ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರದ ಎಲ್ಲಾ ಇಲಾಖೆಯ ಉದ್ಯೋಗದಲ್ಲೂ ಶೇ.2 ಮೀಸಲು | JANATA NEWS
ಬೆಂಗಳೂರು : ರಾಜ್ಯ ಸರಕಾರದ ಎಲ್ಲ ಇಲಾಖೆಗಳಲ್ಲಿ ಕ್ರೀಡಾ ಪಟುಗಳಿಗೆ ಶೇ. 2 ರಷ್ಟು ಮೀಸಲು ಕಲ್ಪಿಸುವ ಕಡತಕ್ಕೆ ಸದ್ಯದಲ್ಲೇ ನಾನು ಸಹಿ ಹಾಕುತ್ತೇನೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ನಡೆದ ಕ್ರೀಡಾಪಟುಗಳ ಅಭಿನಂದನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಪದಕ ಗೆದ್ದ ರಾಜ್ಯದ ಕ್ರೀಡಾಪಟುಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ನಗದು ಬಹುಮಾನ ನೀಡಿ ಗೌರವಿಸಿದರು.
ಬ್ಯಾಡ್ಮಿಂಟನ್ ಮಿಕ್ಸ್ ಡ್ ಡಬಲ್ಸ್ ನಲ್ಲಿ ಬೆಳ್ಳಿ ಗೆದ್ದ ಕನ್ನಡತಿ ಅಶ್ವಿನಿ ಪೊನ್ನಪ್ಪ ಅವರಿಗೆ ರಾಜ್ಯ ಸರ್ಕಾರದಿಂದ 15 ಲಕ್ಷ ರೂ. ಕ್ರಿಕೆಟ್ನಲ್ಲಿ ಬೆಳ್ಳಿ ಪದಕ ವಿಜೇತೆ ರಾಜೇಶ್ವರಿ ಗಾಯಕ್ವಾಡ್ ಅವರಿಗೆ 15 ಲಕ್ಷ ರೂ. ಹಾಗೂ ವೇಟ್ ಲಿಫ್ಟಿಂಗ್ನಲ್ಲಿ ಕಂಚು ಗೆದ್ದ ಗುರುರಾಜ ಪೂಜಾರಿಗೆ 8 ಲಕ್ಷ ರೂ. ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.
ನಾವು ನಿಮ್ಮ ಜೊತೆಗಿದ್ದೇವೆ. ಕ್ರೀಡಾಪಟುಗಳಿಗೆ ಭದ್ರತೆ ಬೇಕು. ನೀವು ಸಾಧನೆ ಮಾಡಿದರೆ ಸರ್ಕಾರಕ್ಕೂ ಉತ್ಸಾಹ ಬರುತ್ತದೆ. ಬೇರೆ ಇಲಾಖೆಗಳಲ್ಲೂ ಕ್ರೀಡೆ ಪಟುಗಳಿಗೆ ಉದ್ಯೋಗದಲ್ಲಿ 2% ಮೀಸಲಾತಿ ನೀಡುವ ಕಡತಕ್ಕೆ ಸಹಿ ಹಾಕುತ್ತೇನೆ. ನೌಕರಿಗಾಗಿ ಕ್ರೀಡೆ ಆಡಬೇಡಿ. ನೀವು ಮೊದಲಿಗೆ ದೇಶಕ್ಕಾಗಿ ಆಡಿ. ಗೆಲ್ಲೋದಕ್ಕಾಗಿ ಆಡಿ ಸರ್ಕಾರ ನಿಮ್ಮ ಬೆನ್ನಿಗೆ ನಿಂತಿದೆ. ನಿಮ್ಮ ಸುರಕ್ಷತೆ ನೋಡುತ್ತದೆ. ನಿಮಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುತ್ತದೆ ಎಂದು ವಿವರಿಸಿದರು.