ನಾಯಿ ಮೇಲೆ ಗುಂಡು ಪ್ರಕರಣದಲ್ಲಿ ರಾಜಕೀಯ ತಿರುವು | Janata news
ಕಾರವಾರ : ನಾನು ಯಾವುದೇ ನಾಯಿಗೆ ಗುಂಡು ಹೊಡೆದಿಲ್ಲ. ರಾಜಕೀಯವಾಗಿ ಬೆಳೆಯುತ್ತಿರುವ ನನ್ನನ್ನು ಸಹಿಸಲಾಗದವರು ಸುಳ್ಳು ಆರೋಪ ಮಾಡುತ್ತಿದ್ದಾರೆ. ಈ ಬಗ್ಗೆ ನಾನು ಎಲ್ಲಿ ಬೇಕಾದರು ಆಣೆ ಮಾಡಲು ಸಿದ್ದನಿದ್ದೇನೆ ಎಂದು ಕೋಡಿಭಾಗ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಸುನೀಲ್ ತಾಮ್ಸೆ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಫೇಸ್ಬುಕ್ನಲ್ಲಿ ಮೂರು ವರ್ಷಗಳ ಹಿಂದೆ ಹಾಕಿದ ಏರ್ಗನ್ ಹಿಡಿದ ಪೋಟೊವನ್ನು ಬಳಸಿಕೊಂಡು ನಾನು ಸಾಕು ನಾಯಿ ಕೊಂದಿರುವುದಾಗಿ ಸುಳ್ಳು ಆರೋಪ ಹೊರಸಿ ನನ್ನ ಹೆಸರು ಕೆಡಿಸಲಾಗುತ್ತಿದೆ. ಆದರೆ ಅಂದು ರಾತ್ರಿ ಸಂದೀಪ ಕಾಂಬ್ಳೆ ಹಾಗೂ ಆತನ ಸಹೋದರರು ನಮ್ಮ ಮನೆಗೆ ಬಂದು ನನ್ನನ್ನು ಹೊರಗೆಳೆದು ರಾಡ್ ಹಾಗೂ ಕಟ್ಟಿಗೆಯಿಂದ ಹಲ್ಲೆ ಮಾಡಿದ್ದಾರೆ. ಬಳಿಕ ನಾನು ಪೊಲೀಸ್ ಠಾಣೆಗೆ ಪೋನ್ ಮಾಡಿ ಜಿಲ್ಲಾಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದೇನೆ. ಆದರೆ ಅವರು ಮಾಡಿರುವ ಆರೋಪದಲ್ಲಿ ಯಾವುದೆ ಹುರುಳಿಲ್ಲ, ಎಂದು ಹೇಳಿದರು.
ನಾನು ರಾಜಕೀಯವಾಗಿ ಬೆಳೆಯುತ್ತಿರುವುದನ್ನು ಅವರಿಗೆ ಸಹಿಸಲಾಗುತ್ತಿಲ್ಲ. ಅಲ್ಲದೆ ಈ ಹಿಂದೆ ಕಾಳಿ ರಿವರ್ ಗಾರ್ಡನ್ ಬಳಿ ಗಣಪತಿ ವಿಸರ್ಜನೆಗೆ ಸಂಬಂಧಿಸಿದ ಗಲಾಟೆ ಬಳಿಕ ಹತಾಶರಾಗಿ ಸೇಡು ತಿರಿಸಿಕೊಳ್ಳಲು ಮುಂದಾಗಿದ್ದಾರೆ. ಇದೀಗ ನನಗೆ ಜೀವ ಬೇದರಿಕೆ ಹಾಕುತ್ತಿದ್ದಾರೆ, ಎಂದು ಆರೋಪಿಸಿದರು.
ನಮ್ಮ ಮನೆಯಲ್ಲಿಯೂ ನಾಯಿಗಳನ್ನು ಸಾಕಿದ್ದೇವೆ. ನಾನು ಪ್ರಾಣಿ ಪಕ್ಷಿಗಳ ಸೇವೆ ಮಾಡುತ್ತಿದ್ದೇನೆ. ಆದರೆ ನನ್ನ ವಿರುದ್ಧ ಈ ರೀತಿ ಸುಳ್ಳು ಆರೋಪ ಮಾಡುತ್ತಿದ್ದಾರೆ. ಮನೆಯಲ್ಲಿ ಯಾವುದೇ ಗನ್ ಇಲ್ಲ. ಪೊಲೀಸರು ಇದ್ದ ಗನ್ ಫ್ರೆಮ್ ಪಡೆದಿದ್ದು, ತನಿಖೆ ನಡೆಸುತ್ತಿದ್ದಾರೆ. ನಾನು ಕೂಡ ಕಾನೂನು ಹೋರಾಟ ನಡೆಸುತ್ತೇನೆ ಎಂದು ಹೇಳಿದರು. ಈ ವೇಳೆ ಎಬಿವಿಪಿ ನಗರ ಕಾರ್ಯದರ್ಶಿ ಭಾನುಕುಮಾರ್, ವಿನಾಯಕ ದುದಾಳಕರ್ ಇದ್ದರು.