ಎನ್ಡಿಎ ಮೈತ್ರಿಕೂಟದಿಂದ ಹೊರಬಂದ ಜೆಡಿಯು : ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ | JANATA NEWS
ಪಾಟ್ನಾ : ಜನತಾ ದಳ(ಯುನೈಟೆಡ್) ನಾಯಕ ನಿತೀಶ್ ಕುಮಾರ್ ಮಂಗಳವಾರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಬಿಹಾರ ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟವನ್ನು ತೊರೆಯಲು ಪಕ್ಷದ ಎಲ್ಲ ಸಂಸದರು ಮತ್ತು ಶಾಸಕರು ಒಮ್ಮತದಲ್ಲಿದ್ದಾರೆ, ಎಂದು ತಿಳಿಸಿದರು.
ಮೂಲಗಳ ಪ್ರಕಾರ, ಆರ್ಜೆಡಿ ನಿತೀಶ್ ಕುಮಾರ್ಗೆ ಬೆಂಬಲ ನೀಡುವ ಸಾಧ್ಯತೆಯಿದೆ ಮತ್ತು ಖಾತೆಗಳ ಹಂಚಿಕೆಯಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ.
"ಬಿಜೆಪಿ ಅಸ್ಥಿರತೆಯನ್ನು ಸೃಷ್ಟಿಸಲು ಪ್ರಯತ್ನಿಸಿದರೆ ಅಥವಾ ರಾಷ್ಟ್ರಪತಿ ಆಳ್ವಿಕೆಗೆ ಒತ್ತಾಯಿಸಲು ಪ್ರಯತ್ನಿಸಿದರೆ, ನಾವು ಅವರಿಗೆ ತಕ್ಕ ಉತ್ತರವನ್ನು ನೀಡುತ್ತೇವೆ" ಎಂದು ಆರ್ಜೆಡಿ ಮೂಲಗಳು ಎಎನ್ಐಗೆ ತಿಳಿಸಿವೆ.
ಇಂದು ಕರೆಯಲಾಗಿದ್ದ ಜೆಡಿಯು ಸಭೆಯಲ್ಲಿ, ಬಿಹಾರ ಸಿಎಂ ನಿತೀಶ್ ಕುಮಾರ್ ಜೆಡಿಯು ಪಕ್ಷದ ಸಂಸದರು ಮತ್ತು ಶಾಸಕರ ಸಮ್ಮುಖದಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಬಿಜೆಪಿ ಯಾವಾಗಲೂ ಜೆಡಿಯು ನಾಯಕರನ್ನು ಅವಮಾನಿಸುತ್ತಿದೆ ಮತ್ತು ಪಕ್ಷವನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದೆ, ಎಂದು ಅವರು ಆರೋಪಿಸಿದರು.
ಮೂಲಗಳ ಪ್ರಕಾರ, ಬಿಹಾರದಲ್ಲಿ ಸರ್ಕಾರ ರಚಿಸಲು ಜೆಡಿ(ಯು) ಸೂತ್ರವನ್ನು ರೂಪಿಸುತ್ತಿದೆ,
ಮುಖ್ಯಮಂತ್ರಿ: ಜೆಡಿಯು
ಉಪ ಮುಖ್ಯಮಂತ್ರಿ ಮತ್ತು ಗೃಹ ಸಚಿವಾಲಯ: ಆರ್ಜೆಡಿ
ಸ್ಪೀಕರ್: ಕಾಂಗ್ರೆಸ್
ಅಲ್ಲದೆ, ಕಾಂಗ್ರೆಸ್ಗೆ ಉಪ ಮುಖ್ಯಮಂತ್ರಿ ಸ್ಥಾನ ಸಿಗುವುದು ಒಂದು ಸೂತ್ರ ಆಗಿದೆ.
ಏತನ್ಮಧ್ಯೆ, ಬಿಹಾರದ ಸಚಿವ ಮತ್ತು ಬಿಜೆಪಿ ನಾಯಕ ಶಾನವಾಜ್ ಹುಸೇನ್ ಎಎನ್ಐನೊಂದಿಗೆ ಮಾತನಾಡಿ, "ನಾವು ನಮ್ಮ ಪಕ್ಷವನ್ನು ಬಲಪಡಿಸುತ್ತೇವೆ, ನಾವು ಯಾವುದೇ ಪಕ್ಷವನ್ನು ದುರ್ಬಲಗೊಳಿಸುವುದಿಲ್ಲ. ಪಕ್ಷದ ನಾಯಕತ್ವವು ಪಾಟ್ನಾದಲ್ಲಿ ಅಧಿಕೃತ ಹೇಳಿಕೆ ನೀಡಲಿದೆ. ನಾವು ಬಿಹಾರದ ಜನರ ವ್ಯಾಪಾರ ಮತ್ತು ಉದ್ಯೋಗಕ್ಕಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ. ಪಕ್ಷವು ಹೇಳಿಕೆ ನೀಡಲಿದೆ, ನಾನೇನು ಹೇಳುವುದಿಲ್ಲ", ಎಂದು ತಿಳಿಸಿದ್ದಾರೆ.