ಡಿ.ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ ಎಚ್ ವಿಶ್ವನಾಥ್ | JANATA NEWS
ಬೆಂಗಳೂರು : ಎಚ್.ವಿಶ್ವನಾಥ್ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿರುವುದು ಕುತೂಹಲ ಕೆರಳಿಸಿದೆ.
ಸದಾಶಿವನಗರ ನಿವಾಸದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರನ್ನು ಎಚ್ ವಿಶ್ವನಾಥ್ ಭೇಟಿ ಮಾಡಿದ್ರು. ಇಬ್ಬರು ನಾಯಕರು ಕೆಲ ಹೊತ್ತು ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಮಾತುಕತೆ ನಡೆದಿದೆ ಎನ್ನಲಾಗಿದೆ.
ಇಬ್ಬರೂ ನಾಯಕರ ಚರ್ಚೆ ಬಳಿಕ ಮಾತಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ನಾನು ವಿಶ್ವನಾಥ್ ಯುವ ಕಾಂಗ್ರೆಸ್ನಲ್ಲಿದ್ದಾಗಿನಿಂದಲೂ ಕೆಲಸ ಮಾಡಿದ್ದೇವೆ. ಖರ್ಗೆ ಜೊತೆಗೂ ಸಂಪುಟದಲ್ಲಿ ವಿಶ್ವನಾಥ್ ಅವರು ಕೆಲಸ ಮಾಡಿದ್ದಾರೆ. ಅವರೊಬ್ಬ ವಿಸಿನರಿ ಇರುವ ವ್ಯಕ್ತಿ. ಹೀಗಾಗಿ ಈ ಬಗ್ಗೆ ಅವರೊಂದಿಗೆ ಚರ್ಚೆ ಮಾಡಿದ್ದೇವೆ. ರಾಜಕೀಯವಾಗಿ ಯಾವುದೇ ವಿಚಾರವನ್ನು ನಾವು ಮಾತನಾಡಿಲ್ಲ ಎಂದು ಹೇಳಿದ್ದಾರೆ.
ನಮ್ಮ ಪ್ರಣಾಳಿಕೆ ಬಗ್ಗೆ ಮಾತನ್ನಾಡಿದ್ದೇವೆ. ಬಿಸಿಯೂಟ ಮೊದಲು ತಂದಿದ್ದೇ ವಿಶ್ವನಾಥ್ ಎಂದ ಅವರು, ರಾಜಕೀಯದ ಬಗ್ಗೆ ಏನೂ ಮಾತನಾಡಿಲ್ಲ, ಮುಂದೆ ಮಾತನಾಡೋಣ ಎಂದಿದ್ದೇನೆ ಎಂದರು.
ವಿಶ್ವನಾಥ್ ತಮ್ಮ ಬಾಂಬೆ ಫ್ರೆಂಡ್ಸ್ ಜೊತೆಗೆ ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಾರಾ ಎಂಬ ಪ್ರಶ್ನೆಗೆ, ರಾಜಕೀಯ ನಿಂತ ನೀರಲ್ಲ. ನಾನು ಈ ಕುರ್ಚಿ ಬಿಟ್ಟರೆ ಪಕ್ಕದಲ್ಲಿರುವ ಇವರೇ ಬಂದು ಕುಳಿತು ಕೊಳ್ತಾರೆ. ಈಗಾಗಲೇ ಶಿವರಾಂ ಹೆಬ್ಬಾರ್ ಕ್ಷೇತ್ರದಲ್ಲಿ ಪಾಟೀಲ್ ಟಿಕೆಟ್ ಗೆ ಅರ್ಜಿ ಹಾಕಿದ್ದಾರೆ ಎಂದರು.