೂಕಿನ ನಾಗಣಾಪುರ ಗ್ರಾಮದಲ್ಲಿ ನಡೆದಿದೆ.
ವಸಂತ ಮಾಲಿಂಗಪ್ಪ ಕುರಬಳ್ಳಿ(24) ಕೊಲೆಯಾದವ. ಪ್ರಕರಣದ ಸಂಬಂಧ ತಾಯಿ ಕಮಲವ್ವ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧನ ಮಾಡಿದ್ದಾರೆ.
ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿ ಹಾಗೂ ಆಸ್ತಿ ಕೇಳಿದ್ದಕ್ಕೆ ಅಳಿಯಂದಿರು ಮತ್ತು ಪ್ರಿಯಕರನ ಜತೆ ಸೇರಿ ದತ್ತುಮಗನನ್ನೇ ಕಮಲವ್ವ ಕೊಲೆ ಮಾಡಿಸಿದ್ದಾಳೆ. ಕೊಲೆ ಮಾಡಿಸಿದ ಬಳಿಕ ತಾನೇ ಹೋಗಿ ಮಗ ನಾಪತ್ತೆ ಅಂತ ದೂರು ನೀಡಿದ್ದಳು.
ನಾಪತ್ತೆಯಾಗಿದ್ದ ಯುವಕನ ಮೃತದೇಹ ಚೀಲದಲ್ಲಿ ಮೂಟೆ ಕಟ್ಟು ಬೀಸಾಡಿದ್ದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆರೋಪಿ ಕಮಲವ್ವ ತನ್ನ ಮಗಳ ಗಂಡನ ತಂದೆ ನಿಂಗಪ್ಪ ಎಂಬಾತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಈ ವಿಚಾರ ಮಗನಿಗೆ ತಿಳಿದು ಆತ ಬುದ್ಧಿವಾದ ಹೇಳಿದ್ದನಂತೆ.
ತಾಯಿ ಕಮಲವ್ವ, ಅಳಿಯಂದಿರಾದ ಭೀಮಪ್ಪ ಮಳಲಿ, ಸಿಂಧೂರ ಬೀರಣ್ಣವರ, ಕಮಲವ್ವಳ ಪ್ರಿಯಕರ ನಿಂಗಪ್ಪ ಸೇರಿಕೊಂಡು ವಸಂತ ಮಾಲಿಂಗಪ್ಪನ ಕತ್ತು, ಮರ್ಮಾಂಗ ಹಿಸುಕಿ ಕೊಲೆ ಮಾಡಿ, ಎದೆ ಮೇಲೆ ಕಲ್ಲು ಎತ್ತಿ ಹಾಕಿದ್ದರು. ಬಳಿಕ ಶವವನ್ನು ಚೀಲದಲ್ಲಿ ತುಂಬಿಕೊಂಡು ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ದಾಸನಾಳ ಸೀಮೆಯ ಕಾಲುವೆಯಲ್ಲಿ ಬೀಸಾಡಿದ್ದರು.
ಈ ಪ್ರಕರಣವನ್ನು ಬಹಳ ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿದಾಗ ತಾಯಿ ಕಮಲವ್ವ ಹಾಗೂ ಅಳಿಯಂದಿರ ಬಣ್ಣ ಬಯಲಾಗಿದೆ. ಆರೋಪಿಗಳನ್ನು ಬಂಧಿಸಿರುವ ಲೋಕಾಪುರ ಠಾಣೆ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.