100 ಕೋಟಿ ಲಂಚ ಸುಲಿಗೆ ಪ್ರಕರಣ : ಎನ್ಸಿಪಿ ಹಿರಿಯ ಮುಖಂಡ ಅನಿಲ್ ದೇಶಮುಖ್ಗೆ ಜಾಮೀನು | JANATA NEWS
ಮುಂಬೈ : ಸಿಬಿಐ ಸಲ್ಲಿಸಿದ್ದ 100 ಕೋಟಿ ಲಂಚ ಸುಲಿಗೆ ಪ್ರಕರಣದಲ್ಲಿ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಹಾಗೂ ಎನ್ಸಿಪಿ ಹಿರಿಯ ಮುಖಂಡ ಅನಿಲ್ ದೇಶಮುಖ್ಗೆ ಬಾಂಬೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಆದರೂ, ತನ್ನ ಆದೇಶಕ್ಕೆ 10 ದಿನಗಳ ತಡೆ ನೀಡಿದೆ.
ಸುದ್ದಿ ಮಾಧ್ಯಮ ಎಎನ್ಐ ವರದಿಗಳ ಪ್ರಕಾರ, "ನಾವು ಆರೋಗ್ಯದ ಆಧಾರದ ಮೇಲೆ ವಾದಿಸಿದ್ದೇವೆ. ಅವರ ಆರೋಗ್ಯ ಹದಗೆಡುತ್ತಿದೆ ಮತ್ತು ನಾವು ಅವರ ಆರೋಗ್ಯ ದಾಖಲೆಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದೇವೆ... ಈ ಆದೇಶದ ವಿರುದ್ಧ ಸಿಬಿಐ ಅವರು ಉನ್ನತ ನ್ಯಾಯಾಲಯಕ್ಕೆ ಹೋಗುವುದಾಗಿ ಹೇಳಿದೆ, ನ್ಯಾಯಾಲಯವು ಅವರಿಗೆ ಅನುಮತಿ ನೀಡಿದೆ ಮತ್ತು ಆ ಹಿನ್ನೆಲೆಯಲ್ಲಿ ಆದೇಶಕ್ಕೆ 10 ದಿನಗಳ ತಡೆ ನೀಡಿದೆ, ಎಂದು ಅನಿಲ್ ದೇಶಮುಖ್ ಅವರ ವಕೀಲ ಅನಿಕೇತ್ ನಿಕಮ್ ಹೇಳಿದರು.
ಬಾಂಬೆ ಹೈಕೋರ್ಟ್ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಮತ್ತು ಎನ್ಸಿಪಿ ನಾಯಕ ಅನಿಲ್ ದೇಶಮುಖ್ಗೆ 1 ಲಕ್ಷ ರೂಪಾಯಿಗಳ ಶ್ಯೂರಿಟಿ ಮೊತ್ತದ ಮೇಲೆ ಜಾಮೀನು ನೀಡಿದೆ. ದೇಶಮುಖ್ ಕೂಡ ತನ್ನ ಪಾಸ್ಪೋರ್ಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕಾಗಿದೆ.
100 ಕೋಟಿ ಸುಲಿಗೆ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್ ಜಾಮೀನು ನೀಡಿದ ಬೆನ್ನಲ್ಲೇ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಅವರ ನಿವಾಸದ ಹೊರಗೆ ಎನ್ಸಿಪಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು.