ಸುಪಾರಿ ಕೊಟ್ಟು ಹೆತ್ತ ತಂದೆಯನ್ನೇ ಕೊಲೆ ಮಾಡಿಸಿದ ಪಾಪಿಪುತ್ರ? | JANATA NEWS
ಬೆಂಗಳೂರು : ಆಸ್ತಿ ವಿಚಾರಕ್ಕೆ ಮಗನೇ ಸುಪಾರಿ ನೀಡಿ ತಂದೆಯನ್ನು ಕೊಲೆ ಮಾಡಿಸಿರುವ ಭೀಕರ ಘಟನೆ ಮಾರತ್ತಹಳ್ಳಿ ಸಮೀಪದ ಪಣತ್ತೂರಿನ ಕಾವೇರಪ್ಪ ಲೇಔಟ್ನಲ್ಲಿ ನಡೆದಿದೆ..
ಮೊದಲ ಪತ್ನಿಯನ್ನು ಕೊಂದು ಜೈಲು ಸೇರಿದ್ದ ಮಗ, ಎರಡನೇ ಪತ್ನಿಗೂ ವಂಚಿಸಿದ್ದ. ಸೊಸೆ ಮತ್ತು ಮೊಮ್ಮಗಳ ಜೀವನಕ್ಕಾಗಿ ಸೈಟ್ ಬರೆದುಕೊಡಲು ಮುಂದಾದ ಅಪ್ಪನನ್ನೇ ಮಗ, ಸುಪಾರಿ ಕೊಟ್ಟು ಹತ್ಯೆ ಮಾಡಿಸಿದ್ದಾನೆ ಎಂದು ಹೇಳಲಾಗುತ್ತಿದೆ.
ನಾರಾಯಣಸ್ವಾಮಿ (70) ಕೊಲೆಯಾದ ದುರ್ದೈವಿ ತಂದೆ. ಪುತ್ರ ಮಣಿಕಂಠ (37) ಎಂಬಾತನಿಂದ ಸುಪಾರಿ ಶಂಕೆ ವ್ಯಕ್ತವಾಗಿದೆ. ಕಳೆದ ಫೆಬ್ರವರಿ 13 ರ ಬೆಳಗ್ಗೆ 10 ಗಂಟೆಗೆ ಪಣತ್ತೂರಿನ ಕಾವೇರಪ್ಪ ಲೇಔಟ್ನಲ್ಲಿ ನಾರಾಯಣಸ್ವಾಮಿ ಅವರ ಹತ್ಯೆ ನಡೆದಿತ್ತು. ಕೊಲೆ ಬಳಿಕ ಮಗ ಮಣಿಕಂಠ ಏನೂ ಗೊತ್ತಿಲ್ಲದಂತೆ ತಂದೆಯ ಅಂತ್ಯಕ್ರಿಯೆ ಮಾಡಿದ್ದಾನೆ. ಪುತ್ರನ ಕೌಟುಂಬಿಕ ಕಲಹವೇ ಈ ಕೊಲೆಗೆ ಕಾರಣ ಎನ್ನಲಾಗಿದೆ.
ಆರೋಪಿ ಮಣಿಕಂಠ ಈ ಹಿಂದೆ ತನ್ನ ಮೊದಲ ಪತ್ನಿಯನ್ನು ಕೊಂದು ಜೈಲು ಸೇರಿದ್ದ. ಜೈಲಿನಿಂದ ಹೊರಬಂದು ಮೊದಲ ವಿವಾಹ ಮುಚ್ಚಿಟ್ಟು ಎರಡನೇ ವಿವಾಹವಾಗಿದ್ದ. ಆದರೂ ಬೇರೊಬ್ಬ ಮಹಿಳೆ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದನಂತೆ.
ಈ ವಿಚಾರ ಎರಡನೇ ಪತ್ನಿಗೆ ಗೊತ್ತಾಗಿ ಪತಿಯಿಂದ ದೂರವಿದ್ದಳು. ಡಿವೋರ್ಸ್ ವಿಚಾರವಾಗಿಯೂ ಮಾತುಕತೆ ನಡೆಯುತ್ತಿತ್ತು.
ಎರಡನೇ ಪತ್ನಿಗೆ ಒಂದು ಹೆಣ್ಣು ಮಗಳಿದ್ದಳು. ಆದರೆ, ಡಿವೋರ್ಸ್ ಕೊಡುವುದು ಬೇಡ ಅಂತಾ ಮಾವ ನಾರಾಯಣಸ್ವಾಮಿ ಕೇಳಿಕೊಂಡಿದ್ದ. ಡಿವೋರ್ಸ್ ಬಳಿಕ ಸೊಸೆ ಹಾಗೂ ಮೊಮ್ಮಗಳ ಜೀವನ ನಿರ್ವಹಣೆ ಕಷ್ಟ ಆಗುತ್ತದೆ ಅಂತಾ ಸೈಟ್ ಒಂದನ್ನು ಅವರ ಹೆಸರಿಗೆ ಮಾಡಲು ಮುಂದಾಗಿದ್ದ. ಆದರೆ ಇದು ಮಣಿಕಂಠನಿಗೆ ಇಷ್ಟವಿರಲಿಲ್ಲ. ಹಾಗಾಗಿ ತಂದೆ ಕೊಲೆಗೆ ಮಣಿಕಂಠನೇ ಸುಪಾರಿ ನೀಡಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ.
ಸುಪಾರಿ ಪಡೆದು ಬಂದವರು ನಾರಾಯಣಸ್ವಾಮಿ ಅವರನ್ನ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಮಾರತ್ತಹಳ್ಳಿ ಪೊಲೀಸರು ಮಣಿಕಂಠನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.