ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಹೆಸರು: ಬಿ.ಎಸ್.ಯಡಿಯೂರಪ್ಪ | JANATA NEWS
ಶಿವಮೊಗ್ಗ : ಶಿವಮೊಗ್ಗದಲ್ಲಿ ನಿರ್ಮಿಸಲಾದ ಹೊಸ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಅವರ ಹೆಸರಿಡುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಲಾಗುವುದು ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ನಾಳೆ ನಡೆಯಲಿರುವ ಅಧಿವೇಶನದಲ್ಲಿ ಕುವೆಂಪು ಅವರ ಹೆಸರು ಪ್ರಸ್ತಾಪಿಸುತ್ತೇನೆ ಎಂದು ಹೇಳಿದ್ದಾರೆ. ಈ ಹಿಂದೆ ರಾಜ್ಯ ಸರ್ಕಾರ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಿ.ಎಸ್.ಯಡಿಯೂರಪ್ಪನವರ ಹೆಸರು ಇಡಬೇಕೆಂದು ನಿರ್ಧರಿಸಿತ್ತು. ಆದರೆ ಇದನ್ನು ಬಿಎಸ್ವೈ ನಿರಾಕರಿಸಿದ್ದರು. ಇದೀಗ ಮತ್ತೆ ತಮ್ಮ ಹೆಸರು ಬೇಡವೆಂದು ಹೇಳಿರುವ ಅವರು, ಅಧಿವೇಶನದಲ್ಲಿ ನಿರ್ಣಯ ಕೈಗೊಂಡು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.
ಈಗ ಫೆ. 27 ರಂದು ಪ್ರಧಾನಿ ಮೋದಿ ಶಿವಮೊಗ್ಗ ಏರ್ ಫೋರ್ಟ್ನನ್ನು ಲೋಕಾರ್ಪಣೆ ಮಾಡಲಿದ್ದಾರೆ. ಪಿಎಂ ಉದ್ಘಾಟನೆಗೆ ಬರುವುದು ಪಕ್ಕಾ ಆಗಿರುವ ಕುರಿತು ಬಿಎಸ್ ಯಡಿಯೂರಪ್ಪ ಮಾಹಿತಿ ನೀಡಿದ್ದಾರೆ.
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ರಾಜ್ಯ ಸರ್ಕಾರ ಯಡಿಯೂರಪ್ಪನವರ ಹೆಸರಿಡಲು ನಿರ್ಧರಿಸಿತ್ತು. ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೂಡ ಆಗಿತ್ತು. ಆದರೆ ತಮ್ಮ ಹೆಸರಿಡದಂತೆ ಯಡಿಯೂರಪ್ಪ ಮನವಿ ಮಾಡಿದ್ದರು. ಈ ಕುರಿತು ಸಿಎಂ ಬೊಮ್ಮಾಯಿಗೆ ಬಿಎಸ್ವೈ ಪತ್ರ ಬರೆದಿದ್ದರು. ಆದರೂ ಯಡಿಯೂರಪ್ಪನವರ ಹೆಸರನ್ನು ಕೇಂದ್ರಕ್ಕೆ ಕಳಿಸುವುದಾಗಿ ಸಿಎಂ ಹೇಳಿದ್ದರು.
ಹೀಗಾಗಿ ಹಲವು ದಿನಗಳಿಂದ ವಿಮಾನ ನಿಲ್ದಾಣದ ಹೆಸರು ಚರ್ಚೆಗೆ ಬಂದು ರಾಜಕೀಯ ಸ್ವರೂಪ ಪಡೆದುಕೊಳ್ಳುತ್ತಿತ್ತು. ಕೆಲ ಗಣ್ಯರ ಹೆಸರು ಕೂಡ ಕೇಳಿ ಬಂದಿದ್ದವು. ಇದರಲ್ಲಿ ಮಾಜಿ ಸಿಎಂ ಬಂಗಾರಪ್ಪ, ಯಡಿಯೂರಪ್ಪ ಹೆಸರು ಮುಂಚೂಣಿಯಲ್ಲಿದ್ದವು.
ಈ ನಡುವೆ ಎಲ್ಲ ಗೊಂದಲಕ್ಕೆ ಸ್ವತಃ ಬಿಎಸ್ ಯಡಿಯೂರಪ್ಪ ತೆರೆ ಎಳೆದಿದ್ದಾರೆ. ತಮ್ಮ ಹೆಸರು ಏರ್ ಪೋರ್ಟ್ಗೆ ಇಡುವುದು ಬೇಡ. ಇದಕ್ಕೆ ಸೂಕ್ತ ಹೆಸರು ಅಂದರೇ ರಾಷ್ಟ್ರಕವಿ ಕುವೆಂಪು. ಹೀಗಾಗಿ ಅವರ ಹೆಸರೇ ಶಿವಮೊಗ್ಗ ಏರ್ ಪೋರ್ಟ್ ಇಡಲಾಗುತ್ತಿದೆ. ಈ ಕುರಿತು ಅಧಿವೇಶನದಲ್ಲಿ ನಾನೇ ಪ್ರಸ್ತಾಪ ಮಾಡಿ ಒಮ್ಮತ ನಿರ್ಧಾರದಿಂದ ಕೇಂದ್ರಕ್ಕೆ ರವಾನೆ ಮಾಡುತ್ತೇನೆ. ಫೆ.27ಕ್ಕೆ ಮೋದಿ ಅವರೇ ಕುವೆಂಪು ಹೆಸರು ಘೋಷಣೆ ಮಾಡಲಿದ್ದಾರೆ ಎಂದು ಹೇಳುವ ಮೂಲಕ ಚರ್ಚೆಗಳಿಗೆ ಪೂರ್ಣ ವಿರಾಮ ನೀಡಿದ್ದಾರೆ.