ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಡ್ರೈವರ್ ಆತ್ಮಹತ್ಯೆಗೆ ಯತ್ನ | JANATA NEWS
ಬೆಂಗಳೂರು : ಕೆಂಗೇರಿ ಘಟಕದ ಅಧಿಕಾರಿಗಳ ಕಿರುಕುಳ ಸಹಿಲಾಗುತ್ತಿಲ್ಲ ಎಂದು ಬಸ್ ಚಾಲಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ದುರ್ಘಟನೆ ನಡೆದಿದೆ.
ಚಾಲಕ ಶ್ರೀನಿವಾಸ್ ಬಿಎಂಟಿಸಿ ಘಟಕ 37 ಕೆಂಗೇರಿ ಡಿಪೋದಲ್ಲಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಘಟಕ ಎಟಿಎಸ್ ಕೋಮಲ, ಡಿಎಂ ದಯಾನಂದ ಹಾಗೂ ಎಟಿಐ ಮಹಾಲಿಂಗಪ್ಪ ಅವರು ತೀವ್ರವಾಗಿ ಕಿರುಕುಳ ನೀಡುತ್ತಿದ್ದಾರೆ.
ಇವರ ಕಿರುಕುಳ ತಾಳಲಾರದೆ ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ ಎಂದು ಡೆತ್ ನೋಟ್ ಬರೆದಿಟ್ಟು ವಿಷ ಸೇವನೆ ಮಾಡಿದ್ದಾರೆ. ಶ್ರೀನಿವಾಸ್ ನನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈಗ ಸದ್ಯ ಚಾಲಕನಿಗೆ ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ನೀಡಲಾಗುತ್ತಿದೆ.
ಎರಡು ಪುಟದ ಡೆತ್ನೋಟ್ನಲ್ಲೇನಿದೆ..?
ಕಳೆದ ನಾಲ್ಕು ವರ್ಷಗಳಿಂದ ನಾನು ಕೆಲಸಕ್ಕೆ ಯಾವತ್ತೂ ಗೈರು ಹಾಜರಾಗದೇ ಬಿಎಂಟಿಸಿ ಘಟಕ -೩೭ ಕೆಂಗೇರಿಯಲ್ಲಿ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ನನ್ನ ಕೆಲಸದಲ್ಲಿ ಪ್ರಾಮಾಣಿಕತೆ ಮತ್ತು ನಿಷಷ್ಠೆಯಿಂದ ಕೆಲಸ ಮಾಡುತ್ತಿದ್ದೇನೆ. ಆದರೆ, ಸರಿಯಾದ ಸಮಯಕ್ಕೆ ಪ್ರತಿದಿನ ಕೆಲಸಕ್ಕೆ ಬಂದರೂ ಎಟಿಎಸ್ ಕೋಮಲ ಅವರು ನನಗೆ ಕರ್ತವ್ಯಕ್ಕೆ ಹೋಗಲು ಡ್ಯೂಟಿಯನ್ನು ಹಾಕಿಕೊಡದೇ ಮನೆಗೆ ಹೋಗುವಂತೆ ಮಾಡುತ್ತಿದ್ದಾರೆ.
ನನಗೆ ಬೇಕಾಬಿಟ್ಟಿಯಾಗಿ ಕರ್ತವ್ಯಕ್ಕೆ ಹಾಕುತ್ತಿದ್ದರು. ಇದರಿಂದ ನಾನು ಜಿಗುಪ್ಸೆಗೊಂಡಿದ್ದೇನೆ. ಒಂದೊಂದು ಬಾರಿ ನಮ್ಮ ಘಟಕದಲ್ಲಿ ಡ್ಯೂಟಿ ಸಿಗದಿದ್ದ ಪಕ್ಷದಲ್ಲಿ ಬೇರೊಂದು ಘಟಕದಲ್ಲಿ ಡ್ಯೂಟಿ ಮಾಡಿಕೊಮಡು ಹೋಗುತ್ತಿದ್ದೆನು. ಆದರೂ ಕೂಡ ಬೇರೆ ಘಟಕದ ಹಾಜರಾತಿಯನ್ನು ನಿನಗೆ ನಾನು ನೀಡುವುದಿಲ್ಲ ಎಂದು ಬೆದರಿಕೆ ಹಾಕಿ ತಿಂಗಳ ಕೊನೆಯಲ್ಲಿ ಸತಾಯಿಸಿ ಅವರ ಮನಸ್ಸಿಗೆ ತೋಚಿದಂತೆ ಹಾಜರಾತಿ ಕೊಡುತ್ತಿದ್ದರು.
ಈ ಬಗ್ಗೆ ನಾನು ಪ್ರಶ್ನೆ ಮಾಡಿದಾಗ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ನೀನು ಇನ್ನುಮುಂದೆ ಕರ್ತವ್ಯಕ್ಕೆ ಬರಬೇಡ ಎಂದು ಹೇಳಿದ್ದರು. ಪುನಃ ನಿನ್ನೆ ಬೆಳಗ್ಗೆ 10.20ಕ್ಕೆ ನಾನು ಕೆಲಸಕ್ಕೆ ಬಂದರೂ ನಿನಗೆ ಯಾವುದೇ ಕರ್ತವ್ಯ ಇಲ್ಲವೆಂದು ನಿರ್ಲಕ್ಷ್ಯದಿಂದ ಮಾತನಾಡಿ ನಮ್ಮ ಸಹ ಕಾರ್ಮಿಕರ ಎದುರು ಅವಮಾನ ಮಾಡಿದ್ದಾರೆ.
ಇನ್ನು ನಾನು ಘಟಕದ ವ್ಯವಸ್ಥಾಪಕರಿಗೆ ತಿಳಿಸಿದರೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಆದ್ದರಿಂದ ನಾನು ಕರ್ತವ್ಯ ಮಾಡಲು ಸಾಧ್ಯವಾಗದೇ ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ ಎಂದು ನೊಂದುಕೊಂಡು ಶಾಂತಿನಗರದ ಬಿಎಂಟಿಸಿ ವ್ಯವಸ್ಥಾಪಕರಿಗೆ ಸಲ್ಲಿಕೆ ಆಗುವಂತೆ ಡೆತ್ ನೋಟ್ ಬರೆದಿದ್ದಾರೆ.