ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವ ಮಾಡಲು ಅವಕಾಶ ಇಲ್ಲ: ಜಮೀರ್ ಅಹ್ಮದ್ ಖಾನ್ | JANATA NEWS
ಬೆಂಗಳೂರು : ಚಾಮರಾಜ ಪೇಟೆಯಲ್ಲಿ ಇರುವ ಈದ್ಗಾ ಮೈದಾನದಲ್ಲಿ ಗಣೇಶನ ಹಬ್ಬ ಆಚರಣೆಗೆ ಅವಕಾಶ ಇಲ್ಲ ಎಂದು ಶಾಸಕ ಜಮೀರ್ ಅಹ್ಮದ್ ಖಾನ್ ಹೇಳಿದ್ದು, ಹಿಂದುಪರ ಸಂಘಟನೆಗಳ ಆಕ್ರೋಶ ಭುಗಿಲೆದ್ದಿದೆ.
ಈದ್ಗಾ ಮೈದಾನದಲ್ಲಿ ಸ್ವಾತಂತ್ರ್ಯೋತ್ಸವ ಧ್ವಜಾರೋಹಣಕ್ಕೆ ಸ್ಥಳ ಪರಿಶೀಲನೆಗೆ ಆಗಮಿಸಿದ್ದ ವೇಳೆ ಮಾತನಾಡಿದ ಅವರು, ಈದ್ಗಾ ಮೈದಾನದಲ್ಲಿ ಆಗಸ್ಟ್ 15 ರಂದು ಸ್ವಾತಂತ್ರ್ಯೋತ್ಸವದ ತ್ರಿವರ್ಣ ಧ್ವಜಾರೋಹಣ, ಜನವರಿ 26ರಂದು ಗಣರಾಜ್ಯೋತ್ಸವ ವೇಳೆ ತ್ರಿವರ್ಣ ಧ್ವಜಾರೋಹಣ ಹಾಗೂ ಕನ್ನಡ ರಾಜ್ಯೋತ್ಸವದ ವೇಳೆ ಕನ್ನಡ ಧ್ವಜಾರೋಹಣಕ್ಕೆ ಮಾತ್ರ ಅವಕಾಶ ಇದೆ, ಆದ್ರೆ ಗಣೇಶ ಹಬ್ಬದ ಆಚರಣೆ ಮಾಡುವುದಿಲ್ಲ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ಖಾನ್ ಎನ್ನುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.
ಚಾಮರಾಜಪೇಟೆಯ ಈದ್ಗಾ ಮೈದಾನ ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಕಂದಾಯ ಇಲಾಖೆಗೆ ಸೇರಿದ್ದು ಎಂದು ಬಿಬಿಎಂಪಿ ಹೇಳಿದೆ. ಇದರ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಶಾಸಕರು, 1999ಕ್ಕಿಂತ ಮೊದಲು ವಕ್ಫ್ ಮಂಡಳಿ ಹಾಗೂ ಮುಜರಾಯಿ ಇಲಾಖೆ ಎರಡೂ ಕಂದಾಯ ಇಲಾಖೆ ಅಧೀನದಲ್ಲೇ ಇದ್ದವು. ಎಸ್.ಎಂ ಕೃಷ್ಣ ಅವರು ಮುಖ್ಯಮಂತ್ರಿಗಳಾಗಿದ್ದಾಗ ವಕ್ಫ್ ಮಂಡಳಿಯನ್ನು ಪ್ರತ್ಯೇಕಿಸಿದರು. ಮೈದಾನದ ವಿಚಾರವನ್ನು ವಕ್ಫ್ ಮಂಡಳಿಯವರು ನೋಡಿಕೊಳ್ಳುತ್ತಾರೆ. ಸದ್ಯ ನಾವು ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸುವ ತಯಾರಿಯಲ್ಲಿದ್ದೇವೆ ಎಂದು ಹೇಳಿದರು.
ನಮಾಜ್ ಮಾಡಬಹುದು ಅಂದ ಮೇಲೆ ಗಣೇಶೋತ್ಸವಕ್ಕೆ ಏಕೆ ಅವಕಾಶವಿಲ್ಲ ಎಂದು ಹಿಂದುಪರ ಸಂಘಟನೆಗಳು ಗರಂ ಆಗಿವೆ.
ಅತ್ತ ಚಾಮರಾಜಪೇಟೆ ಆಟದ ಮೈದಾನವನ್ನು ಕಂದಾಯ ಇಲಾಖೆಯ ಸ್ವತ್ತು ಎಂದು ಘೋಷಣೆ ಮಾಡಿರುವ ಬಿಬಿಎಂಪಿ, ಮೈದಾನದ ಸುಪರ್ದಿಯನ್ನು ಪಾಲಿಕೆಗೆ ನೀಡುವಂತೆ ಮನವಿ ಸಲ್ಲಿಸಲು ಸಿದ್ಧತೆ ಮಾಡುತ್ತಿದೆ. ಹಲವು ದಿನಗಳಿಂದ ಚಾಮರಾಜಪೇಟೆ ಮೈದಾನದ ಮಾಲೀಕತ್ವದ ವಿಚಾರ ಮುನ್ನೆಲೆಗೆ ಬಂದಿದ್ದು, ವಕ್ಫ್ ಮಂಡಳಿಯು ತನ್ನ ಆಸ್ತಿಯೆಂದು ಹೇಳಿಕೊಂಡಿತ್ತು. ಈ ಬಗ್ಗೆ ಸೂಕ್ತ ದಾಖಲೆಗಳನ್ನು ಸಲ್ಲಿಸಿದೆ ವಿಫಲ ಆಗಿದ್ದರಿಂದ ಕಂದಾಯ ಇಲಾಖೆಯ ಆಸ್ತಿಯೆಂದು ಬಿಬಿಎಂಪಿ ಜಂಟಿ ಆಯುಕ್ತರ ಅರೆನ್ಯಾಯಿಕ ಪ್ರಾಧಿಕಾರ ತೀರ್ಮಾನಿಸಿದೆ.