ನಾನೇನು ರೇಪ್ ಮಾಡಿದ್ನಾ ಎಂದ ಲಿಂಬಾವಳಿ, ಮತ್ತೆ ನಾಲಿಗೆ ಹರಿಬಿಟ್ಟ ಶಾಸಕ ಅರವಿಂದ ಲಿಂಬಾವಳಿ | JANATA NEWS
ಬೆಂಗಳೂರು : ಮಹಿಳೆಗೆ ಶಾಸಕ ಅರವಿಂದ್ ಲಿಂಬಾವಳಿ ಆವಾಜ್ ಹಾಕಿದ ಪ್ರಕರಣ ಭಾರೀ ಚರ್ಚೆಗೆ ಗ್ರಾಸವಾಗುತ್ತಿದೆ. ಈ ಮಧ್ಯೆ ಲಿಂಬಾವಳಿ ಅವರು ನಾನು ರೇಪ್ ಮಾಡಿದ್ನಾ ಅಂತಾ ಹೇಳಿರುವುದು ವಿವಾದಕ್ಕೆ ಗುರಿಯಾಗಿದೆ.
ಕಾಂಗ್ರೆಸ್ನ ಮಹಿಳಾ ಸದಸ್ಯೆಯರು ಸೇರಿದಂತೆ ಪ್ರಮುಖ ರಾಜಕೀಯ ನಾಯಕರು ಲಿಂಬಾವಳಿ ಹೇಳಿಕೆಯನ್ನು ವಿರೋಧಿಸಿ, ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದೆ.
ಮಹಿಳೆಗೆ ಆವಾಜ್ ಹಾಕಿದ ಪ್ರಕರಣ ಸಂಬಂಧ ಶಾಸಕ ಅರವಿಂದ್ ಲಿಂಬಾವಳಿ ನಾನೇನು ರೇಪ್ ಮಾಡಿದ್ನಾ ಅಂತಾ ಹೇಳಿದ್ದಾರೆ. ರೇಪ್ ಅನ್ನೋದು ಬರೀ ನಾಲ್ಕು ಅಕ್ಷರಗಳ ಪದವಲ್ಲ. ಅದನ್ನು ಬಳಸುವುದರಿಂದ ತಂದೆ, ತಾಯಿ, ಅಣ್ಣ ತಮ್ಮಂದಿರಿಗೆ ನೋವಾಗುತ್ತದೆ. ಆ ಪದವನ್ನು ಅಷ್ಟು ಸುಲಭವಾಗಿ ಹೇಗೆ ಬಳಸುತ್ತೀರಿ ಎಂದು ಕೆಪಿಸಿಸಿ ಕಚೇರಿಯಲ್ಲಿ ಕರ್ನಾಟಕ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್ ಪ್ರಶ್ನಿಸಿದ್ದಾರೆ.
ಘಟನೆ?
ಇತ್ತಿಚೀಗೆ ಬೆಂಗಳೂರಲ್ಲಿ ಸುರಿದ ಧಾರಾಕಾರ ಮಳೆಗೆ ಹಲೆವಡೆ ಸಮಸ್ಯೆ ಉಂಟಾಗಿದೆ. ಮಹದೇವಪುರ ಕ್ಷೇತ್ರ ವ್ಯಾಪ್ತಿಯ ಹಲವೆಡೆ ಪ್ರವಾಹ ಸ್ಥಿತಿ ಉಂಟಾಗಿತ್ತು. ಗುರುವಾರ ನಲ್ಲೂರಹಳ್ಳಿಯ ವೈಟ್ಫೀಲ್ಡ್ ಕೋಡಿ ಸರ್ಕಲ್ ಬಳಿ ರಾಜಕಾಲುವೆ ಒತ್ತುವರಿ ಆಗಿರುವ ಸ್ಥಳಕ್ಕೆ ಶಾಸಕರು ಭೇಟಿ ನೀಡಿದ್ದರು. ಈ ವೇಳೆ ಸ್ಥಳೀಯ ಮಹಿಳೆಯೊಬ್ಬರು ಕೈಯಲ್ಲಿ ಕೆಲ ಪತ್ರಗಳನ್ನು ಹಿಡಿದುಕೊಂಡು ಆಗಮಿಸಿ ಅಳಲು ತೋಡಿಕೊಳ್ಳಲು ಯತ್ನಿಸುತ್ತಿದ್ದರು.
'ಸರ್.. ಸರ್..' ಎನ್ನುತ್ತಾ ಸಮಸ್ಯೆ ಹೇಳಿಕೊಳ್ಳಲು ಮುಂದಾದ ಮಹಿಳೆ ಅವಾಜ್ ಹಾಕಿದ ಶಾಸಕರು, ಆಕೆಯ ಕೈಯಿಂದ ದಾಖಲೆ ಪತ್ರ ಕಸಿದುಕೊಳ್ಳಲು ಯತ್ನಿಸಿದ್ದಲ್ಲದೆ, 'ಪೊಲೀಸ್ ಸ್ಟೇಷನ್ಗೆ ಕರೆದುಕೊಂಡು ಹೋಗಿ ಕೂರಿಸಿ' ಎಂದಿದ್ದಾರೆ.
ಒತ್ತುವರಿ ಮಾಡ್ಕೊಂಡು ನ್ಯಾಯ ಕೇಳೋಕೆ ಬರ್ತೀಯಾ? ನಿಂಗೆ ಮಾನ ಮರ್ಯಾದೆ ಇದ್ಯಾ? ನಾಚಿಕೆ ಆಗಲ್ವಾ? ಒತ್ತುವರಿ ಮಾಡಿಕೊಳ್ವಾಗ ಚಂದೋ. ನನಗೂ ಬೇರೆ ಭಾಷೆ ಬರುತ್ತೆ. ಎಂದು ಜೋರು ಧ್ವನಿಯಲ್ಲೇ ಶಾಸಕರು ದರ್ಪದಿಂದ ವರ್ತಿಸಿದ್ದಾರೆ. ಅಷ್ಟೇ ಅಲ್ಲ ಮಹಿಳೆಯ ಕೈಯಲ್ಲಿ ಕಾಗದ ಪತ್ರಗಳನ್ನು ಕಿತ್ತುಕೊಳ್ಳೋಕು ಯತ್ನಿಸಿದ್ದಾರೆ.
ಸರ್, ಮರ್ಯಾದೆಯಿಂದ ಮಾತಾಡಿ. ಹೆಣ್ಣುಮಕ್ಕಳು ಅನ್ನುವ ಗೌರವ ಇರಲಿ. ನೀವು ನನಗೂ ಎಂಎಲ್ಎ. ಎಲ್ಲರಿಗೂ ಶಾಸಕರು. ನಾನು ಒತ್ತುವರಿ ಮಾಡಿಕೊಂಡಿಲ್ಲ. ದಾಖಲೆ ಇದೆ ನೋಡಿ' ಎಂದು ಮಹಿಳೆ ಹೇಳಿದರೂ 'ಇವಳಿಗೆ ಮರ್ಯಾದೆ ಬೇರೆ ಕೇಡು ಒಳಗೆ ಹಾಕಿ' ಎಂದು ಪೊಲೀಸರಿಗೆ ಶಾಸಕರು ಸೂಚಿಸಿದ್ದಾರೆ. ಅಷ್ಟೇ ಅಲ್ಲ, ಆ ಪತ್ರವನ್ನೂ ಮಹಿಳೆ ಕೈಯಿಂದ ಕಿತ್ತುಕೊಂಡಿದ್ದಾರೆ.
ಈ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕರು ಶಾಸಕರ ನಡೆಯನ್ನ ಖಂಡಿಸಿದ್ದಾರೆ.