ಯುವಕನ ಕಿಡ್ನಾಪ್, ಕೊಲೆ ಪ್ರಕರಣ: 9 ತಿಂಗಳ ಬಳಿಕ ಚಾರ್ಮಾಡಿ ಘಾಟ್ನಲ್ಲಿ ಪೊಲೀಸರಿಂದ ಶವ ಹುಡುಕಾಟ | JANATA NEWS
ಬೆಂಗಳೂರು : ಕಳೆದ 9 ತಿಂಗಳುಗಳ ಹಿಂದೆ ಹತ್ಯೆಗೊಳಗಾಗಿದ್ದ ನಗರದ ಕೋಣನಕುಂಟೆ ನಿವಾಸಿ ಶರತ್ ಶವ ಪತ್ತೆಗಾಗಿ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಚಾರ್ಮಾಡಿ ಘಾಟ್ನಲ್ಲಿ ಶೋಧ ನಡೆಸುತ್ತಿದ್ದಾರೆ.
ಘಟನೆ ಹಿನ್ನೆಲೆ -
ಬೆಂಗಳೂರಿನ ಕೋಣನಕುಂಟೆ ನಿವಾಸಿ ಶರತ್ ಎಂಬಾತ ಸಾಲ ಪಡೆದು ಹಿಂತಿರುಗಿಸದೆ ಓಡಾಡುತ್ತಿದ್ದ. ಇದರಿಂದ ರೊಚ್ಚಿಗೆದ್ದ ಗ್ಯಾಂಗ್ ಶರತ್ ನನ್ನು ಕಿಡ್ನಾಪ್ ಮಾಡಿ ಕೊಲೆ ಮಾಡಿದ್ದರು. ಕೊಲೆಯಾದ ಎಚ್. ಶರತ್ ಚಿಕ್ಕಬಳ್ಳಾಪುರ ಹಾಗೂ ಯಲಹಂಕ ನಿವಾಸಿಗಳಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ಸಬ್ಸಿಡಿ ದರದಲ್ಲಿ ವಾಹನ ಕೊಡಿಸುವುದಾಗಿ ನಂಬಿಸಿದ್ದ. ಆದರೆ ಕಾರು ಕೊಡಿಸದೆ ಅಲ್ಲಿನ ಜನರಿಗೆ ವಂಚಿಸಿದ್ದ.ಇದರಿಂದ ಹಣ ಕೊಟ್ಟು ಜನ ಎಚ್. ಶರತ್ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದರು.
ಚಿಕ್ಕಬಳ್ಳಾಪುರ ಮೂಲದ ಶ್ರವಣ್ ಈ ಕೊಲೆ ಮಾಡಿದ ಆರೋಪಿಯಾಗಿದ್ದು, ಇವನ ತಂದೆ ವೆಂಕಟಚಲಪತಿ ಚಿಕ್ಕಬಳ್ಳಾಪುರದಲ್ಲಿ ಸಂಘಟನೆಯೊಂದರ ಅಧ್ಯಕ್ಷನಾಗಿದ್ದ. ಅಲ್ಲದೆ, ಪ್ರಿಂಟಿಂಗ್ ಪ್ರೆಸ್ವೊಂದರ ಮಾಲೀಕನಾಗಿದ್ದಾನೆ. ಫೈನಾನ್ಸ್ ವ್ಯವಹಾರವೂ ನಡೆಸುತ್ತಿದ್ದ ಮುಖಂಡನ ಮಗ ಶ್ರವಣ್ ಕೊಲೆಗೀಡಾದ ಶರತ್ಗೆ ಕಳೆದ ವರ್ಷ 20 ಲಕ್ಷ ರೂಪಾಯಿ ಸಾಲ ಕೊಟ್ಟಿದ್ದ ಎನ್ನಲಾಗಿದೆ. ಕೊಟ್ಟಿದ್ದ ಹಣ ಹಿಂತಿರುಗಿಸಲು ಆರೋಪಿಯು ಸತಾಯಿಸುತ್ತಿದ್ದ. ಹೀಗಾಗಿ ಕಳೆದ ಜನವರಿಯಲ್ಲಿ ಶರತ್ನನ್ನು ಅಪಹರಿಸಿ ಹಣ ನೀಡುವಂತೆ ಆರೋಪಿಯು ಪೀಡಿಸಿದ್ದ. ಆಗ ಕೆಲವೇ ದಿನಗಳಲ್ಲಿ ಹಣ ಕೊಡುವುದಾಗಿ ಶರತ್ ಹೇಳಿದ್ದ. ಆದರೆ ನುಡಿದಂತೆ ನಡೆದುಕೊಳ್ಳದ ಕಾರಣ ಮಾರ್ಚ್ 23ರಂದು ಆರೋಪಿಗಳು ಬನಶಂಕರಿಯಲ್ಲಿ ಕಿಡ್ನಾಪ್ ಮಾಡಿ, ಫಾರ್ಮ್ ಹೌಸ್ವೊಂದದಕ್ಕೆ ಶರತ್ ಹಾಗೂ ಆತನ ಸಹಚರರು ಕರೆದೊಯ್ದು ಮನಬಂದಂತೆ ಹಲ್ಲೆ ಮಾಡಿದ್ದರು ಸಹ ಎನ್ನಲಾಗಿದೆ
ಕೊಲೆಯಾದ ಶರತ್ ನ ಶವನನ್ನು ಚಾರ್ಮಾಡಿ ಘಾಟ್ನಲ್ಲಿ ಎಸೆದು ಯಾರಿಗೂ ಶವದ ಸುಳಿವು ಸಿಗದಂತೆ ಮಾಡಿದ್ದರು. ಕೊಲೆಯಾಗಿ ತಿಂಗಳು ಕಳೆದ್ರೂ ಯಾರಿಗೂ ಗೊತ್ತಿರಲಿಲ್ಲ. ಅಲ್ಲದೆ ಕೊಲೆಯಾದವನ ಮೊಬೈಲ್ ನಿಂದಲೇ ಪೋಷಕರಿಗೆ ಸಂದೇಶ ರವಾನಿಸಲಾಗಿದೆ. ನಾನು ದುಡಿಯಲು ಹೋಗುತ್ತಿದ್ದೇನೆ ಹುಡುಕಬೇಡಿ ಎಂದು ಆರೋಪಿಗಳೇ ಶರತ್ ಪೋಷಕರಿಗೆ ಮೆಸೇಜ್ ಮಾಡಿದ್ದರು. ಬಳಿಕ ಮೊಬೈಲ್ ಅನ್ನು ಲಾರಿ ಮೇಲೆ ಎಸೆದಿದ್ದರು.
ಸದ್ಯ ಕಬ್ಬನ್ ಪಾರ್ಕ್ ಪೊಲೀಸರು ಸಮೊಟೋ ಪ್ರಕರಣವನ್ನು ದಾಖಲಿಸಿ 10 ಮಂದಿ ಆರೋಪಿಗಳನ್ನು ಬಂಧಿಸಿ ಅವರ ಮೇಲೆ ಕೊಲೆ ಪ್ರಕರಣ ಎಫ್ಐಆರ್ ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಚಾರಣೆಯ ವೇಳೆ ಕೊಲೆ ಮಾಡಿ ಶವವನ್ನು ಚಾರ್ಮಾಡಿ ಘಾಟ್ನಲ್ಲಿ ಬಿಸಾಕಿರುವ ಬಗ್ಗೆ ಆರೋಪಿಗಳು ಹೇಳಿಕೆ ನೀಡಿದ್ದರು. ಇದರ ಆಧಾರದ ಮೇಲೆ ಕಬ್ಬನ್ ಪಾರ್ಕ್ ಪೊಲೀಸರು ಆರೋಪಿಗಳೊಂದಿಗೆ ಚಾರ್ಮಾಡಿ ಘಾಟ್ನಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.
ಕೊಲೆ ಆರೋಪಿಗಳು ದಿನಕ್ಕೊಂದು ಜಾಗ ತೋರಿಸುತ್ತಿದ್ದಾರೆ. ಚಾರ್ಮಾಡಿ ಘಾಟ್ ನಲ್ಲಿ ಆಳವಾದ ಕಂದಕಗಳು, ದಟ್ಟವಾದ ಪೂದೆಗಳ ಜಾಗಗಳನ್ನು ತೋರಿಸಿದ್ದಾರೆ. ಹೀಗಾಗಿ ಎಲ್ಲಾ ಕಡೆಗಳಲ್ಲಿ ಹುಡುಕಾಟ ನಡೆಸಿದರೂ ಶರತ್ ಮೃತದೇಹ ಮಾತ್ರ ಸಿಗುತ್ತಿಲ್ಲ. ರಾತ್ರಿ ವೇಳೆ ಶವ ಎಸೆದಿದ್ದರಿಂದ ಆರೋಪಿಗಳೂ ಸಹ ಗೊಂದಲದ ಹೇಳಿಕೆ ನೀಡಿದ್ದಾರೆ.