ವೃದ್ಧೆಯನ್ನು ಕೊಂದು ಕಬೋರ್ಡ್ನಲ್ಲಿಟ್ಟು ಪರಾರಿಯಾದ ಮಹಿಳೆ! | JANATA NEWS
ಬೆಂಗಳೂರು : ಅನೇಕಲ್ ತಾಲೂಕಿನ ನೆರಳೂರು ಬಳಿ ವೃದ್ಧೆಯನ್ನು ಕೊಂದು ಶವವನ್ನು ಬೀರುವಿನಲ್ಲಿಟ್ಟು ಪಾತಕಿ ಪರಾರಿಯಾಗಿರುವ ಘಟನೆ ನಡೆದಿದೆ.
ಕಳೆದ ಮೂರು ದಿನಗಳಿಂದ ಕಾಣೆಯಾಗಿದ್ದ ವೃದ್ಧೆ ಇಂದು ಕೊಲೆಯಾಗಿರುವ ಸ್ಥಿತಿಯಲ್ಲಿ ನೆರಳೂರಿನ ಬಾಡಿಗೆ ಮನೆಯಲ್ಲಿ ಪತ್ತೆಯಾಗಿದ್ದಾರೆ.
ಮನೆಯೊಂದರ ಮೂರನೇ ಮಹಡಿಯಲ್ಲಿ ಅಜ್ಜಿ ಹಾಗೂ ಕುಟುಂಬಸ್ಥರು ವಾಸವಾಗಿದ್ದರು. ನಾಲ್ಕನೇ ಮಹಡಿಯಲ್ಲಿ ಮುಸ್ಲಿಂ ಮಹಿಳೆ ಬಾಡಿಗೆಗೆ ಇದ್ದಳು. ಕಳೆದ ಮೂರು ದಿನಗಳ ಹಿಂದೆ ಟ್ಯೂಷನ್ ನಿಂದ ಮಕ್ಕಳನ್ನು ಕರೆದುಕೊಂಡು ಬರಲು ಸೊಸೆ ಜ್ಯೋತಿ ತೆರಳಿದ್ದರು. ಸೊಸೆ ಹೋಗುತ್ತಿದ್ದಂತೆ ಅಜ್ಜಿಯನ್ನು ತನ್ನ ಮನೆಗೆ ಮಹಿಳೆ ಆಹ್ವಾನಿಸಿದ್ದಳು. ಇದಾದ ಬಳಿಕೆ ಅಜ್ಜಿಯ ಪತ್ತೆಯಾಗಿರಲಿಲ್ಲ.
ಅಂದಿನಿಂದ ಪಾರ್ವತಮ್ಮ ಕುಟುಂಬಸ್ಥರು ಪಾರ್ವತಮ್ಮಳನ್ನು ಹುಡುಕಲು ಶುರು ಮಾಡಿದ್ದರು. ಆದರೆ ಪಾರ್ವತಮ್ಮ ಮಾತ್ರ ಸಿಕ್ಕಿರಲಿಲ್ಲ. ಇನ್ನೂ ಇತ್ತ ಮುಸ್ಲಿಂ ಮಹಿಳೆ ಕೂಡ ನಾಪತ್ತೆಯಾಗಿದ್ದರಿಂದ ಕುಟುಂಬಸ್ಥರು ಅನುಮಾನಗೊಂಡಿದ್ದರು.
ನಂತರ ಪಾರ್ವತಮ್ಮ ಕುಟುಂಬಸ್ಥರು ಮುಸ್ಲಿಂ ಮಹಿಳೆಯ ಮನೆ ಬೀಗ ತೆಗೆಸಿದ್ದರು. ನಂತರ ಮನೆಯನ್ನು ಪರಿಶೀಲಿಸಿದಾಗ ಕಬೋರ್ಡ್ನಲ್ಲಿ ಅಜ್ಜಿಯ ಮೃತದೇಹವನ್ನು ಪ್ಯಾಕ್ ಮಾಡಿ ಇಡಲಾಗಿರುವುದು ಗಮನಕ್ಕೆ ಬಂದಿದೆ.
ಮಹಿಳೆ ವೃದ್ಧೆಯನ್ನು ಕೊಂದು ಶವ ಪ್ಯಾಕ್ ಮಾಡಿ ಬೀರುವಿನಲ್ಲಿಟ್ಟು ಪರಾರಿಯಾಗಿದ್ದಾಳೆ. ಅಜ್ಜಿಯ ಮೈ ಮೇಲೆ ಸಾಕಷ್ಟು ಚಿನ್ನವಿದ್ದ ಕಾರಣ ಕೊಲೆ ಮಾಡಿ ಚಿನ್ನದ ಸಮೇತ ಪರಾರಿಯಾಗಿರುವ ಶಂಕೆ ಮೂಡಿದೆ. ಸ್ಥಳಕ್ಕೆ ಅತ್ತಿಬೆಲೆ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.