ಆರು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆ, ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ! | JANATA NEWS
ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಆರು ತಿಂಗಳ ಹಿಂದೆಯೇ ಸಾವನ್ನಪ್ಪಿದ್ದ ಮಹಿಳೆಯೊಬ್ಬರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಹುಳಿಮಾವಿನ ಅಕ್ಷಯ ನಗರದ ಅಪಾರ್ಟ್ಮೆಂಟ್ ಒಂದರ ಹಿಂಭಾಗದ ನಿರ್ಜನ ಪ್ರದೇಶದ ಪೊದೆಗಳ ನಡುವೆ ಮರಕ್ಕೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಅಪರಿಚಿತ ಅಸ್ಥಿಪಂಜರದ ಮೂಲ ಪತ್ತೆಹಚ್ಚುವಲ್ಲಿ ಹುಳಿಮಾವು ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.
ನಿನ್ನೆ ಪೊಲೀಸರು ಮೂತ್ರ ವಿಸರ್ಜನೆಗೆಂದು ಹೋಗಿದ್ದರು. ಈ ವೇಳೆ ಖಾಲಿ ನಿವೇಶನವೊಂದರ ಪೊದೆಗಳ ನಡುವೆ ಇರುವ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ದೇಹದ ಅವಶೇಷಗಳು ಪತ್ತೆಯಾದ ಘಟನೆ ಬೆಳಕಿಗೆ ಬಂದಿದೆ. ಅಸ್ಥಿಪಂಜರ ನೇಪಾಳ ಮೂಲದ ಪುಷ್ಪಾ ದಾಮಿ (22) ಎಂಬ ಮಹಿಳೆಯದ್ದು ಎಂಬುದು ಪತ್ತೆಯಾಗಿದೆ.
ನೇಪಾಳ ಮೂಲದ ಪುಷ್ಪಾ ದಾಮಿ ಹಾಗೂ ಆಕೆಯ ಪತಿ ಅಮರ್ ದಾಮಿ ಹುಳಿಮಾವು ಠಾಣಾ ವ್ಯಾಪ್ತಿಯ ಅಕ್ಷಯ ನಗರದಲ್ಲಿ ವಾಸವಿದ್ದರು. ಪತಿಯ ಮದ್ಯಪಾನದ ಚಟಕ್ಕೆ ಬೇಸತ್ತ ಪುಷ್ಪಾ ಮನೆಯಲ್ಲಿ ಇಬ್ಬರ ನಡುವೆ ಗಲಾಟೆಗಳಾಗುತ್ತಿದ್ದವು.
ಕಳೆದ ಜುಲೈ 8ರಂದು ಗಂಡನ ಮೇಲೆ ಕೋಪಗೊಂಡು ಮನೆಯಿಂದ ತೆರಳಿದ್ದ ಪುಷ್ಪಾ ಪುನಃ ವಾಪಸ್ ಆಗಿರಲಿಲ್ಲ. ಪತ್ನಿ ಕಾಣೆಯಾಗಿರುವ ಬಗ್ಗೆ ಹುಳಿಮಾವು ಠಾಣೆಯಲ್ಲಿ ಅಮರ್ ದಾಮಿ ಪ್ರಕರಣ ದಾಖಲಿಸಿದ್ದ.