ಮಾಂಸಾಹಾರ ಸೇವನೆ ತಪ್ಪು ಹಾದಿ ಹಿಡಿಯುವಂತೆ ಮಾಡುತ್ತದೆ: ವಿವಾದಾತ್ಮಕ ಹೇಳಿಕೆ ನೀಡಿದ ಮೋಹನ್ ಭಗವತ್ | JANATA NEWS
ನವದೆಹಲಿ : ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಗವತ್ ಮಾಂಸಾಹಾರಿಗಳ ಕುರಿತು ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ. ತಾಮಸಿ ಆಹಾರ ಸೇವನೆ ತಪ್ಪು ಹಾದಿ ಹಿಡಿಯುವಂತೆ ಮಾಡುತ್ತದೆ. ಮಾಂಸಾಹಾರ ಸೇವನೆ ಹಿಂಸಾತ್ಮಕ ಕೃತ್ಯಕ್ಕೆ ಪ್ರೇರೇಪಿಸುತ್ತದೆ ಎಂದು ಅವರು ಹೇಳಿದ್ದಾರೆ.
ಮೋಹನ್ ಭಾಗವತ್ ಅವರು “ಮಾಂಸಾಹಾರ ಸೇವಿಸುವವರು ಮಾಂಸಾಹಾರ ಸೇವಿಸುವಾಗ ಸ್ವಲ್ಪ ಶಿಸ್ತನ್ನು ಅನುಸರಿಸಲು ಪ್ರಯತ್ನಿಸಬೇಕು, ಇದರಿಂದ ಅವರ ಮನಸ್ಸು ಕೇಂದ್ರೀಕೃತವಾಗಿರುತ್ತದೆ” ಎಂದು ಅವರು ಗುರುವಾರದಂದು ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಭಾಗವತ್ ಅವರು ನಾಗ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದರು.
ಸಾಮಾನ್ಯವಾಗಿ ಮಾಂಸಾಹಾರಿ ಭಕ್ಷ್ಯಗಳನ್ನು ಹೊಂದಿರುವ 'ತಾಮಸಿಕ ಆಹಾರ' ವನ್ನು ಜನರು ಸೇವಿಸುವುದನ್ನು ತಪ್ಪಿಸಬೇಕು ಎಂದು ಆರ್ಎಸ್ಎಸ್ ಮುಖ್ಯಸ್ಥರು ಹೇಳಿದರು."ನೀವು ತಪ್ಪು ಆಹಾರವನ್ನು ಸೇವಿಸಿದರೆ, ನೀವು ತಪ್ಪು ಮಾರ್ಗದಲ್ಲಿ ಹೋಗುತ್ತೀರಿ ಎಂದು ಹೇಳಲಾಗುತ್ತದೆ. ಆದ್ದರಿಂದ, ಈ ಆಹಾರವನ್ನು ಸೇವಿಸಬೇಡಿ" ಎಂದು ಭಾಗವತ್ ಹೇಳಿದರು.
"ಪಾಶ್ಚಿಮಾತ್ಯ ದೇಶಗಳಲ್ಲಿ ಮಾಂಸಾಹಾರ ತಿನ್ನುವಂತೆ ನಮ್ಮ ದೇಶದಲ್ಲೂ ಮಾಂಸಾಹಾರ ಸೇವಿಸುತ್ತಾರೆ. ಎರಡಕ್ಕೂ ಹೋಲಿಸಿದರೆ ಭಾರತದಲ್ಲಿ ಮಾಂಸಾಹಾರ ಸೇವನೆ ಮಾಡುವವರು ಕೆಲವು ಕಟ್ಟುಪಾಡುಗಳನ್ನಾದರೂ ಪಾಲಿಸುತ್ತಾರೆ," ಎಂದು ಭಗವತ್ ಅಭಿಪ್ರಾಯ ಪಟ್ಟಿದ್ದಾರೆ.
"ಭಾರತದಲ್ಲಿ ಮಾಂಸಾಹಾರ ಸೇವನೆ ಮಾಡುವ ಜನ ಶ್ರಾವಣ ಮಾಸದಲ್ಲಿ ಸೇವಿಸುವುದಿಲ್ಲ. ಸೋಮವಾರ, ಮಂಗಳವಾರ, ಗುರುವಾರ ಅಥವಾ ಶನಿವಾರ ಸೇವಿಸುವುದಿಲ್ಲ. ಅವರೇ ಅವರ ಆಹಾರ ಪದ್ಧತಿಯ ಮೇಲೆ ನಿಯಮ ಮಾಡಿಕೊಂಡು ಹಿಡಿತ ಸಾಧಿಸಿದ್ದಾರೆ," ಎಂದು ಭಗವತ್ ಹೇಳಿದ್ದಾರೆ. ಇಡೀ ದೇಶ ಸದ್ಯ ನವರಾತ್ರಿ ಹಬ್ಬವನ್ನು ಆಚರಿಸುತ್ತಿದ್ದು, ಈ ಸಂದರ್ಭದಲ್ಲಿ ಮಾಂಸಾಹಾರವನ್ನು ಬಹುತೇಕ ಜನ ತಿನ್ನುವುದಿಲ್ಲ. ದಸರಾ ಸಂದರ್ಭದಲ್ಲಿ ಮಾಂಸಾಹಾರ ಸೇವನೆಯಿಂದ ದೂರ ಇರುವುದು ಈ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ ಎಂದಿದ್ದಾರೆ