ಖ್ಯಾತ ಉದ್ಯಮಿ ತನ್ನ ಪುತ್ರನನ್ನೇ ಸುಪಾರಿ ಕೊಟ್ಟು ಕೊಲೆ ಮಾಡಿಸಿದ | JANATA NEWS
ಹುಬ್ಬಳ್ಳಿ : ಹುಬ್ಬಳ್ಳಿಯ ಖ್ಯಾತ ಉದ್ಯಮಿಯೊಬ್ಬರ ಪುತ್ರನ ನಾಪತ್ತೆ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದ್ದು, ಉದ್ಯಮಿಯ ತೋಟದ ಮನೆಯಲ್ಲೇ ಮಗನ ಶವ ಪತ್ತೆಯಾಗಿದೆ.
ಅಖಿಲ್ ಭರತ ಮಹಾಜನ ಶೇಠ್ (26) ಎಂಬಾತ ಕೊಲೆಯಾಗಿದ್ದು, ಇಲ್ಲಿನ ಕೇಶ್ವಾಪುರ ಅರಿಹಂತ ನಗರದಲ್ಲಿ ಜುವೆಲರಿ ಅಂಗಡಿ ಮಾಲೀಕ ಭರತ್ ಸುಪಾರಿ ಕೊಟ್ಟು ಮಗನನ್ನು ಕೊಲೆ ಮಾಡಿಸಿದ್ದಾನೆ ಎನ್ನಲಾಗಿದೆ.
ಉದ್ಯಮಿ ಭರತ್ ಜೈನ್ ಪುತ್ರ ಅಖಿಲ್ ಜೈನ್ ಕಳೆದ ಡಿಸೆಂಬರ್ 1 ರಿಂದ ನಾಪತ್ತೆಯಾಗಿದ್ದಾನೆಂದು ಕುಟುಂಬಸ್ಥರು ಕೇಶ್ವಾಪುರ ಪೊಲೀಸರಿಗೆ ದೂರು ನೀಡಿದ್ದರು. ಅಖಿಲ್ ಕುರಿತು ಮಾಹಿತಿ ಕಲೆ ಹಾಕಿದ ಪೊಲೀಸರಿಗೆ ಹಲವು ಅಚ್ಚರಿಯ ವಿಚಾರಗಳು ಗೊತ್ತಾಗಿದ್ದವು. ದುಷ್ಟಚಟಗಳ ದಾಸನಾಗಿದ್ದ ಅಖಿಲ್ ಬಗ್ಗೆ ಮನೆಯವರೇ ರೋಸಿ ಹೋಗಿದ್ದರು ಅನ್ನೋ ವಿಷಯ ಪೊಲೀಸರಿಗೆ ತಿಳಿದಿದೆ.
ಭರತ್ ಜೈನ್ರನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಮಗನ ಹತ್ಯೆಗೆ ಸ್ಥಳೀಯ ಹಂತಕರಿಗೆ ಸುಪಾರಿ ನೀಡಿದ್ದಾಗಿ ತಂದೆ ಬಾಯ್ಬಿಟ್ಟಿದ್ದಾರೆ. ಇವರ ಹೇಳಿಕೆ ಆಧರಿಸಿ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಹುಬ್ಬಳ್ಳಿ ತಾಲೂಕಿನ ದೇವರಗಿಡಿಹಾಳ ಗ್ರಾಮದಲ್ಲಿ ಭರತ್ ಜೈನ್ಗೆ ಸೇರಿದ ತೋಟದ ಮನೆಯಲ್ಲಿ ಮಗನ ಮೃತದೇಹ ಪತ್ತೆಯಾಗಿದೆ.
ಕಟ್ಟಡ ಸಾಮಗ್ರಿಗಳ ವ್ಯವಹಾರ ಮಾಡಿಕೊಂಡಿದ್ದ ಅಖಿಲ ಮತ್ತು ಕೊಪ್ಪಿಕರ ರಸ್ತೆಯಲ್ಲಿ ಜುವೆಲರಿ ವ್ಯಾಪಾರ ಮಾಡಿಕೊಂಡಿದ್ದ ತಂದೆ ಭರತ ನಡುವೆ ಆಗಾಗ ಕೆಲವೊಂದು ವಿಷಯಗಳಿಗೆ ವಾಗ್ವಾದ ನಡೆಯುತ್ತಿತ್ತು. ಇದರಿಂದ ಬೇಸತ್ತಿದ್ದ ಭರತ್ ಅವರು ಮಗನನ್ನು ಸುಪಾರಿ ಕೊಟ್ಟು ಕೊಲೆ ಮಾಡಿಸಲು ಮುಂದಾಗಿದ್ದಾರೆ. ಮಗನನ್ನು ತಾನೇ ಸುಪಾರಿ ಕೊಟ್ಟು ಕೊಲೆ ಮಾಡಿಸಿರುವುದಾಗಿ ಭರತ್ ಪೊಲೀಸರ ಎದುರು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.