ಮೀಸಲಾತಿ ನೀಡದಿದ್ದರೆ 25 ಲಕ್ಷ ಪಂಚಮಸಾಲಿ ಲಿಂಗಾಯತರನ್ನು ಸೇರಿಸಿ ಹೋರಾಟ ನಡೆಸಲಾಗುವುದು: ಬಸವ ಮೃತ್ಯುಂಜಯ ಸ್ವಾಮೀಜಿ | JANATA NEWS
ಬೆಳಗಾವಿ : ವಿಧಾನಸೌಧದ ಮುಂದೆ 25 ಲಕ್ಷ ಪಂಚಮಸಾಲಿ ಲಿಂಗಾಯತರಿಂದ ಪ್ರತಿಭಟನೆ ನಡೆಸಲು ಮುಂದಾಗುತ್ತೇವೆ ಎಂದು ಬಸವ ಮೃತ್ಯುಂಜಯ ಸ್ವಾಮೀಜಿ ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಂಚಮಸಾಲಿ ಸಮುದಾಯದ ಮಕ್ಕಳ ಶಿಕ್ಷಣ ಹಾಗೂ ಯುವಜನರ ಉದ್ಯೋಗಕ್ಕಾಗಿ ಮೀಸಲಾತಿ ಹೋರಾಟ ಒಂದೇ ಮಾರ್ಗವಾಗಿ ಉಳಿದಿದೆ. ಪಂಚಮಸಾಲಿ, ಗೌಡ ಲಿಂಗಾಯತ, ಮಲೆಗೌಡ, ದೀಕ್ಷ ಲಿಂಗಾಯತರುಗಳಿಗೆ 2ಎ ಹಾಗೂ ಚತುರ್ಥ ಲಿಂಗಾಯತರು ಸೇರಿದಂತೆ ಲಿಂಗಾಯತ ಎಲ್ಲಾ ಒಳಪಂಗಡಗಳನ್ನು ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿಗೆ ಸೇರ್ಪಡೆಗೊಳಿಸುವಂತೆ ಹಕ್ಕೊತಾಯಿಸಿ ನಾವು ಪಂಚ ಹಂತದ ಚಳವಳಿ ಆರಂಭಿಸಿದ್ದು, ಕಡೆಯ ಹಂತದ ಹೋರಾಟ ಅಕ್ಟೋಬರ್ 21ರಂದು ಹುಕ್ಕೇರಿಯ ಬೈಪಾಸ್ ರಸ್ತೆ ಸಮೀಪ ಬೆಳಗ್ಗೆ 10 ಗಂಟೆಗೆ ನಡೆಯಲಿದೆ.
ಹುಕ್ಕೇರಿಯಲ್ಲಿ ಅ.21 ರಂದು ಲಿಂಗಾಯಿತ ಪಂಚಮಸಾಲಿ ಬೃಹತ್ ಸಮಾವೇಶ ನಡೆಯಲ್ಲಿದ್ದು ಅಷ್ಟರೊಳಗೆ ಸರ್ಕಾರ ಸರ್ವ ಪಕ್ಷಗಳ ಸಭೆ ಕರೆದು ಲಿಂಗಾಯತ ಪಂಚಮಸಾಲಿಗೆ 2ಎ ಮೀಸಲಾತಿ ಸಂಬಂಧ ಅಂತಿಮ ತೀರ್ಮಾನ ಕೈಗೊಳ್ಳಬೇಕು. ಇಲ್ಲದೆ ಇದ್ದರೆ ಹುಕ್ಕೇರಿ ಸಮಾವೇಶದಲ್ಲಿ ವಿಧಾನಸೌಧ ಮುತ್ತಿಗೆಗೆ ಕರೆ ನೀಡುವುದಾಗಿ ಪಂಚಮಸಾಲಿ ಮಠದ ಪೀಠಾಧ್ಯಕ್ಷ ಬಸವ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಸಿದ್ದಾರೆ
2ಎ ಮೀಸಲಾತಿಗೆ ಕಳೆದ 2 ವರ್ಷಗಳಿಂದ ನಿರಂತರ ಹೋರಾಟ ಮಾಡುತ್ತಿದ್ದೇವೆ. ಈವರೆಗೆ ನಮ್ಮ ಹೋರಾಟಕ್ಕೆ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಸೆ.15ರೊಳಗೆ ಮೀಸಲಾತಿ ಘೋಷಿಸಲಾಗುತ್ತೆ ಅಂತ ಬಿಎಸ್ವೈ ಹೇಳಿದ್ರು. ಆದ್ರೆ ಈ ಸಮಯದವರೆಗೆ ಯಡಿಯೂರಪ್ಪನವರು ಇರಲಿಲ್ಲ. ಅದಾದ ಬಳಿಕ ಬೊಮ್ಮಾಯಿಯವರಿಗೆ ಹಲವು ಭಾರೀ ಮನವಿ ನೀಡಿದ್ದೇವೆ. ಆದರೆ ಯಾವುದೇ ಪ್ರತಿಕ್ರಿಯೆ ಬೊಮ್ಮಾಯಿ ಸರ್ಕಾರದಿಂದ ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿಧಾನಸೌಧ ಮುಂಭಾಗ ಬೃಹತ್ ಪ್ರತಿಭಟನೆ ಕೈಗೊಳ್ಳುವ ಸಂಬಂಧ ಹುಕ್ಕೇರಿಯ ಸಮಾವೇಶದಲ್ಲಿ ತೀರ್ಮಾನ ಕೈಗೊಳ್ಳುತ್ತೇವೆ. 2ಎ ಮೀಸಲಾತಿ ನೀಡದಿದ್ದರೆ 25 ಲಕ್ಷ ಪಂಚಮಸಾಲಿ ಸಮುದಾಯದ ಜನ ವಿಧಾನಸೌಧದ ಮುಂದೆ ಧರಣಿ ಕೂರಲಾಗುವುದು. ಅಂತಿಮ ಹೋರಾಟವಾಗಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ. ಹೋರಾಟದ ದಿನಾಂಕವನ್ನ ಅ.21ರಂದೇ ತಿಳಿಸುತ್ತೇವೆ ಎಂದರು.
ಮೀಸಲಾತಿ ಕೊಡುತ್ತೀರಾ ಅಥವಾ ಇಲ್ಲವೊ ಎಂಬುದನ್ನು ಸಿಎಂ ಸ್ಪಷ್ಟ ನಿಲುವು ಪಡಿಸಬೇಕು ಎಂದು ಆಗ್ರಹಿಸಿದರು. ಬೇರೆ ಸಮುದಾಯದ ಮೀಸಲಾತಿ ಕಿತ್ತು ಕೊಡಿ ಎಂದು ನಾವು ಕೇಳುತ್ತಿಲ್ಲ. ನಮ್ಮಬೇಡಿಕೆ ಸ್ಪಷ್ಟವಾಗಿದೆ. ಬೇರೆ ಸಮುದಾಯದ ಮೀಸಲಾತಿ ಬಗ್ಗೆ ಮಾತನಾಡಲ್ಲ. ಎಸ್ಸಿ ಎಸ್ಟಿ ಗೆಮೀಸಲಾತಿ ಹೆಚ್ಚಳ ನೀಡಿದ್ದನ್ನು ಸ್ವಾಗತಿಸುತ್ತೇನೆ ಎಂದು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.