ಐದು ವರ್ಷ ಪ್ರೀತಿಸಿ, ವಿವಾಹವಾದ ನಾಲ್ಕು ತಿಂಗಳಲ್ಲೇ ನೇಣಿಗೆ ಶರಣಾದ ನವವಿವಾಹಿತೆ | JANATA NEWS
ಬೆಂಗಳೂರು : ಐದು ವರ್ಷಗಳಿಂದ ಪ್ರೀತಿಸಿ ನಾಲ್ಕು ತಿಂಗಳ ಹಿಂದಷ್ಟೇ ಮದ್ವೆಯಾದ ನವವಿವಾಹಿತೆಯೊಬ್ಬರ ಮೃತದೇಹ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಶನಿವಾರ ಪತ್ತೆಯಾಗಿದೆ.
ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಿಹಾರಿಕಾ ಎಂಬ ಗೃಹಿಣಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ. ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಗೃಹಿಣಿಯ ಮೃತದೇಹ ಪತ್ತೆಯಾಗಿದ್ದು, ಆಕೆಯ ಪತಿ ಕಾರ್ತಿಕ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಮಗಳು ಆತ್ಮಹತ್ಯೆ ಮಾಡಿಕೊಂಡಿಲ್ಲ, ಆಕೆಯ ಗಂಡ ಕಾರ್ತಿಕ್ ಸಾಯಿಸಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ.
ನಿಹಾರಿಕಾ ಹಾಗೂ ಕಾರ್ತಿಕ್ ಐದು ವರ್ಷಗಳಿಂದ ಪ್ರೀತಿಸಿ ಕಳೆದ ಜೂನ್ನಲ್ಲಿ ಮದುವೆಯಾಗಿದ್ದರು. ಖಾಸಗಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ನಿಹಾರಿಕಾ, ಗಂಡ ಕಾರ್ತಿಕ್ ಕಿರುಕುಳ ತಾಳಲಾರದೆ ಅಕ್ಕನ ಮನೆ ಸೇರಿದ್ದಳು. ಹಿರಿಯರ ಸಮ್ಮುಖದಲ್ಲಿ ಬುದ್ದಿ ಹೇಳಿ, ರಾಜೀ ಮಾತುಕತೆಗಳು ಸಹ ನಡೆದಿತ್ತು. ಕಳೆದ ಎರಡು ದಿನಗಳ ಹಿಂದಷ್ಟೇ ನಿನ್ನನ್ನ ಚೆನ್ನಾಗಿ ನೋಡಿಕೊಳ್ತೇನೆಂದು ಕಾರ್ತಿಕ್ ಮನೆಗೆ ಕರೆದುಕೊಂಡು ಬಂದಿದ್ದ ಎನ್ನಲಾಗಿದೆ.
ಇತ್ತೀಚೆಗೆ ಶಾಲೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅನುಮತಿ ವಿಚಾರವಾಗಿ ಮತ್ತೆ ಜಗಳವಾಗಿದೆ. ನಿಹಾರಿಕಾಳನ್ನ ಕಾರ್ತಿಕ್ ನಿಂದನೆ ಮಾಡಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದು ಆಕೆಯ ಗಂಡ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿ ಮೃತಳ ಕುಟುಂಬಸ್ಥರು ಪುಟ್ಟೇನಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಎಲ್ಲ ನೋವುಗಳ ಮಧ್ಯೆಯೂ ನಿಹಾರಿಕಾ ಪೋಷಕರು ನಿಹಾರಿಕಾಗೆ ಕಣ್ಣುಗಳನ್ನ ದಾನ ಮಾಡಬೇಕು ಎಂಬ ಆಸೆ ಇತ್ತು. ಹೀಗಾಗಿ ಮಗಳ ಆಸೆಯನ್ನ ಈಡೇರಿಸಲು ನಿರ್ಧರಿಸಿದ್ದು, ಅದರಂತೆ ಕಣ್ಣುಗಳ ದಾನಕ್ಕೆ ಆಕೆಯ ಪೋಷಕರು ನಿರ್ಧರಿಸಿದ್ದಾರೆ. ಈ ಮೂಲಕ ಸಾವಿನಲ್ಲೂ ಸಾರ್ಥಕತೆಯನ್ನ ಮೆರೆದಿದ್ದಾರೆ.