ದಿವ್ಯಾಂಗ ಮಕ್ಕಳಿಗೆ ವಿಶೇಷವಾಗಿ 5 ಲಕ್ಷ ರೂ.ಗಳ ವರೆಗೂ ಚಿಕಿತ್ಸೆ ಪಡೆಯಲು ವ್ಯವಸ್ಥೆ | JANATA NEWS
ಬೆಂಗಳೂರು : ಅಂಗವಿಕಲರ ಆರೋಗ್ಯದ ದೃಷ್ಟಿಯಿಂದ ವಿಶೇಷವಾಗಿ 5 ಲಕ್ಷ ರೂ.ಗಳ ವರೆಗೂ ಚಿಕಿತ್ಸೆ ಪಡೆಯಲು ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಯಾವುದೇ ಆಸ್ಪತ್ರೆಗೆ ದಾಖಲಾದರೂ, ಸರ್ಕಾರವೇ ವೆಚ್ಚವನ್ನು ಭರಿಸುವಂತಹ ವಿಮಾ ಯೋಜನೆ ಜಾರಿ ಮಾಡಲಾಗುತ್ತಿದೆ ಎಂದು ಹೇಳಿದರು.
2022ರ ವಿಶ್ವ ವಿಕಲಚೇತನರ ದಿನಾಚರಣೆ ಅಂಗವಾಗಿ ವಿಕಲಚೇತನ ಹಾಗೂ ಹಿರಿಯ ನಾಗರೀಕರ ಸಬಲೀಕರಣ ನಿರ್ದೇಶನಾಲಯವತಿಯಿಂದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದಿವ್ಯಾಂಗರಿಗಾಗಿ ಯಾಂತ್ರೀಕೃತ ತ್ರಿಚಕ್ರ ವಾಹನಗಳ ಸಂಖ್ಯೆಯನ್ನು ಹೆಚ್ಚಿಸುವುದಕ್ಕಾಗಿ ಈವರೆಗೂ ಮೀಸಲಿಡುತ್ತಿದ್ದ 15 ಕೋಟಿಗಳಿಗೆ 10 ಕೋಟಿ ರೂ.ಗಳನ್ನು ಸೇರಿಸಿ 25 ಕೋಟಿ ರೂಗಳಿಗೆ ಹೆಚ್ಚಳ ಮಾಡಲಾಗಿದೆ. ಮುಂದಿನ ಮಾರ್ಚ್ ಅಂತ್ಯದ ವೇಳೆಗೆ 2 ಸಾವಿರ ಸೈಕಲ್ಗಳನ್ನು ವಿತರಣೆ ಮಾಡಲಾಗುವುದು. ಜತೆಗೆ, ಈ ವರ್ಗದವರಿಗಾಗಿ ಶೆಲ್ಟರ್ಡ್ ವರ್ಕ್ ಷಾಪ್ಗಳನ್ನು ಪ್ರಾರಂಭಿಸಲಾಗುವುದು. ಮುಂದಿನ ಬಜೆಟ್ನಲ್ಲಿ ಮತ್ತಷ್ಟು ಯೋಜನಗೆಗಳನ್ನು ಘೋಷಣೆ ಮಾಡುವುದಾಗಿ ಅವರು ಹೇಳಿದರು.
ವಸತಿ ಶಾಲೆಗಳಲ್ಲಿ ಬುದ್ಧಿಮಾಂದ್ಯ ಮಕ್ಕಳಿಗೆ ನೀಡಲಾಗುತ್ತಿದ್ದ 6,800 ರೂ.ಗಳನ್ನು 10,200 ರೂ.ಗಳಿಗೆ ಹೆಚ್ಚಿಸಲಾಗಿದೆ. ಬುದ್ಧಿಮಾಂದ್ಯ ಮಕ್ಕಳ ವಸತಿರಹಿತ ಶಾಲೆಗಳಲ್ಲಿ ನೀಡಲಾಗುತ್ತಿದ್ದ 6,000 ರೂ.ಗಳನ್ನು 9,000 ರೂ.ಹೆಚ್ಚಿಸಿ ನೀಡಲಾಗುತ್ತಿದೆ. ಅಂಧ,ಕಿವುಡ ಮಕ್ಕಳ ವಸತಿ ಶಾಲೆಗಳಲ್ಲಿರುವವರಿಗೆ 9,300 ರೂ.ಗಳನ್ನು, ವಸತಿರಹಿತ ಶಾಲೆಗಳ ಅಂಧ,ಕಿವುಡ ಮಕ್ಕಳಿಗೆ 7,800 ರೂ.ಗಳನ್ನು, ಹಗಲುಸೇವೆ ಯೋಗಕ್ಷೇಮ ಕೇಂದ್ರಗಳಿಗೆ 15,000 ರೂ.ಗಳನ್ನು, ವೃದ್ಧಾಶ್ರಮ ಕೇಂದ್ರಗಳ ನಿರ್ವಹಣೆಗೆ 12 ಲಕ್ಷ ರೂ. ನೀಡಲಾಗುತ್ತಿದೆ.
ಮುಖ್ಯಮಂತ್ರಿಯಾದ ತಕ್ಷಣ ವಿಕಲಚೇತನರ ಮಾಸಾಶನವನ್ನು ಹೆಚ್ಚಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಸವಲತ್ತುಗಳನ್ನು ಹೆಚ್ಚಿಸಲಾಗುವುದು ಎಂದರು