ಸಿದ್ದರಾಮಯ್ಯ ಸರ್ಕಾರದ ಅವಧಿಯ ಹಗರಣಗಳನ್ನು ಬಚ್ಚಿಟ್ಟಿದ್ದಾರೆ, ಅದನ್ನು ಬಿಚ್ಚಿಡುವ ಕೆಲಸವನ್ನು ನಾವು ಮಾಡುತ್ತಿದ್ದೇವೆ | JANATA NEWS
ಮೈಸೂರು : ಸಿದ್ದರಾಮಯ್ಯ ಸರ್ಕಾರದ ಅವಧಿಯ ಹಗರಣಗಳನ್ನು ಬಚ್ಚಿಟ್ಟಿದ್ದಾರೆ. ಅದನ್ನು ಬಿಚ್ಚಿಡುವ ಕೆಲಸವನ್ನು ನಾವು ಮಾಡುತ್ತಿದ್ದೇವೆ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಗುಡುಗಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರ್ಕಾವತಿ ರೀ ಡೂ, ಹಾಸಿಗೆ ಹಗರಣ, ಇಂಧನ ಇಲಾಖೆ ಹಗರಣ ಇವೆಲ್ಲವನ್ನೂ ಸಿದ್ದರಾಮಯ್ಯ ಮುಚ್ಚಿಡುವ ಕೆಲಸ ಮಾಡಿದ್ದಾರೆ. ಇದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಬಚ್ಚಿಟ್ಟಿದ್ದರು. ಅದನ್ನೆಲ್ಲಾ ಹೊರಗೆ ತೆಗೆಯುವ ಕೆಲಸ ನಾವು ಮಾಡುತ್ತಿದ್ದೇವೆ. ನಾಲ್ಕು ವರ್ಷದಿಂದ ಅದನ್ನು ತೆಗೆಯುವ ಕೆಲಸ ಮಾಡಿದ್ದೇವೆ ಎಂದರು.
ನಮ್ಮ ಸರ್ಕಾರದ ಅವಧಿಯಲ್ಲಿ ಪಿಎಸ್ಐ ನೇಮಕಾತಿ ಅಕ್ರಮ ಹೊರಬಂತು. ಕೂಡಲೇ ನಾವು ತನಿಖೆಗೆ ಆದೇಶಿಸಿದೆವು. ತಪ್ಪಿತಸ್ಥರ ವಿರುದ್ಧ ಯಾವುದೇ ಮುಲಾಜಿಗೆ ಒಳಗಾಗದೆ ಕ್ರಮಕ್ಕೆ ಮುಂದಾಗಿದ್ದೇವೆ. ಮಾತೆತ್ತಿದರೆ ಸಮಾಜವಾದಿ ಎನ್ನುವ ಸಿದ್ದರಾಮಯ್ಯ ತಾವು ಸಿಎಂ ಆಗಿದ್ದಾಗ ಏಕೆ ನೈತಿಕತೆ ಪ್ರದರ್ಶಿಸಲಿಲ್ಲ? ಎಲ್ಲವನ್ನೂ ಮುಚ್ಚಿಟ್ಟರು ಎಂದು ನಳೀನ್ ಕುಮಾರ್ ಕಟೀಲ್ ಪ್ರಶ್ನಿಸಿದರು.
ಅಲ್ಲದೆ, ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಮಾಡುತ್ತಿರುವ ಟೀಕೆಗೆ ತಿರುಗೇಟು ನೀಡಿದ ಕಟೀಲ್, ನಿಮ್ಮ ಪಕ್ಷದ ರಾಷ್ಟ್ರೀಯ ನಾಯಕರು ಏಕೆ ಬೇಲ್ ಮೇಲೆ ಇದ್ದಾರೆ? ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಏಕೆ ಬೇಲ್ ಮೇಲೆ ಇದ್ದಾರೆ? ನಿಮ್ಮ ಪಕ್ಷದ ರಾಜ್ಯಾಧ್ಯಕ್ಷರು ಏಕೆ ಬೇಲ್ ಮೇಲೆ ಇದ್ದಾರೆ? ಅಂತಾ ನಳಿನ್ ಕುಮಾರ್ ಕಟೀಲ್ ಪ್ರಶ್ನಿಸಿದ್ರು.