ಅಪ್ಪು ಪ್ರಥಮ ವರ್ಷದ ಪುಣ್ಯತಿಥಿ : ಕಂಠೀರವ ಸ್ಟುಡಿಯೊದಲ್ಲಿ ಜನಸಾಗರ | JANATA NEWS
ಬೆಂಗಳೂರು : ಗಡಿ ಮಿತಿಯಿಲ್ಲದ ಕೋಟ್ಯಂತರ ಅಭಿಮಾನಿಗಳ ನೆಚ್ಚಿನ ಮನೆಮಗನಾಗಿದ್ದ "ಅಪ್ಪು" ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅನಿರೀಕ್ಷಿತವಾಗಿ ಈ ಲೋಕತ್ಯಜಿಸಿ ಇಂದು ಅಕ್ಟೋಬರ್ 29ಕ್ಕೆ ಒಂದು ವರ್ಷ. ಪ್ರಥಮ ವರ್ಷದ ಪುಣ್ಯತಿಥಿ ಹಿನ್ನೆಲೆಯಲ್ಲಿ ಇಂದು ಮುಂಜಾನೆ ಪುನೀತ್ ಸಮಾಧಿ ಸ್ಥಳ ಬೆಂಗಳೂರಿನ ಕಂಠೀರವ ಸ್ಟುಡಿಯೊದಲ್ಲಿ ಅವರ ಧರ್ಮಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್, ಮಗಳು ಹಾಗೂ ಡಾ.ರಾಜ್ ಕುಟುಂಬಸ್ಥರು ಪೂಜೆ, ಊಟ ಬಡಿಸುವ ಶಾಸ್ತ್ರ ನೆರವೇರಿಸಿದ್ದಾರೆ.
ಪುನೀತ್ ಅವರ ಪುಣ್ಯಸ್ಮರಣೆ ಅಂಗವಾಗಿ ರಾಜ್ಯದ ವಿವಿಧ ಕಡೆ ಅನ್ನದಾನ, ರಕ್ತದಾನ ಏರ್ಪಡಿಸಲಾಗಿತ್ತು. ಅಪ್ಪು ತಮ್ಮ ಅಭಿಮಾನಿಗಳನ್ನು ಆಗಲಿ ಒಂದು ವರ್ಷವಾದರೂ ರಾಜ್ಯ, ನೆರೆರಾಜ್ಯದ ಜನತೆಗೆ ದುಃಖ, ಕಣ್ಣೀರು ಮಾತ್ರ ಕಡಿಮೆಯಾಗಿಲ್ಲ. ಕಳೆದ ಒಂದು ವರ್ಷದಿಂದ ಕಣ್ಣೀರಿನಲ್ಲಿಯೇ ಸಾಗುತ್ತಿದ್ದಾರೆ. ನಟನೆಗಿಂತ ಹೆಚ್ಚಾಗಿ ಪುನೀತ್ ತಮ್ಮ ನಡವಳಿಕೆ ಹಾಗೂ ಸಾಮಾಜಿಕ ಕಳಕಳಿಯಿಂದ ಜನತೆಗೆ ತುಂಬಾ ಹತ್ತಿರವಾಗಿದ್ದರು.
ಇಂದು ಮುಂಜಾನೆ ಕಂಠೀರವ ಸ್ಟುಡಿಯೊ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಮೊದಲು ಕೇವಲ ಕುಟುಂಬಸ್ಥರು ಅಪ್ಪುಗೆ ಇಷ್ಟವಾದ ತಿಂಡಿ, ತಿನಿಸುಗಳನ್ನು ಇಟ್ಟು ಸಮಾಧಿ ಮುಂದೆ ಪೂಜೆ ಮಾಡಿದ್ದಾರೆ. ಇಂದು ಪುಣ್ಯಸ್ಥಳಕ್ಕೆ ಜನಸಾಗರವೇ ಹರಿದುಬಂದಿದ್ದು ಪುಣ್ಯತಿಥಿಗೆ ಆಗಮಿಸುವವರಿಗೆ ಉಪಹಾರ, ಊಟ, ನೀರಿನ ವ್ಯವಸ್ಥೆ ಏರ್ಪಡಿಸಲಾಗಿತ್ತು.
ಅಪ್ಪು ಮೊದಲ ವರ್ಷದ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಕಂಠೀರವ ಸ್ಟುಡಿಯೊ ಬಳಿ ಇಂದು ದಿನವಿಡೀ ಗೀತ ನಮನ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಸೇರಿದಂತೆ ಅನೇಕ ಕನ್ನಡ ಚಿತ್ರರಂಗದ ಕಲಾವಿದರು, ಅಪ್ಪು ಅಭಿಮಾನಿಗಳು ಇದರಲ್ಲಿ ಭಾಗಿಯಾಗುತ್ತಿದ್ದಾರೆ. ಸಾಧುಕೋಕಿಲ ನೇತೃತ್ವದಲ್ಲಿ 100ಕ್ಕೂ ಹೆಚ್ಚು ಕಲಾವಿದರು ಭಾಗಿಯಾಗಿದ್ದಾರೆ.
ಇತ್ತ ಪುನೀತ್ ನಿವಾಸವಿರುವ ಬೆಂಗಳೂರಿನ ಸದಾಶಿವನಗರದಲ್ಲಿ ಪೆಂಡಾಲ್ ಹಾಕಲಾಗಿದ್ದು ಅಲ್ಲಿ ಕೂಡ ಆಗಮಿಸುವವರಿಗೆ ಊಟ-ಉಪಾಹಾರ ವ್ಯವಸ್ಥೆ ಮಾಡಲಾಗಿದೆ. ಇನ್ನು ಡಾ.ರಾಜ್ ಕುಮಾರ್ ಕುಟುಂಬದ ಕೂಸು ಮೈಸೂರಿನ ಶಕ್ತಿದಾಮದ ಮಕ್ಕಳು ಅಪ್ಪು ಪುಣ್ಯಸ್ಮರಣೆ ಅಂಗವಾಗಿ ಕಾರ್ಯಕ್ರಮ ಏರ್ಪಡಿಸಲಿದ್ದಾರೆ. ಮೈಸೂರಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಗಣ್ಯರಿಂದ ಸ್ಮರಣೆ: ಪುನೀತ್ ರಾಜ್ ಕುಮಾರ್ ಮೊದಲ ವರ್ಷದ ಪುಣ್ಯತಿಥಿ ಅಂಗವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜಕೀಯ ನಾಯಕರು, ಗಣ್ಯರು, ಕಲಾವಿದರು ಅವರನ್ನು ಸ್ಮರಿಸುತ್ತಿದ್ದಾರೆ.
"ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿ, ಪವರ್ ಸ್ಟಾರ್ ಆಗಿ ಕನ್ನಡಿಗರ ಜನಮಾನಸದಲ್ಲಿ ಶಾಶ್ವತ ಸ್ಥಾನ ಪಡೆದಿರುವ ಪ್ರೀತಿಯ ಅಪ್ಪು,
— CM of Karnataka (@CMofKarnataka) October 29, 2022
ಡಾ. ಪುನೀತ್ ರಾಜಕುಮಾರ್ ರವರ ಪುಣ್ಯಸ್ಮರಣೆಯಂದು ಅವರಿಗೆ ಪ್ರೀತಿ ಪೂರ್ವಕ ನಮನಗಳು. pic.twitter.com/7lTdgQ22vt