ನಮ್ಮ ಮೇಲೆ ವಿಶ್ವಾಸ ಇಟ್ಟು ರಾಜ್ಯದಲ್ಲಿ ಹೂಡಿಕೆಗೆ ಬನ್ನಿ ಎಂದ ಸಿಎಂ ಬೊಮ್ಮಾಯಿ | JANATA NEWS
ಬೆಂಗಳೂರು : ಬಿಲ್ಡ್ ಫಾರ್ ದಿ ವರ್ಲ್ಡ್' ಪರಿಕಲ್ಪನೆಯಡಿ ರಾಜ್ಯ ಸರ್ಕಾರ ಹಮ್ಮಿಕೊಂಡಿರುವ 'ಕರ್ನಾಟಕ ಜಾಗತಿಕ ಹೂಡಿಕೆದಾರರ ಸಮಾವೇಶ'ಕ್ಕೆ ಇಂದು(ನ.2) ಚಾಲನೆ ಸಿಕ್ಕಿದೆ.
ಮೂರು ದಿನಗಳ ಕಾಲ ನಡೆಯುವ ಈ ಸಮಾವೇಶದಲ್ಲಿ ಜಗತ್ತಿನ ಖ್ಯಾತನಾಮ ಉದ್ಯಮಿಗಳು, ವಿವಿಧ ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಳ್ಳುತ್ತಿದ್ದು, ಅಂದಾಜು 7 ಲಕ್ಷ ಕೋಟಿ ರೂ. ಹೂಡಿಕೆಯಾಗುವ ಹಾಗೂ ಅಂದಾಜು 3 ಲಕ್ಷ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ.
ಬೆಂಗಳೂರಿನಲ್ಲಿ ನಡೆಯುತ್ತಿರುವ ಈ ಸಮಾವೇಶದ ಕಾರ್ಯಕ್ರಮವನ್ನು ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಉದ್ಘಾಟಿಸಿದರು. ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವ ಪಿಯೂಷ್ ಗೋಯೆಲ್, ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ, ಐಟಿ-ಬಿಟಿ ಸಚಿವ ಅಶ್ವತ್ಥ್ ನಾರಾಯಣ್, ಸಚಿವ ಎಂಟಿಬಿ ನಾಗರಾಜ್, ಮೈಸೂರಿನ ರಾಜವಂಶಸ್ಥೆ ಪ್ರಮೋದಾ ದೇವಿ ಉಪಸ್ಥಿತರಿದ್ದರು.
ಇಲ್ಲಿನ ಅರಮನೆ ಆವರಣದಲ್ಲಿ ನಡೆದ ಹೂಡಿಕೆದಾರರ ಸಮಾವೇಶದಲ್ಲಿ ಮಾತನಾಡಿದ ಅವರು, ಕೋವಿಡ್ ನಂತರ ಹೂಡಿಕೆದಾರರ ಸಮಾವೇಶ ಮಾಡಿದ ಮೊದಲ ರಾಜ್ಯ ಕರ್ನಾಟಕವಾಗಿದೆ. 7 ಲಕ್ಷ ಕೋಟಿಗೂ ಹೆಚ್ಚು ಹೂಡಿಕೆ ರಾಜ್ಯದಲ್ಲಿ ಆಗಲಿದೆ. ಕೋವಿಡ್ ಬಳಿಕ ರಾಜ್ಯದಲ್ಲಿ 13 ಸಾವಿರ ಕೋಟಿ ತೆರಿಗೆ ಸಂಗ್ರಹವಾಗಿದೆ. ಜಿಎಸ್ಟಿ ಸಂಗ್ರಹದಲ್ಲೂ ರಾಜ್ಯ ಮುಂದಿದ್ದು, ದೇಶದಲ್ಲಿ 2 ನೇ ಸ್ಥಾನದಲ್ಲಿದೆ ಎಂದರು.
ಸರಳ ಉದ್ಯಮ ನೀತಿಗಳನ್ನು ಕರ್ನಾಟಕ ಹೊಂದಿದೆ. ಸೆಮಿಕಂಡಕ್ಟರ್, ಆರ್ ಅಂಡ್ ಡಿ ಬೆಳವಣಿಗೆಗೆ ನಿಯಮ ರೂಪಿಸಿದೆ. ಐಐಟಿ, ಐಐಎಮ್, ಡಿ ಆರ್ಡಿಒ ರಾಜ್ಯದಲ್ಲಿವೆ. 5 ರಿಂದ 10 ಸಾವಿರ ಇಂಜಿನಿಯರ್ಗಳು ಆರ್ ಅಂಡ್ ಡಿ ಕ್ಷೇತ್ರದಲ್ಲಿ ಕೆಲಸ ಮಾಡಲು ಬೆಂಗಳೂರಿಗೆ ಬರುತ್ತಾರೆ. ಹ್ಯೂಮನ್ ಜೆನೆಟಿಕ್ಸ್ನಿಂದ ಸ್ಪೇಸ್ವರೆಗೂ ರಿಸರ್ಚ್ ಆಂಡ್ ಡೆವೆಲಪ್ಮೆಂಟ್ ರಾಜ್ಯದಲ್ಲಿ ಆಗುತ್ತಿದೆ ಎಂದು ಸಿಎಂ ತಿಳಿಸಿದರು.
ಉದ್ಯಮಿಗಳ ಜೊತೆ ಜನರ ಹಿತರಕ್ಷಣೆಯೂ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಉದ್ಯೋಗ ನೀತಿ ಜಾರಿಯಲ್ಲಿದೆ. ಉದ್ಯೋಗ ಸೃಷ್ಟಿ ಹೆಚ್ಚು ಮಾಡಿದರೆ, ಅಂತವರಿಗೆ ಹೆಚ್ಚು ಅನುಕೂಲಗಳು ಸಿಗಲಿವೆ ಎಂದು ಭರವಸೆ ನೀಡಿದ ಅವರು, ಮೂಲಭೂತಸೌಕರ್ಯ ಸಮಸ್ಯೆಗಳನ್ನು ನೀಗಿಸಲಾಗುವುದು. ಈ ನಿಟ್ಟಿನಲ್ಲಿ ಕರ್ನಾಟಕಕ್ಕೆ ಬಂದು ಹೂಡಿಕೆ ಮಾಡಿ ಎಂದು ಆಹ್ವಾನ ನೀಡಿದರು.
ರಾಜ್ಯದಲ್ಲಿ ಉದ್ಯಮಿಗಳಿಗೆ ನಿರಾಶೆಗೊಳಿಸಲ್ಲ. ಇಲ್ಲಿ ಸ್ಥಾಪನೆ ಆಗಿರುವ ಕಂಪನಿಗಳು ತಮ್ಮ ಕಾರ್ಯವ್ಯಾಪ್ತಿಯನ್ನು ವಿಸ್ತರಣೆ ಮಾಡುತ್ತಿರುವುದೇ ಇದುವೇ ಸಾಕ್ಷಿಯಾಗಿದೆ. ನಾವು ನಮ್ಮಜನರ ಮೇಲೆ ವಿಶ್ವಾಸ ಇಟ್ಟಿದ್ದೇವೆ. ಮುಂದೆಯೂ ನಮ್ಮ ಸರ್ಕಾರವೇ ಇರಲಿದೆ. ನಮ್ಮ ಮೇಲೆ ವಿಶ್ವಾಸ ಇಟ್ಟು ಹೂಡಿಕೆ ಮಾಡಿ ಎಂದ ಅವರು, 2025 ರ ಜನವರಿಯಲ್ಲಿ ಮುಂದಿನ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಯಲಿದೆ ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದರು.