ಜಂಬೂ ಸವಾರಿಯಲ್ಲಿ ಚಾಮರಾಜನಗರದ ಸ್ತಬ್ಧ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ | JANATA NEWS
ಮೈಸೂರು : ಮೈಸೂರಿನ ಐತಿಹಾಸಿಕ ಜಂಬೂ ಸವಾರಿಯಲ್ಲಿ ನಾನಾ ಇಲಾಖೆಗಳ ಹಾಗೂ ಜಿಲ್ಲೆಗಳ ಸ್ತಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಇರುತ್ತವೆ. ನಾಡು, ನುಡಿ, ಸಂಸ್ಕೃತಿ, ಸಾಂಸ್ಕೃತಿಕ ರೂಪಕಗಳನ್ನು ಬಿಂಬಿಸುವಂತಹ ಸ್ತಬ್ಧ ಚಿತ್ರಗಳ ಮೆರವಣಿಗೆಗೆ ಇಲ್ಲಿ ಅವಕಾಶ ಕಲ್ಪಿಸಲಾಗುತ್ತದೆ.
ಈ ಬಾರಿ ಪುನೀತ್ ರಾಜ್ ಕುಮಾರ್ ಕೂಡ ಸ್ತಬ್ಧ ಚಿತ್ರ ರೂಪದಲ್ಲಿ ಇರಲಿದ್ದಾರೆ. ಚೆಲುವ ಚಾಮರಾಜನಗರ ರಾಯಭಾರಿ ಹಾಗೂ ಚಾಮರಾಜನಗರದ ತವರಿನ ನಂಟು ಹೊಂದಿದ್ದ ದಿವಂಗತ ನಟ ಡಾ.ಪುನೀತ್ ರಾಜ್ಕುಮಾರ್ ಅವರಿಗೆ ಸ್ತಬ್ಧಚಿತ್ರದ ಮೂಲಕ ಗೌರವ ಸಲ್ಲಿಸಲು ಮುಂದಾಗಿದ್ದಾರೆ.
ಪುನೀತ್ ರಾಜ್ ಕುಮಾರ್ ಅಗಲಿಕೆ ಇದೇ ತಿಂಗಳು ಒಂದು ವರ್ಷ ಪೂರೈಸುತ್ತಿದೆ. ಈ ಹಿನ್ನೆಲೆಯಲ್ಲಿ ಇಂಥದ್ದೊಂದು ಗೌರವಕ್ಕೆ ಚಾಮರಾಜನಗರ ನಿರ್ಧಾರ ತಗೆದುಕೊಳ್ಳಲಾಗಿದೆ.
ಸ್ತಬ್ಧಚಿತ್ರದ ಮುಂಭಾಗ ದೊಡ್ಡ ಹುಲಿಯ ಮುಖ ಇದೆ. ಹಸಿರು ಆವರಿಸಿರುವ ಬೆಟ್ಟ, ಆನೆ ಸೇರಿದಂತೆ ಇತರ ಪ್ರಾಣಿಗಳ ಪ್ರತಿಕೃತಿಗಳು ಗಮನ ಸೆಳೆಯಲಿವೆ. ಮಧ್ಯದಲ್ಲಿ ಹುಲಿಯ ಮೇಲೆ ಕುಳಿತಿರುವ ಮಲೆ ಮಹದೇಶ್ವರ ಸ್ವಾಮಿಯ ಪ್ರತಿಕೃತಿ ಹಾಗೂ ಹಿಂಭಾಗದಲ್ಲಿ ಮಂದಸ್ಮಿತ ಪುನೀತ್ ರಾಜ್ಕುಮಾರ್ ಅವರ ದೊಡ್ಡ ಪ್ರತಿಕೃತಿ ಅಳವಡಿಸಲಾಗಿದೆ.
ಚಾಮರಾಜನಗರ ಜಿಲ್ಲಾ ದಸರಾದ ಪ್ರಯುಕ್ತ ನಗರದ ಜಿಲ್ಲಾಡಳಿತ ಭವನದಲ್ಲಿ ಆಯೋಜಿಸಿದ್ದ ಫಲಪುಷ್ಪ ಪ್ರದರ್ಶನ ನವರಾತ್ರಿ ಸಂಭ್ರಮಕ್ಕೆ ಪುನೀತ್ ರಾಜ್ಕುಮಾರ್ ಮತ್ತು ಮಹಾರಾಜ ಜಯಚಾಮರಾಜ ಒಡೆಯರ್ ಆಕರ್ಷಣೆಯ ಕೇಂದ್ರಬಿಂದು ಆಗಿದ್ದರು.