ಒಂದೇ ಕುಟುಂಬದ ನಾಲ್ವರ ಹತ್ಯೆ, ವಿಶೇಷ ಪೊಲೀಸ್ ತಂಡಗಳ ರಚನೆ, ತೀವ್ರಗೊಂಡ ತನಿಖೆ! | JANATA NEWS
ಉತ್ತರಕನ್ನಡ : ಭಟ್ಕಳ ತಾಲೂಕಿನ ಹಾಡುವಳ್ಳಿಯ ಒಣಿಬಾಗಿಲು ಎನ್ನುವಲ್ಲಿ ಕುಟುಂಬದ ನಾಲ್ವರನ್ನು ಹತ್ಯೆಗೈದ ಪ್ರಕರಣವನ್ನು ಭೇದಿಸಲು ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ.
ಭಟ್ಕಳ ಸಮೀಪದ ಓಣಿಬಾಗಿಲು ಗ್ರಾಮದಲ್ಲಿ ಎಶಂಭು ಭಟ್ (65), ಅವರ ಪತ್ನಿ ಮಾದೇವಿ (60), ಮಗ ರಾಜೀವ್ (40) ಮತ್ತು ಸೊಸೆ ಕುಸುಮಾ (35) ಅವರನ್ನು ಕತ್ತಿಯಿಂದ ಕಡಿದು ಕೊಲೆ ಮಾಡಲಾಗಿದೆ.
ಮನೆಯ ಹೊರಗಡೆ ನಾಲ್ವರ ಶವ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಶಂಭು ಭಟ್ ಅವರ ಹಿರಿಯ ಸೊಸೆ ವಿದ್ಯಾ ಭಟ್ ಸಹೋದರ ವಿನಯ್ ಈ ಕೊಲೆ ಮಾಡಿದ್ದ ಎನ್ನಲಾಗಿದೆ.
ಶಂಭು ಭಟ್ಟರ ಹಿರಿಯ ಪುತ್ರ ಶ್ರೀಧರ ಶಂಭು ಭಟ್ಟ ಇವರು ಕಳೆದ ಕೆಲವು ಸಮಯದಿಂದ ಕಿಡ್ನಿ ವೈಫಲ್ಯಕ್ಕೊಳಗಾಗಿದ್ದು ಸುಮಾರು ಆರು ತಿಂಗಳ ಹಿಂದೆ ಡಯಾಲಿಸಿಸ್ ಮಾಡುತ್ತಿರುವಾಗಲೇ ಕೊನೆಯುಸಿರೆಳೆದಿದ್ದರು. ಅವರ ಮರಣದ ದಿನದಿಂದಲೇ ಆಸ್ತಿ ಜಗಳ ಶುರುವಾಗಿದೆ.
ಹಿರಿಯ ಮಗ ಹಾಗೂ ಸೊಸೆ ಮೂಲ ಮನೆಯಲ್ಲಿಲ್ಲದೇ ತಮ್ಮ ಪೌರೋಹಿತ್ಯ ವೃತ್ತಿಗಾಗಿ ನಗರದಲ್ಲಿ ಮನೆ ಮಾಡಿಕೊಂಡಿದ್ದರು. ಮಗ ತೀರಿ ಹೋದ ನಂತರ ಸೊಸೆ ಇಲ್ಲಿಯೇ ಇದ್ದು ಆಕೆಯ ಸಹೋದರ ವಿನಯ ಈತನು ಆಗಾಗ ಹಾಡುವಳ್ಳಿಗೆ ಹೋಗಿ ಪಾಲು ಕೊಡುವಂತೆ ಜಗಳ ಮಾಡಿದ್ದರಿಂದ ಶಂಭು ಭಟ್ಟರು ಇಬ್ಬರು ಗಂಡು ಮಕ್ಕಳು, ಮೂವರು ಹೆಣ್ಣು ಮಕ್ಕಳು ಹಾಗೂ ತಾವು ಪತಿ-ಪತ್ನಿ ಹೀಗೆ ಆಸ್ತಿಯನ್ನು ಪಾಲು ಮಾಡಿ ಕೊಟ್ಟಿದ್ದರು.
ಶುಕ್ರವಾರ ಬೆಳಿಗ್ಗೆ ಕೊಟ್ಟಿಗೆ ಕಟ್ಟುತ್ತಿರುವ ಕುರಿತು ತಕರಾರು ಮಾಡಿದ್ದರೆನ್ನಲಾಗಿದೆ. ಬೆಳಿಗ್ಗೆಯಷ್ಟೇ ಕೊಟ್ಟಿಗೆ ವಿಚಾರವಾಗಿ ಜಗಳ ಆಗಿದ್ದು ಮಧ್ಯಾಹ್ನ ಈ ಬರ್ಬರ ಕೃತ್ಯ ನಡೆದು ಹೋಗಿದೆ. ಈಗಾಗಲೇ ದೂರು ನೀಡಿದಂತೆ ಹಿರಿಯ ಸೊಸೆ ವಿದ್ಯಾ ಹಾಗೂ ಆಕೆಯ ತಂದೆ ಶ್ರೀಧರ ಇವರ ಕುಮ್ಮಕ್ಕಿನಿಂದ ವಿನಯ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಕೊಲೆಯ ಹಿಂದೆ ಹಿರಿಯ ಸೊಸೆಯ ಪಾತ್ರವಿದೆ ಎಂದು ಪೊಲೀಸರು ಶಂಕಿಸಿದ್ದು, ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಭಟ್ಕಳ ಡಿವೈಎಸ್ಪಿ ಮತ್ತು ಸಿಪಿಐ ನೇತೃತ್ವದಲ್ಲಿ ತಂಡಗಳನ್ನು ರಚಿಸಲಾಗಿದೆ.