ಶಿವಾಜಿ ಮೂರ್ತಿ ಅನಾವರಣ: ರಮೇಶ್ ಜಾರಕಿಹೊಳಿ V/S ಲಕ್ಷ್ಮೀ ಹೆಬ್ಬಾಳ್ಕರ್ | JANATA NEWS
ಬೆಳಗಾವಿ : ಯಳ್ಳೂರು ರಾಜಹಂಸಗಡ ಕೋಟೆಯಲ್ಲಿ ಪ್ರತಿಷ್ಠಾಪಿಸಲು ಹೊರಟಿರುವ ಬೃಹತ್ ಶಿವಾಜಿ ಮೂರ್ತಿ ವಿಚಾರ ಈಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ.
ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ಸರ್ಕಾರಿ ಶಿಷ್ಟಾಚಾರ ಉಲ್ಲಂಘಿಸಿ ರಾಜಹಂಸಗಡದಲ್ಲಿ ನಿರ್ಮಾಣ ಆಗುತ್ತಿರುವ ಶಿವಾಜಿ ಮಹಾರಾಜರ ಪುತ್ಥಳಿ ಅನಾವರಣ ಮಾಡುವುದಕ್ಕೆ ಹೋಗುತ್ತಿದ್ದಾರೆ ಇದನ್ನು ನಾನು ಖಂಡಿಸುತ್ತೇನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು. ರಾಜಹಂಸಗಡದಲ್ಲಿ ಶಿವಾಜಿ ಮಹಾರಾಜರ ಪುತ್ಥಳಿ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಪೂರ್ಣ ಪ್ರಮಾಣದ ಕಾಂಗ್ರೆಸ್ ಕಾರ್ಯಕ್ರಮವನ್ನಾಗಿ ಮಾಡುವುದಕ್ಕೆ ಹೋಗುತ್ತಿದ್ದಾರೆ, ನಾನು ಆ ರೀತಿ ಆಗುವುದಕ್ಕೆ ಬಿಡುವುದಿಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮತ್ತೋಮ್ಮೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಸಮರ ಸಾರಿದ್ದಾರೆ.
ಈ ಕುರಿತು ಪತ್ರಿಕೆಯಲ್ಲಿ ಬಂದ ನಂತರ ನಮಗೆ ಕಾರ್ಯಕ್ರಮದ ಕುರಿತು ಗೊತ್ತಾಗಿದೆ. 2010ರಿಂದ ಕೋಟೆ ಅಭಿವೃದ್ಧಿಯಾಗುತ್ತಿದೆ. ಅಭಿವೃದ್ಧಿ ವಿಚಾರದಲ್ಲಿ ನಮಗೆ ಯಾವುದೇ ಅಭ್ಯಂತರ ಇಲ್ಲ. ಆದರೆ ಇದನ್ನು ಪಕ್ಷದ ಕಾರ್ಯಕ್ರಮ ಮಾಡುವುದಕ್ಕೆ ನಮ್ಮ ವಿರೋಧವಿದೆ. ಇದು ಸರಕಾರಿ ಕಾರ್ಯಕ್ರಮ ಆಗಬೇಕು. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಮತ್ತು ಜಿಲ್ಲಾಧಿಕಾರಿ ಜತೆಗೆ ಚರ್ಚಿಸುತ್ತೇನೆ ಎಂದು ಹೇಳಿದರು.
ಈ ಹಿಂದೆ ಪ್ರವಾಸೋದ್ಯಮ ಸಚಿವರಾಗಿದ್ದ ಸಿ.ಟಿ.ರವಿ ಅವರ ಬಳಿ ನಾನು ಪ್ರಸ್ತಾವನೆ ಸಲ್ಲಿಸಿದ್ದೆ. ಸಿ.ಟಿ.ರವಿ ಅವರು ಮೂರೂವರೆ ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದರು. ಕಾಂಗ್ರೆಸ್ ಸರ್ಕಾರ ಏನು ಅನುದಾನ ಕೊಟ್ಟಿಲ್ಲ ಎಂದರು. ಬಡಾಲ ಅಂಕಲಗಿಯ ಕೌರಿಗುಡ್ಡದಲ್ಲಿ ಒಂದು ಕೋಟಿ ಅನುದಾನದಲ್ಲಿ ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣನ ಮೂರ್ತಿಗಳ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಿದ್ದೆ. ನಾವು ಎಲ್ಲ ಧರ್ಮ, ಜಾತಿಗಳನ್ನು ಒಟ್ಟಿಗೆ ಕರೆದುಕೊಂಡು ಹೋಗುತ್ತೇವೆ. ನಾನು ಚನ್ನಮ್ಮ ಎಂದು ಹೇಳಿಕೊಳ್ಳುವ ಅವರಂತೆ ನಾನು ಶಿವಾಜಿ ಮಹಾರಾಜರಿಗೆ ನನ್ನನ್ನು ಹೋಲಿಕೆ ಮಾಡಿಕೊಳ್ಳಲ್ಲ ಎಂದು ಮಾಜಿ ಶಾಸಕ ಸಂಜಯ್ ಪಾಟೀಲ್ ಕುಟುಕಿದರು.
ಒಂದೇ ಒಂದು ರೂಪಾಯಿ ಅನುದಾನ ಬಿಡುಗಡೆ ಆಗಿದ್ದರೆ ಅದು ಬಿಜೆಪಿ ಸರ್ಕಾರದಲ್ಲಿಯೇ ಹೊರತು, ಕಾಂಗ್ರೆಸ್ ಸರ್ಕಾರದಲ್ಲಿ ಯಾವುದೇ ರೀತಿ ಹಣ ಬಿಡುಗಡೆ ಮಾಡಿಲ್ಲ. ಅವರ ಸರ್ಕಾರ ಇದ್ದಾಗ ಅನುದಾನ ಬಿಡುಗಡೆ ಮಾಡಿಸಿಲ್ಲ. ಅವರಂತೆ ನಾನು ಸಗಣಿ ತಿನ್ನುವುದಿಲ್ಲ, ಶಿವಾಜಿ ಮಹಾರಾಜರ ಮೂರ್ತಿ ನಿರ್ಮಾಣಕ್ಕೆ ನಾನು ವಿರೋಧ ಪಡಿಸಿಲ್ಲ. ಮೋಸದ ಎರಡನೇ ಹೆಸರು ಲಕ್ಷ್ಮೀ ಹೆಬ್ಬಾಳ್ಕರ್, ಗ್ರಾಮೀಣ ಕ್ಷೇತ್ರದಲ್ಲಿ ಗಡದೇವರಮಠಗೆ ಟಿಕೆಟ್ ತಪ್ಪಿಸಿ, ಗಡದೇವರಮಠ ಮತ್ತು ರಮೇಶ್ ಜಾರಕಿಹೊಳಿ ಅವರಿಗೂ ಲಕ್ಷ್ಮೀ ಹೆಬ್ಬಾಳ್ಕರ ಮೋಸ ಮಾಡಿದ್ದಾರೆ ಎಂದು ಸಂಜಯ್ ಪಾಟೀಲ್ ಆರೋಪಿಸಿದರು.
ಈಗಾಗಲೇ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಶಿವಾಜಿ ಮಹಾರಾಜರ ಪುತ್ಥಳಿ ಉದ್ಘಾಟನೆ ದಿನಾಂಕ ಘೋಷಣೆ ಮಾಡಿದ್ದಾರೆ, ಆದರೆ ಇಲ್ಲಿ ಸಂಪೂರ್ಣವಾಗಿ ಸರ್ಕಾರ ಶಿಷ್ಟಾಚಾರ ಉಲ್ಲಂಘಿಸಿ ಅವರು ಕಾರ್ಯಕ್ರಮ ಮಾಡುತ್ತಿದ್ದಾರೆ, ಇದಕ್ಕೆ ನಾವು ಅವಕಾಶ ನೀಡುವುದಿಲ್ಲ, ಶಿಷ್ಟಾಚಾರ ಪ್ರಕಾರ ಕಾರ್ಯಕ್ರಮ ಮಾಡುತ್ತಿದ್ದರೆ ನಮ್ಮ ವಿರೋಧವಿಲ್ಲ ಎಲ್ಲರೂ ಜೊತೆಯಾಗಿ ಶಿವಾಜಿ ಮಹಾರಾಜರ ಪುತ್ಥಳಿ ಉದ್ಘಾಟನೆ ಮಾಡಲಾಗುವುದು ಎಂದು ಸಹಮತಿ ಸೂಚಿಸಿದರು.
ನಾವು ಯಾವುದೇ ಶಿಷ್ಟಾಚಾರ ಉಲ್ಲಂಘಿಸಿ ಕಾರ್ಯಕ್ರಮ ಮಾಡುತ್ತಿಲ್ಲ ಎಂಎಲಸಿ ಚನ್ನರಾಜ್ ಹಟ್ಟಿಹೋಳಿ ಹೇಳಿಕೆಗೆ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಪ್ರತಿಕ್ರಿಯೆಸಿ , ಚನ್ನರಾಜ್ ಹಟ್ಟಿಹೋಳಿ ಬಾಗಿಲು ಕಾದು ಎಂಎಲ್ಸಿ ಆಗಿರುವ ಹುಡುಗ, ಹೋರಾಟ ಮಾಡಿ, ಸಂಘಟನೆ ಮಾಡಿದ ಮನುಷ್ಯ ಅಲ್ಲ ಅವನ ಬಗ್ಗೆ ನಾನು ಹೆಚ್ಚಿಗೆ ಮಾತನಾಡುವುದಕ್ಕೆ ಹೋಗುದಿಲ್ಲ ಎಂದು ಹೇಳಿದರು.