ಕರ್ನಾಟಕದಲ್ಲಿ ಕನ್ನಡ ಕಡ್ಡಾಯ, ಶೀಘ್ರದಲ್ಲೇ ಕಾನೂನು ಜಾರಿ: ಸಿಎಂ ಬೊಮ್ಮಾಯಿ | JANATA NEWS
ಬೆಂಗಳೂರು : ಕನ್ನಡದ ರಕ್ಷಣೆಗೆ ರಾಜ್ಯ ಸರ್ಕಾರ ಬದ್ಧವಾಗಿದೆ. ಕರ್ನಾಟಕದಲ್ಲಿ ಕನ್ನಡಭಾಷೆಯನ್ನು ಕಡ್ಡಾಯಗೊಳಿಸಲು ಕಾಯ್ದೆಯನ್ನು ತರುತ್ತೇವೆ. ಈ ಸಂಬಂಧ ವಿಧೇಯಕವು ಪ್ರಸಕ್ತ ಅಧಿವೇಶನದಲ್ಲೇ ಮಂಡನೆಯಾಗಲಿದೆ. ಇದರಿಂದ ನಾಡು- ನುಡಿಗೆ ಕಾನೂನು ಬದ್ಧ ಸಂರಕ್ಷಣೆ ಸಿಗುವಂತಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಹಿಂದಿ ದಿವಸ್ ಹೆಸರಿನಲ್ಲಿ ಆ ಭಾಷೆಯನ್ನು ಹೇರಲು ಕೇಂದ್ರ ಸರ್ಕಾರ ಯತ್ನಿಸುತ್ತಿದೆ. ಇದನ್ನು ಖಂಡಿಸಿ ಕನ್ನಡ ಪರ ನಿರ್ಣಯವನ್ನು ಸದನ ಅಂಗೀಕರಿಸುವಂತೆ ಜೆಡಿಎಸ್ ಶಾಸಕರು ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಆಗ್ರಹಿಸಿದರು. ಈ ಹಂತದಲ್ಲಿ ಸರ್ಕಾರದ ನಿಲುವು ಘೋಷಿಸಿದ ಸಿಎಂ ಬೊಮ್ಮಾಯಿ, ಕನ್ನಡ ಭಾಷೆ- ನೆಲ- ಜಲ ವಿಷಯದಲ್ಲಿ ಯಾವುದೇ ರಾಜಿ ಇಲ್ಲ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಎಂದು ಪುನರುಚ್ಚರಿಸಿದರು.
ಕನ್ನಡ ರಕ್ಷಣೆಗೆ ಹಾಗೂ ಬೆಳೆಸುವುದಕ್ಕೆ ಸರ್ಕಾರ ಬದ್ಧವಾಗಿದೆ. ಇದುವರೆಗೆ ಕನ್ನಡ ಭಾಷೆಗಾಗಿ ಪ್ರಾಧಿಕಾರ ಇತ್ತು. ಕನ್ನಡವೇ ಕಡ್ಡಾಯ ಎಂಬ ಮಾತುಗಳನ್ನು ಸಾಕಷ್ಟು ಕೇಳಿಯಾಗಿತ್ತು. ಈಗ ನಾವು ಕನ್ನಡ ಭಾಷೆಯನ್ನು ರಾಜ್ಯದಲ್ಲಿ ಕಡ್ಡಾಯಗೊಳಿಸಲು ಕಾಯ್ದೆಯನ್ನು ತರುತ್ತಿದ್ದೇವೆ. ಕನ್ನಡಕ್ಕಾಗಿ ಕಾಯ್ದೆ ತರುತ್ತಿರುವುದು ಇದೇ ಮೊದಲು. ಅಲ್ಲದೆ ಇಂಜಿನಿಯರಿಂಗ್ನಲ್ಲೂ ಕನ್ನಡಕ್ಕೆ ಪ್ರೋತ್ಸಾಹ ನೀಡುತ್ತಿದ್ದೇವೆ ಎಂದು ಹೇಳಿದರು.
ಪ್ರಸಕ್ತ ಅಧಿವೇಶನದಲ್ಲಿ ಸರ್ಕಾರ ತರಲಿರುವ ಕರ್ನಾಟಕದಲ್ಲಿ ಕನ್ನಡ ಕಡ್ಡಾಯ ವಿಧೇಯಕ-2022ರ ಕರಡು ಬಹುತೇಕ ಸಿದ್ಧವಾಗಿದೆ. ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ನೇತೃತ್ವದಲ್ಲಿ ಈ ಕಾಯ್ದೆಗೆ ಅಂತಿಮ ರೂಪ ನೀಡಲಾಗಿದೆ. ಈ ಕಾಯ್ದೆ ಬಂದ ಮೇಲೆ ರಾಜ್ಯದ ಎಲ್ಲ ಅಂಗಗಳಲ್ಲಿಯೂ ಕನ್ನಡವೇ ಸಾರ್ವಭೌಮವಾಗಲಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.