ನೇಕಾರ್ ಸಮ್ಮಾನ್ ಯೋಜನೆ : ರಾಜ್ಯದ 1,02,980 ನೇಕಾರರಿಗೆ ₹5000 ಸಹಾಯಧನ ನೇರ ಬ್ಯಾಂಕ್ ಖಾತೆಗೆ ಪಾವತಿ | JANATA NEWS
ಬೆಂಗಳೂರು : ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೈಮಗ್ಗ ಮತ್ತು ಜವಳಿ ಇಲಾಖೆಯ ವತಿಯಿಂದ ಮುಖ್ಯಮಂತ್ರಿಯವರ ಗೃಹ ಕಛೇರಿ ಕೃಷ್ಣಾದಲ್ಲಿ ಆಯೋಜಿಸಿರುವ “ನೇಕಾರ ಸಮ್ಮಾನ್ ಯೋಜನೆ”ಯಡಿ ವಿದ್ಯುತ್ ಮಗ್ಗ ನೇಕಾರರಿಗೆ / ಕಾರ್ಮಿಕರಿಗೆ ಡಿ.ಬಿ.ಟಿ. ಮುಖಾಂತರ ಸಹಾಯಧನ ವರ್ಗಾವಣೆಗೆ ಚಾಲನೆಗೆ ನೀಡಿದರು.
"ನೇಕಾರರ ಬಹುಕಾಲದ ಬೇಡಿಕೆಯನ್ನು ಇಂದು ನಾವು ಈಡೇರಿಸಿದ್ದೇವೆ. ಇಂದು ರಾಜ್ಯದ 1,02,980 ನೇಕಾರರಿಗೆ ನೇಕಾರ್ ಸಮ್ಮಾನ್ ಯೋಜನೆಯಡಿಯಲ್ಲಿ 2022-23ನೇ ಸಾಲಿನ ₹5000 ಸಹಾಯಧನವನ್ನು ನೇರ ನಗದು ಪಾವತಿ ಮೂಲಕ ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ. ಇದರ ಯಶಸ್ಸು ತುಂಬಾ ಶ್ರಮ ವಹಿಸಿ ಮುತುವರ್ಜಿಯಿಂದ ಕೆಲಸಮಾಡಿದ ನಮ್ಮ ಅಧಿಕಾರಿಗಳಿಗೆ ಸಲ್ಲಬೇಕು." ಮುಖ್ಯಮಂತ್ರಿ ಬೊಮ್ಮಾಯಿ ಅವರು ತಿಳಿಸಿದ್ದಾರೆ.
ಜವಳಿ ಹಾಗೂ ಸಕ್ಕರೆ ಖಾತೆ ಸಚಿವ ಶಂಕರ ಪಾಟೀಲ್ ಮೂನೆನಕೊಪ್ಪ, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಿದ್ದು ಸವದಿ, ಶಾಸಕರಾದ ಮಹಾದೇವಪ್ಪ ಶಿವಲಿಂಗಪ್ಪ ಯಾದವಾಡ, ಎಂ.ಡಿ. ಲಕ್ಷ್ಮೀನಾರಾಯಣ, ಕರ್ನಾಟಕ ರಾಜ್ಯ ಜವಳಿ ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಗುತ್ತಿಗನೂರು ವಿರೂಪಾಕ್ಷ ಗೌಡ, ಕಾವೇರಿ ಹ್ಯಾಂಡ್ಲೂಮ್ಸ್ ಅಧ್ಯಕ್ಷ ಬಿ.ಜೆ. ಗಣೇಶ್, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್, ಸಣ್ಣ ಕೈಗಾರಿಕಾ ಇಲಾಖೆ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ, ಕೈಮಗ್ಗ ಮತ್ತು ಜವಳಿ ಇಲಾಖೆ ಆಯುಕ್ತ ಟಿ.ಎಚ್.ಎಂ. ಕುಮಾರ್ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.