IPS ಹಾಗೂ IAS ಅಧಿಕಾರಿಗಳ ಜಟಾಪಟಿ: ಸರಕಾರ ಇದೆಯಾ? ಇಲ್ಲವಾ? ಎನ್ನುವ ಅನುಮಾನ ಉಂಟಾಗಿದೆ! | JANATA NEWS
ಬೆಂಗಳೂರು : ಇಬ್ಬರು ಹಿರಿಯ ಮಹಿಳಾ ಅಧಿಕಾರಿಗಳ ಜಟಾಪಟಿ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ ಹೆಚ್.ಡಿ.ಕುಮಾರಸ್ವಾಮಿ ಅವರು ಸರಕಾರ ಇದೆಯಾ? ಇಲ್ಲವಾ? ಎನ್ನುವ ಅನುಮಾನ ಉಂಟಾಗಿದೆ ಎಂದರು.
ಎಚ್ಡಿ ಕುಮಾರಸ್ವಾಮಿ ಮಾತನಾಡಿ, ರೋಹಿಣಿ-ರೂಪಾ ಜಟಾಪಟಿ ನೋಡ್ತಿದ್ರೆ ಸರ್ಕಾರ ಇದ್ಯಾ ಇಲ್ವಾ ಅನ್ನಿಸ್ತಿದೆ. ಸರ್ಕಾರದ ಕೆಡರ್ ನಲ್ಲಿ ಇರೋ ಅಧಿಕಾರಿಗಳು ಈ ರೀತಿ ಮಾಡ್ತಾರೆ ಅಂದ್ರೆ ಏನು? ನಾನು ನೋಡಿದ ಹಾಗೇ ಸರ್ಕಾರ ಇಂತಹದ್ದನ್ನು ಗಮನಿಸಬೇಕು.
ಸಿಎಸ್ಗೆ ಮಾಹಿತಿ ನೀಡಬೇಕು. ಆದ್ರೆ ಇದನ್ನು ನೋಡ್ತಿದ್ರೆ ಅಧಿಕಾರಿಗಳಿಗೆ ಸರ್ಕಾರ ಅಂದ್ರೆ ಭಯವೇ ಇಲ್ಲ ಎಂದೆನಿಸುತ್ತಿದೆ. ಗೃಹ ಸಚಿವರು ಏನ್ಮಾಡ್ತಿದ್ದಾರೆ? ಸರ್ಕಾರಿ ಅಧಿಕಾರಿಗಳನ್ನು ದೇವಮಾನವರು ಅಂತಾರೆ. ಅವ್ರೇನು ದೇವಲೋಕದಿಂದ ಬಂದಿದ್ದಾರಾ? ಇದೆಲ್ಲ ನೋಡ್ತಿದ್ರೆ ನಗಬೇಕೋ ಅಳಬೇಕೋ ಗೊತ್ತಾಗ್ತಿಲ್ಲ ಎಂದು ಸರ್ಕಾರದ ಕಾಲೆಳೆದರು.
ಅಧಿಕಾರಿಗಳಿಗೆ ಒಂದಿಷ್ಟು ಮಾರ್ಗಸೂಚಿಗಳು, ನಿಯಮಾವಳಿಗಳು ಇವೆ. ಅವರು ಜನತೆಗೆ ಉತ್ತರದಾಯಿ ಆಗಿರಬೇಕು. ಅವರು ಸೋಷಿಯಲ್ ಮೀಡಿಯಾದಲ್ಲಿ ಹಾದಿ ರಂಪ ಬೀದಿ ರಂಪ ಮಾಡಿಕೊಳ್ಳುವ ಬದಲು ಮುಖ್ಯ ಕಾರ್ಯದರ್ಶಿ ಬಳಿ ಹೋಗಿ ಸಮಸ್ಯೆ ಪರಿಹಾರ ಮಾಡಿಕೊಳ್ಳಬಹುದಿತ್ತು. ಇದೊಂದೇ ಅಲ್ಲ, ಅನೇಕ ಪ್ರಕರಣಗಳು ನಡೆದಿವೆ. ಅಧಿಕಾರಿಗಳಿಗೆ ಸರ್ಕಾರದ ಮೇಲೆ ಗೌರವ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗೃಹ ಸಚಿವರು ಸರಕಾರಿ ಅಧಿಕಾರಿಗಳನ್ನು ದೇವ ಮಾನವರು ಅಂತಾರೆ. ಹಾಗೆಂದರೆ ಏನರ್ಥ? ಅವರೇನು ಇಂದ್ರಲೋಕದಿಂದ ಇಳಿದು ಬಂದವರಾ? ಇದೆಲ್ಲಾ ವಿಚಾರಗಳು ನನಗೆ ಗೊತ್ತಿದೆ. ಸಾರಾ ಮಹೇಶ್ ಅವರ ಮೇಲೆ ಒಬ್ಬ ಮಹಿಳಾ ಅಧಿಕಾರಿ ಆರೋಪ ಮಾಡಿದ್ದು ಗೊತ್ತಿದೆ, ಆ ಅಧಿಕಾರಿ ಎಲ್ಲಿ ಹೋದರೂ ವಿವಾದವೇ. ಯಾಕೆ ಬೇಕು ಇಂಥ ವಿವಾದಗಳು? ನನಗೆ ಗೊತ್ತಿರುವ ಕೆಲ ಮಾಹಿತಿಗಳನ್ನು ಹೊರಗೆ ಇಟ್ಟರೆ ಸರಕಾರಕ್ಕೆ ತಲೆ ಎತ್ತಿ ನಿಲ್ಲಲು ಆಗುವುದಿಲ್ಲ ಎಂದರು.