ಉಮೇಶ್ ಕತ್ತಿ ನಿಧನ ಹಿನ್ನಲೆ: ನಾಳೆ ನಡೆಯಬೇಕಿದ್ದ ಬಿಜೆಪಿಯ ಜನೋತ್ಸವ ಭಾನುವಾರಕ್ಕೆ ಮುಂದೂಡಿಕೆ | JANATA NEWS
ಬೆಂಗಳೂರು : ಸಚಿವ ಉಮೇಶ್ ಕತ್ತಿ ಅವರ ಮರಣದ ಹಿನ್ನಲೆಯಲ್ಲಿ ಬಿಜೆಪಿ ಪಕ್ಷ ಹಮ್ಮಿಕೊಂಡಿದ್ದ ಜನೋತ್ಸವ ಕಾರ್ಯಕ್ರಮವನ್ನು ಮತ್ತೆ ಮುಂದೂಡಿಕೆ ಮಾಡಲಾಗಿದೆ.
ನಾಳೆ ರಂದು ನಡೆಯಬೇಕಿದ್ದ ಬಿಜೆಪಿಯ ಜನೋತ್ಸವ ಕಾರ್ಯಕ್ರಮವನ್ನು ಭಾನುವಾರ ಕ್ಕೆ ಮುಂದೂಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಳಗಾವಿಯಲ್ಲಿ ಹೇಳಿದ್ದಾರೆ. ದೊಡ್ಡಬಳ್ಳಾಪುರ ಪಟ್ಟಣದಲ್ಲಿ ನಿಗದಿಯಾಗಿದ್ದ ಬಿಜೆಪಿಯ ಜನೋತ್ಸವ ಕಾರ್ಯಕ್ರಮವನ್ನು, ಅರಣ್ಯ ಸಚಿವ ಉಮೇಶ್ ಕತ್ತಿ ನಿಧನರಾದ ಹಿನ್ನೆಲೆ ಮುಂದೂಡಲಾಗಿದೆ ಎಂದು ಹೇಳಿದರು.
ಕತ್ತಿಯವರು ನಮ್ಮನ್ನೆಲ್ಲ ಅಗಲಿದ್ದಾರೆ. ಕತ್ತಿಯವರ ಕುಟುಂಬದ ದು:ಖದಲ್ಲಿ ನಾವೂ ಭಾಗಿಯಾಗಿದ್ದೇವೆ. ಬಹಳ ನೋವಿನ ಸಂಗತಿ ಇದು.ನಾವೆಲ್ಲ ಶೋಕದಲ್ಲಿದ್ದೇವೆ, ರಾಜ್ಯದಲ್ಲಿ ಶೋಕಾಚರಣೆ ಇದೆ. ಈ ಕಾರಣದಿಂದ ನಾಳೆ ಜನೋತ್ಸವ ನಡೆಸುವುದಿಲ್ಲ ಎಂದು ಹೇಳಿದ್ದಾರೆ.
ಆತ್ಮೀಯ ಸ್ನೇಹಿತರು ಹಾಗೂ ಸಂಪುಟಗ ಹಿರಿಯ ಸಹೋದ್ಯೋಗಿಗಳು ಆದ ಉಮೇಶ್ ಕತ್ತಿ ಅವರು ಅಕಾಲಿಕ ನಿಧನ ಅತೀವ ನೋವು ತಂದಿದೆ. ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ನಡೆದಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ. ಅಂತೆಯೇ ಮೂರು ದಿನ ಶೋಕಾಚರಣೆ ಘೋಷಣೆ ಮಾಡಲಾಗಿದ್ದು, ಈ ಸಂಬಂಧ ಎಲ್ಲ ರೀತಿಯ ಸೂಚನೆಗಳನ್ನು ಅಧಿಕಾರಿಗಳಿಗೆ ನೀಡಲಾಗಿದೆ ಎಂದು ಹೇಳಿದರು.
ಶೋಕಾಚರಣೆ ಹಿನ್ನೆಲೆ ಯಾವುದೇ ಸರ್ಕಾರ ಕಾರ್ಯಕ್ರಮವಿರುವುದಿಲ್ಲ. ತುರ್ತಾಗಿ ಪ್ರವಾಹ ನಿರ್ವಹಣೆ ಬಿಟ್ಟರೆ ಸರ್ಕಾರದ ಕಾರ್ಯಕ್ರಮವಿಲ್ಲ ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರಕ್ಕೆ ಒಂದು ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಬಿಜೆಪಿ ಜುಲೈ 28ರಂದು ದೊಡ್ಡಬಳ್ಳಾಪುರದಲ್ಲಿ ಜನೋತ್ಸವ ಆಯೋಜಿಸಲಾಗಿತ್ತು. ಆದರೆ ಆದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಯಾದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಜನೋತ್ಸವ ಕಾರ್ಯಕ್ರಮವನ್ನು ಸೆಪ್ಟೆಂಬರ್ 8 ರಂದು ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಈಗ ಅರಣ್ಯ ಸಚಿವ ಉಮೇಶ ಕತ್ತಿ ಹೃದಯಾಘಾತದಿಂದ ನಿಧನ ಹೊಂದಿದ ಹಿನ್ನೆಲೆ ಜನೋತ್ಸವ ಕಾರ್ಯಕ್ರಮವನ್ನು ಸೆ. 11 ಭಾನುವಾರಕ್ಕೆ ಮುಂದೂಡಲಾಗಿದೆ.