ಭಾರತ್ ಜೋಡೋ ಯಾತ್ರೆಯಲ್ಲಿ ಐವರು ಕಾರ್ಯಕರ್ತರಿಗೆ ಕರೆಂಟ್ ಶಾಕ್, ಪರಿಹಾರ ಘೋಷಿಸಿದ ರಾಹುಲ್ | JANATA NEWS
ಬಳ್ಳಾರಿ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ವೇಳೆ ಸಂಭವಿಸಿದ ವಿದ್ಯುತ್ ಅವಘಡದಲ್ಲಿ ಐದು ಮಂದಿಗೆ ಗಾಯಗಳಾಗಿದ್ದು, ಅವರನ್ನು ಮೋಕಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ.
ಮೋಕಾ ಗ್ರಾಮದ ಡೊಡ್ಡ ಮೋರಿ ಬಳಿ ಈ ಘಟನೆ ನಡೆಯಿತು. ಯಾತ್ರಿಯೊಬ್ಬರು ತಮ್ಮ ಕೈಯಲ್ಲಿ ಐರನ್ ರಾಡ್ ಹೊಂದಿದ್ದ ಕಾಂಗ್ರೆಸ್ ಧ್ವಜವನ್ನು ಹಿಡಿದಿದ್ದರು. ಕಬ್ಬಿಣದ ಪೈಪ್ನಲ್ಲಿ ಬಾವುಟ ಹಿಡಿದು ಹೋಗುವಾಗ ಕಬ್ಬಿಣದ ಪೈಪ್ಗೆ ವಿದ್ಯುತ್ ತಂತಿ ತಗುಲಿ ಐವರು ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆಂಟ್ ಶಾಕ್ ಹೊಡೆದಿದೆ. ಆಯಂಬುಲೆನ್ಸ್ನಲ್ಲಿ ಮೋಕಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯಕರ್ತರನ್ನು ಶಿಫ್ಟ್ ಮಾಡಲಾಗಿದೆ.
ಮೋಕಾ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಣ್ಣ, ದೊಡ್ಡಪ್ಪ ಹಾಗೂ ಸಂತೋಷ್ ಸೇರಿದಂತೆ ಐದು ಜನರಿಗೆ ವಿದ್ಯುತ್ ಶಾಕ್ ಹೊಡೆದಿದೆ. ವಿದ್ಯುತ್ ಪ್ರವಹಿಸಿ ಗಾಯಗೊಂಡಿದ್ದ ಕಾರ್ಯಕರ್ತರಿಗೆ ರಾಹುಲ್ ಗಾಂಧಿ ಪರಿಹಾರ ಘೋಷಿಸಿದ್ದಾರೆ. ಆಸ್ಪತ್ರೆ ಭೇಟಿ ನೀಡಿದ್ದ ರಾಹುಲ್ ಗಾಂಧಿ ಗಾಯಾಳುಗಳ ಆರೋಗ್ಯ ವಿಚಾರಿಸಿ ಐವರು ಕಾರ್ಯಕರ್ತರಿಗೆ ತಲಾ 1 ಲಕ್ಷ ಪರಿಹಾರ ಘೋಷಿಸಿದ್ದಾರೆ.