ರಾಜ್ಯದ ಸ್ತಬ್ಧಚಿತ್ರ ನಾರಿಶಕ್ತಿ : 74ನೇ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ವಿಶೇಷ | JANATA NEWS
ನವದೆಹಲಿ : ನಮ್ಮ ಕರ್ನಾಟಕ ರಾಜ್ಯದ ಮಹಿಳಾ ಸಾಧಕಿಯರ ಕುರಿತಾಗಿ ರಚಿಸಲಾದ ರಾಜ್ಯದ ಸ್ತಬ್ಧಚಿತ್ರ "ನಾರಿಶಕ್ತಿ" ಈ ಭಾರಿಯ 74ನೇ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಪಾಲ್ಗೊಂಡಿರುವುದು ವಿಶೇಷವಾಗಿ ಎದ್ದು ಕಾಣುವಂತಿತ್ತು.
ಕರ್ನಾಟಕದ ಸ್ತಬ್ಧಚಿತ್ರ "ನಾರಿಶಕ್ತಿ" ರಾಜ್ಯದ 3 ಮಹಿಳಾ ಸಾಧಕರ ಅಸಾಧಾರಣ ಸಾಧನೆಗಳನ್ನು ಸಾಂಕೇತಿಕವಾಗಿ ಅನಾವರಣಗೊಳಿಸುತ್ತದೆ.
ಸಾವಿರಾರು ಮಕ್ಕಳ ಜನ್ಮಕ್ಕೆ ಹಾಗೂ ಮಹಿಳೆಯರ ಹೆರಿಗೆ ಜವಾಬ್ದಾರಿ ಯಶಸ್ವಿಯಾಗಿ ನಡೆಸಿದ ಸೂಲಗಿತ್ತಿ ನರಸಮ್ಮ ಅವರ ಹಾಗೂ ವೃಕ್ಷಮಾತೆ ಎಂದೇ ಕರೆಯಲ್ಪಡುವ ಉತ್ತರ ಕನ್ನಡ ಜಿಲ್ಲೆಯ ತುಳಸಿ ಗೌಡ ಹಾಗೂ ರಸ್ತೆ ಬದಿಯಲ್ಲಿ ಸಾಲುಮರ ನೆಡುವ ಮೂಲಕ ಸಾವಿರಾರು ಜನರಿಗೆ ಪ್ರೇರಣೆಯಾದ ಸಾಲುಮರದ ತಿಮ್ಮಕ್ಕ ಅವರ ಸ್ತಬ್ಧ ಚಿತ್ರವು ಪದ್ಮಶ್ರೀ ಪ್ರಶಸ್ತಿ ವಿಜೇತ ರಾಜ್ಯದ ಮಹಿಳಾ ಸಾಧಕರಿಗೆ ನೀಡಿದ ವಿಶೇಷ ಗೌರವ ಎನಿಸಿದೆ. ಅವರು ಸಮಾಜಕ್ಕೆ ಅವರ ನಿಸ್ವಾರ್ಥ ಕೊಡುಗೆಯಿಂದಾಗಿ ಹೆಸರುವಾಸಿಯಾಗಿದ್ದಾರೆ.
ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಕುರಿತು ಹೇಳಿದ್ದು, "ಕರ್ನಾಟಕದ ಎಲೆಮರೆಯ ಮಹಿಳಾ ಸಾಧಕರ ಪ್ರತೀಕವಾಗಿ ಸೂಲಗಿತ್ತಿ ನರಸಮ್ಮ,ವೃಕ್ಷ ಮಾತೆ ತುಳಸಿ ಗೌಡ ಹಾಲಕ್ಕಿ ಹಾಗೂ ಸಾಲು ಮರದ ತಿಮ್ಮಕ್ಕರನ್ನೊಳಗೊಂಡ "ನಾರಿ ಶಕ್ತಿ" ಸ್ತಬ್ಧ ಚಿತ್ರ ನವ ದೆಹಲಿಯ ಕರ್ತವ್ಯ ಪಥದಲ್ಲಿ ವಿಜೃಂಭಿಸಿದೆ" ಎಂದು ಹೇಳಿಕೆ ನೀಡಿದ್ದಾರೆ.