ಜೆಡಿಎಸ್ ಪಂಚರತ್ನ ರಥಯಾತ್ರೆ; ಬೆಂಗಳೂರಿನಲ್ಲಿ ಚಾಲನೆ ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ | JANATA NEWS
ಬೆಂಗಳೂರು : ಜೆಡಿಎಸ್ ನ ಮಹತ್ವಾಕಾಂಕ್ಷೆಯ ಪಂಚರತ್ನ ರಥಯಾತ್ರೆಗೆ ಗುರುವಾರ ಬಸವನಗುಡಿಯ ಶ್ರೀ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಅಭಿಷೇಕ, ಪೂಜೆ ಮಾಡಿಸುವ ಮೂಲಕ ಸಾಂಕೇತಿಕವಾಗಿ ಚಾಲನೆ ನೀಡಲಾಯಿತು.
ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಮಾಜಿ ಸಿಎಂ ಎಚ್ಡಿಕೆ, ಗವಿಗಂಗಾಧರಸ್ವಾಮಿ ದೇವಸ್ಥಾನದಲ್ಲಿ ಪೂಜೆ ಮಾಡಿ ಪಂಚರತ್ನ ರಥಯಾತ್ರೆಗೆ ಚಾಲನೆ ನೀಡಿದ್ದೇವೆ. 1994ರಲ್ಲಿ ದೇವೆಗೌಡರ ನೇತೃತ್ವದಲ್ಲಿ ನಡೆದ ಚುನಾವಣೆಗೂ ಮೊದಲು ಇಲ್ಲೇ ಪೂಜೆ ನೆರವೇರಿಸಲಾಗಿತ್ತು. ನವೆಂಬರ್ 1ರಿಂದ ಪಂಚರತ್ನ ರಥಯಾತ್ರೆ ಆರಂಭ ಮಾಡಲು ಚಿಂತಿಸಿದ್ದೆ. ಆದರೆ, ಇಂದು ಪ್ರಶಸ್ತವಾದ ದಿನವಾದ್ದರಿಂದ ಇಂದೇ ಚಾಲನೆ ನೀಡಿದ್ದೇವೇ ಎಂದರು.
ನವೆಂಬರ್ 1ರಂದು ಮುಳಬಾಗಿಲಿನ ಕುರುಡುಮಲೆಯಲ್ಲಿ ಪಂಚರತ್ನ ರಥಯಾತ್ರೆ ಪೂರ್ಣ ಪ್ರಮಾಣದಲ್ಲಿ ಶುರುವಾಗಲಿದೆ. ಅಂದು ಅಲ್ಲಿ ದೊಡ್ಡ ಸಮಾವೇಶ ನಡೆಯಲಿದೆ. ಅದಕ್ಕೂ ಮುನ್ನ, ಅಂದರೆ ನಾಳೆ ಅಣ್ಣಮ್ಮ ದೇವಸ್ಥಾನದಲ್ಲಿ ಪೂಜೆ ಮಾಡಲಾಗುತ್ತಿದೆ. ಗಾಂಧಿನಗರದಲ್ಲಿ ಸಾಂಕೇತಿಕವಾಗಿ ರಥಯಾತ್ರೆ ಮಾಡಲಾಗುತ್ತದೆ. ಮೊದಲ ಹಂತದಲ್ಲಿ 35 ದಿನಗಳ ಕಾಲ ರಥಯಾತ್ರೆ ಮಾಡಲಾಗುತ್ತದೆ ಎಂದು ಹೇಳಿದರು.
ಇಡೀ ರಾಜ್ಯದ ಅಭಿವೃದ್ಧಿಗೆ ಪೂರಕವಾಗಿ ಕಾರ್ಯಕ್ರಮ ನೀಡಲಾಗುತ್ತಿದೆ. ನೆಮ್ಮದಿಯ ಬದುಕನ್ನು ನೀಡಲು ಬುನಾದಿ ಈ ಕಾರ್ಯಕ್ರಮ. ಈಗಾಗಲೇ ಸಂಭವನೀಯ ಅಭ್ಯರ್ಥಿಗಳು ಮೈಸೂರಿನಲ್ಲಿ ಚಾಮುಂಡೇಶ್ವರಿ ತಾಯಿಯ ದರ್ಶನ ಮಾಡಿದ್ದಾರೆ.
ನಮ್ಮ ಕುಟುಂಬವನ್ನು ಮತ್ತು ತಂದೆಯವರನ್ನು ಕಾಪಾಡಿದ್ದೆ ಶಿವ. ದೇವೇಗೌಡರಿಗೆ ರಕ್ಷಣೆ ಕೊಟ್ಟಿದ್ದು, ಅನಾರೋಗ್ಯಕ್ಕೆ ಒಳಗಾದಗಲೂ ಮರು ಜೀವ ಕೊಟ್ಟಿದ್ದು ಶಿವ. ಹಾಗಾಗಿ, ಶಿವನಿಗೆ ಪೂಜೆ ಸಲ್ಲಿಸಿದ್ದೇನೆ ಎಂದರು.
ರಾಷ್ಟ್ರೀಯ ಪಕ್ಷಗಳು ಜನರ ಬಗ್ಗೆ ತಲೆ ಕಡೆಸಿಕೊಂಡಿಲ್ಲ. ನಾನು ಹಿಂದೆ ರೈತರ ಸಾಲ ಮನ್ನ ಮಾಡಿದ್ದೆ. ಆಗಲೂ ರಾಷ್ಟ್ರೀಯ ಪಕ್ಷಗಳು ಲಘುವಾಗಿ ಮಾತನಾಡಿದ್ದವು. ಕಾಂಗ್ರೆಸ್ ನಾಯಕರಿಗೆ ಈಗ ಅಪ್ಪರ್ ಭದ್ರ ಬಗ್ಗೆ ಕಾಳಜಿ ಬಂದಿದೆ. ಐದು ವರ್ಷ ಸರ್ಕಾರ ಇದ್ದಾಗ ಏನು ಮಾಡಿದ್ರು. ಈಗ ಜನರಿಗೆ ನೀರು ಕೊಡ್ತಾರಾ ಇವರು ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಇದೇ ಸಂದರ್ಭದಲ್ಲಿ ಭದ್ರಾ ಮೇಲ್ದಂಡೆ, ಮಹದಾಯಿ ಯೋಜನೆಗಾಗಿ ಕಾಂಗ್ರೆಸ್ನಿಂದ ಟ್ರ್ಯಾಕ್ಟರ್ ರ್ಯಾಲಿ ವಿಚಾರವಾಗಿ ಪ್ರತಿಕ್ರಿಯಿಸಿ, ಐದು ವರ್ಷ ನಿಮ್ಮ ಕೈಯಲ್ಲೇ ಅಧಿಕಾರ ಇತ್ತು. ಆ ಐದು ವರ್ಷಗಳಲ್ಲಿ ಈ ಯೋಜನೆಗಳಿಗೆ ನೀವು ಕೊಟ್ಟಿದದ್ದೇನು? ಈಗ ಜ್ಞಾನೋದಯ ಆಯ್ತಾ ನಿಮಗೆ ಎಂದು ಎಚ್ಡಿಕೆ ಪ್ರಶ್ನಿಸಿದರು.
ಬೇರೆ ಪಕ್ಷದ ಪಾದಯಾತ್ರೆ ಬಗ್ಗೆ ಭಯ ಇಲ್ಲ. ಇವರ ಪಾದಯಾತ್ರೆ ನೋಡುತ್ತಿದ್ದೇವೆ. ಕಾಂಗ್ರೆಸ್ ನಾಯಕರ ಈ ರೀತಿ ಕಾರ್ಯಕ್ರಮ ಐದು ವರ್ಷ ಇದ್ದಾಗ ಮಾಡದೇ ಇದ್ದವರು ಈಗ ಮಾಡುವುದರಿಂದ ಏನು ಮಾಡೋದು. ಇದು ಚುನಾವಣೆ ಸ್ಟಂಟ್ ಅಷ್ಟೆ ಎಂದರು