ಪೊಲೀಸರಿಂದಲೇ ದಂಪತಿಗಳ ದರೋಡೆ: ಇಬ್ಬರು ಹೊಯ್ಸಳ ಗಸ್ತು ಪೊಲೀಸ್ ಅಮಾನತು | JANATA NEWS
ಬೆಂಗಳೂರು : ನಿನ್ನೆ ಮಧ್ಯರಾತ್ರಿ ನಗರದ ಮಾನ್ಯತಾ ಟೆಕ್ ಪಾರ್ಕ್ ಬಳಿ ದಂಪತಿಯನ್ನು ತಡೆದು ಹಣ ವಸೂಲಿ ಮಾಡಿರುವ ಆರೋಪ ಹೊಯ್ಸಳ ಪೊಲೀಸರ ವಿರುದ್ಧ ಕೇಳಿಬಂದಿದ್ದು, ಮೇಲ್ನೋಟಕ್ಕೆ ಆರೋಪ ಸಾಬೀತಾದ ಬೆನ್ನಲ್ಲೇ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.
ಹೆಡ್ ಕಾನ್ ಸ್ಟೆಬಲ್ ರಾಜೇಶ್ ಹಾಗೂ ಕಾನ್ ಸ್ಟೆಬಲ್ ನಾಗೇಶ್ ಅಮಾನತುಗೊಂಡವರು. ಈ ಘಟನೆಗೆ ಕಾರಣರಾದ ಸಂಪಿಗೆಹಳ್ಳಿ ಪೊಲೀಸ್ ಠಾಣೆಯ ಇಬ್ಬರು ಸಿಬ್ಬಂದಿಗಳನ್ನು ಗುರ್ತಿಸಿ ಅಮಾನತುಗೊಳಿಸಲಾಗಿದ್ದು, ಇಲಾಖಾ ವಿಚಾರಣಾ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ. ಬೆಂಗಳೂರು ನಗರ ಪೊಲೀಸ್ ತನ್ನ ಸಿಬ್ಬಂದಿಗಳಿಂದ ಇಂತಹ ಅನುಚಿತ ವರ್ತನೆಯನ್ನು ಸಹಿಸುವುದಿಲ್ಲ ಎಂಬುದಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಈ ಸಂಬಂಧ ಮಾನ್ಯತಾ ಟೆಕ್ ಪಾರ್ಕ್ ಬಳಿ ವಾಸಿಸುತ್ತಿರುವ ಕಾರ್ತಿಕ್ ಪಾತ್ರಿ ಎಂಬುವರು ಟ್ವೀಟ್ ಮಾಡಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಡಿಸಿಪಿ ಅನೂಪ್ ಶೆಟ್ಟಿ ತಿಳಿಸಿದ್ದಾರೆ.
ಡಿಸೆಂಬರ್ 8 ರಂದು ರಾತ್ರಿ 12-30 ರ ಸುಮಾರಿನಲ್ಲಿ ಈ ಘಟನೆ ನಡೆದಿದ್ದು, ಸ್ನೇಹಿತನ ಹುಟ್ಟುಹಬ್ಬದ ಕಾರ್ಯಕ್ರಮ ಮುಗಿಸಿ ಮನೆಗೆ ವಾಪಸ್ಸಾಗುವಾಗ ನಮ್ಮನ್ನು ತಡೆದ ಪೊಲೀಸರು ಐಡಿ ಕಾರ್ಡ್ ಕೇಳಿದರು. ಆಧಾರ್ ಕಾರ್ಡ್ ತೋರಿಸಿದ್ದೇವು. ಈ ವೇಳೆ ದಂಪತಿಯನ್ನು ತಡೆದ ಹೊಯ್ಸಳ ಸಿಬ್ಬಂದಿ 3000 ರೂಪಾಯಿ ಬೇಡಿಕೆ ಇಟ್ಟಿದ್ದಾರೆ.
ದಂಪತಿ ಹಣ ಕೊಡುವುದಿಲ್ಲ ಎಂದಾಗ ಪೊಲೀಸರು ಬೆದರಿಸಿದ್ದಾರೆ. ಬಳಿಕ ದಂಪತಿ 1000 ರೂ. ಡಿಜಿಟಲ್ ಪೇಮೆಂಟ್ ಮಾಡಿದಾಗ ಅವರನ್ನು ಬಿಟ್ಟು ಕಳುಹಿಸಿದ್ದಾರೆ. ಇದರಿಂದ ನೊಂದ ಕಾರ್ತಿಕ್ ಟ್ವೀಟ್ ಮೂಲಕ ಬೇಸರ ಹೊರ ಹಾಕಿದ್ದರು.