ದೋಸೆ ತಿಂದಿದ್ದಕ್ಕೆ ಟ್ರೋಲ್ ಮಾಡಿದ್ದು ಸರಿಯಲ್ಲ | JANATA NEWS
ಬೆಂಗಳೂರು : ಬೆಂಗಳೂರಿನಲ್ಲಿ ಪ್ರವಾಹದಿಂದ ಜನರು ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ದೋಸೆ ತಿಂದ ಪ್ರಸಂಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು.
ತೇಜಸ್ವಿ ಸೂರ್ಯ ಮಾತನಾಡಿ, ಪ್ರತಿಪಕ್ಷಗಳು ರಾಜಕೀಯ ಲಾಭಕ್ಕಾಗಿ ಬ್ರ್ಯಾಂಡ್ ಬೆಂಗಳೂರನ್ನು ಹಾನಿ ಮಾಡಲು ಪ್ರಯತ್ನಿಸುತ್ತಿವೆ. ನಗರದ ಕೆಲವು ಭಾಗಗಳು ಮಾತ್ರ ಮಳೆ ನೀರಿನಿಂದ ಉಂಟಾದ ಪ್ರವಾಹಕ್ಕೆ ಜಲಾವೃತವಾಗಿದೆ. ಬೆಳ್ಳಂದೂರಿನಲ್ಲಿ ಐಟಿ ಪಾರ್ಕ್, ಕೆರೆ ಒತ್ತುವರಿ ಮಾಡಿದವರು ಯಾರು? ಇದಕ್ಕೆ ಕಾಂಗ್ರೆಸ್ ಉತ್ತರಿಸಬೇಕು ಎಂದು ಪ್ರಶ್ನಿಸಿದರು.
ಪ್ರವಾಹದ ವೇಳೆ ದೋಸೆ ಪ್ರಚಾರ ಮಾಡಿದ್ದರ ವಿರುದ್ಧ ವ್ಯಕ್ತವಾದ ಟೀಕೆಗೆ ಉತ್ತರಿಸಿ, ಕಾಂಗ್ರೆಸ್ ನವರಿಗೆ ಮಾಡಲು ಬೇರೆ ಕೆಲಸ ಇಲ್ಲ. ಅನಾವಶ್ಯಕ ವಿಷಯಗಳನ್ನು ಮುಂದಿಟ್ಟುಕೊಂಡು ಟೀಕೆ ಮಾಡ್ತಾರೆ ಎಂದು ಕಿಡಿ ಕಾರಿದರು. ದೋಸೆ ಮಾತ್ರವಲ್ಲ, ಎಲೆಕ್ಟ್ರಿಕ್ ಅಂಗಡಿ ಉದ್ಘಾಟನೆಗೆ ಕರೆದರೂ ನಾನು ಹೋಗುತ್ತೇನೆ. ಜೊತೆಗೆ ಯಾವುದೇ ಅಂಗಡಿ ಉದ್ಘಾಟನೆಗೆ ಆಹ್ವಾನಿಸಿದರೂ ಜನಪ್ರತಿನಿಧಿಯಾಗಿ ಅಲ್ಲಿಗೆ ಹೋಗುವೆ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡರು.
ನಾನು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ. ನನ್ನ ಕ್ಷೇತ್ರದ ಬೊಮ್ಮನಹಳ್ಳಿಯಲ್ಲಿ ಎರಡು ಕಡೆ ಮಳೆಯಿಂದ ಸಮಸ್ಯೆ ಆಗಿದ್ದು ಬಿಟ್ಟರೆ ಉಳಿದ ಕಡೆ ಎಲ್ಲಿಯೂ ಮಳೆ ಹಾನಿ ಆಗಿಲ್ಲ. ನಾನು ಕೂಡ ಮಳೆ ಸಂತ್ರಸ್ತರ ನೆರವಿಗೆ ಧಾವಿಸಿದ್ದೇನೆ. ಮಳೆ ಪ್ರವಾಹ ನಿರ್ವಹಣೆಗೆ ಬೊಮ್ಮಾಯಿ ನೇತೃತ್ವದ ಸರ್ಕಾರ ಬದ್ದವಾಗಿದೆ ಎಂದರು.