ರಾಜ್ಯ ಸರ್ಕಾರದ ವಿರುದ್ಧ ಪ್ರತಿಪಕ್ಷ ಕಾಂಗ್ರೆಸ್ ಅಭಿಯಾನ, ಬಿಜೆಪಿಯವರೇ ನಿಮ್ಮ ಹತ್ತಿರ ಇದೆಯಾ ಉತ್ತರ? | JANATA NEWS
ಬೆಂಗಳೂರು : ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಪಕ್ಷ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದ್ದು, ಇಂದಿನಿಂದ ದಿನಕ್ಕೊಂದು ಪ್ರಶ್ನೆ ಕೇಳುವ ಅಭಿಯಾನ ಆರಂಭಿಸಲು ನಿರ್ಧರಿಸಿದೆ.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ನಾಯಕರು ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ, ಬಿಜೆಪಿ ನಾಯಕರು 600ಕ್ಕೂ ಹೆಚ್ಚು ಭರವಸೆಗಳನ್ನು ನೀಡಿದ್ದರು. ಆದರೆ, ಇದುವರೆಗೂ ಯಾವುದೇ ಭರವಸೆ ಈಡೇರಿಸಿಲ್ಲ. ಅಧಿಕಾರದ ಹಸಿವು ಹೊಂದಿರುವ ಬಿಜೆಪಿ ಯಾವುದೇ ರೀತಿಯಲ್ಲಿ ಜನರಿಗೆ ಅನುಕೂಲವಾಗುವ ಕಾರ್ಯಕ್ರಮವನ್ನು ರೂಪಿಸಿಯೇ ಇಲ್ಲ ಎಂದರು.
ಬಿಜೆಪಿ ಅಂದರೆ ಬಹುತ್ ಜೂಟಾ ಪಾರ್ಟಿ, ಬಿಟ್ರೆಯಲ್ ಜನತಾ ಪಾರ್ಟಿ ಹಾಗೂ ಬೇಕೂಫ್ ಬನಾವೋ ಜನತಾ ಪಾರ್ಟಿ ಅಂತಲೂ ಕರೆಯಬಹುದು ಎಂದ ಸುರ್ಜೆವಾಲಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅತ್ಯಂತ ಅಸಮರ್ಥ, ಅಸಹಾಯಕ, ಅದಕ್ಷ ಸಿಎಂ ಎಂದು ಕಿಡಿಕಾರಿದರು.
ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಬಿಜೆಪಿ ಚುನಾವಣೆ ಪ್ರಣಾಳಿಕೆಯಲ್ಲಿ 600 ಭರವಸೆಗಳನ್ನು ಈಡೇರಸದೆ ಶೇ.90ರಷ್ಟು ವಚನ ವಂಚನೆ ಮಾಡಿದೆ. ಈ ಪ್ರಣಾಳಿಕೆಯನ್ನು ಮುಂದಿಟ್ಟು, ಸರ್ಕಾರಕ್ಕೆ ಜನರಿಂದಲೇ ದಿನಕ್ಕೊಂದು ಪ್ರಶ್ನೆ ಕೇಳುತ್ತೇವೆ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾತನಾಡಿ, ಬಿಜೆಪಿಯ ವಚನ ವಂಚನೆಯಾಗಿದೆ ಎಂಬ ಮಾತಿನ ಜೊತೆ ಅವರು ನೀಡಿದ ಪ್ರಣಾಳಿಕೆಯನ್ನು ಜನರ ಮುಂದೆ ಇಡುತ್ತಿದ್ದೇವೆ. ಇಂದಿನಿಂದ ಬಿಜೆಪಿಯಿಂದ ಉತ್ತರ ಕೇಳುತ್ತಿದ್ದೇವೆ. ಪ್ರತಿಯೊಬ್ಬ ಕಾಂಗ್ರೆಸ್ ನಾಯಕರು ತಮ್ಮ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಹಾಗೂ ಮಾಧ್ಯಮದ ಮೂಲಕ ಪ್ರಶ್ನಿಸುವ ಕಾರ್ಯ ಆರಂಭಿಸುತ್ತಿದ್ದೇವೆ ಎಂದರು.ನೀವು ಜನರಿಗೆ ನೀಡಿದ ವಚನವನ್ನು ಉಳಿಸಿಕೊಂಡಿದ್ದೀರಾ?, ಇಲ್ಲವಾ? ಎಂಬ ಪ್ರಶ್ನೆಯನ್ನು ಕೇಳುತ್ತೇವೆ.
ನೀವು ಇದಕ್ಕೆ ಉತ್ತರ ನೀಡುವುದಲ್ಲದೆ ನಿಮ್ಮ ಆತ್ಮಸಾಕ್ಷಿಗೆ ಬೆಲೆ ಸಿಗುವಂತೆ ಮಾಡಿಕೊಳ್ಳಬೇಕು. ಬಿಜೆಪಿಯವರು ಸುಳ್ಳಿನ ಸರದಾರರು. 100 ಸಾರಿ ಒಂದು ಸುಳ್ಳನ್ನು ಹೇಳಿ ಸತ್ಯವಾಗಿಸುವ ಪ್ರಯತ್ನ ಮಾಡುತ್ತಿದ್ದೀರಿ. ನಿಮ್ಮ ಬಳಿ ಕೇಳಲು ನಮ್ಮ ಹತ್ತಿರ ಸಾಕಷ್ಟು ಪ್ರಶ್ನೆಗಳಿದ್ದು ಪ್ರತಿದಿನ ಒಂದೊಂದು ಪ್ರಶ್ನೆ ಕೇಳುತ್ತೇವೆ ಎಂದು ಡಿಕೆಶಿ ಹೇಳಿದರು.