ದೀಪಾವಳಿ ಹಬ್ಬಕ್ಕೆ ಊರಿಗೆ ಹೊರಟಿದ್ದವ ರಸ್ತೆ ಗುಂಡಿಗೆ ಬಲಿ | JANATA NEWS
ಬೆಂಗಳೂರು : ದೀಪಾವಳಿ ಹಿನ್ನಲೆ ಕೆಲಸ ಮುಗಿಸಿ ಊರಿನತ್ತ ಬೈಕ್ ತಗೆದುಕೊಂಡು ಹೊರಟಿದ್ದ ಕೂಲಿ ಕಾರ್ಮಿಕ, ಗುಂಡಿಯೊಂದನ್ನ ತಪ್ಪಿಸಲು ಹೋಗಿ ಕ್ಯಾಂಟರ್ ಲಾರಿ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ನಡೆದಿದೆ.
ಪಾವಗಡ ಮೂಲದ ತಿಪ್ಪೇಸ್ವಾಮಿ (45) ರಸ್ತೆಗುಂಡಿಗೆ ಬಲಿಯಾದ ಬೈಕ್ ಸವಾರ. ತುಮಕೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48 ರಲ್ಲಿನ ಸರ್ವಿಸ್ ರಸ್ತೆ ಗುಂಡಿಯನ್ನ ತಪ್ಪಿಸಲು ಹೋಗಿ ಬೈಕ್ ಸವಾರ 45 ವರ್ಷದ ತಿಪ್ಪೆಸ್ವಾಮಿ ಲಾರಿ ಚಕ್ರಕ್ಕೆ ಸಿಲುಕಿ ದಾರೂಣ ಸಾವು ಕಂಡಿದ್ದಾನೆ.
ಬೆಂಗಳೂರು ಉತ್ತರ ತಾಲೂಕಿನ ಮಾದಾವರದಲ್ಲಿ ಕೂಲಿ ಮಾಡಿ ವಾಸಿಸುತ್ತಿದ್ದರು. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಊರು ಪಾವಗಡಕ್ಕೆ ಬೈಕ್ ನಲ್ಲಿ ತೆರಳುತ್ತಿದ್ದರು. ರಸ್ತೆಯಲ್ಲಿನ ಹೊಂಡ ತಪ್ಪಿಸಲು ಹೋಗಿ ಬೈಕ್ ಸಮೇತ ಕೆಳಗೆ ಬಿದ್ದಿದ್ದಾನೆ. ಪರಿಣಾಮ ಈತನ ಮೇಲೆಯೇ ಕಂಟೇನರ್ ಲಾರಿಯೊಂದು ಸಾಗಿಹೋಗಿದೆ. ಅಪಘಾತದ ತೀವ್ರತೆಗೆ ತಿಪ್ಪೇಸ್ವಾಮಿ ಧರಿಸಿದ್ದ ಹೆಲ್ಮೆಟ್ ಪುಡಿಪುಡಿಯಾಗಿದ್ದು, ಈತ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.