ಅತ್ತೆಯ ಕತ್ತು ಕೊಯ್ದು ಬರ್ಬರವಾಗಿ ಕೊಲೆಗೈದ ಅಳಿಯ! | JANATA NEWS
ಬೆಂಗಳೂರು : ಅತ್ತೆಯನ್ನೇ ಅಳಿಯ ಕೊಚ್ಚಿ ಕೊಲೆಗೈದಿರುವ ಘಟನೆ ಕೆಂಗೇರಿ ಠಾಣಾ ವ್ಯಾಪ್ತಿಯ ನಾಗದೇವನಹಳ್ಳಿಯ ಬೃಂದಾವನ ಲೇಔಟ್ನಲ್ಲಿ ನಡೆದಿದೆ.
ಏಳರಸಿ (48) ತನ್ನ ಅಳಿಯ ದಿವಾಕರ್ (38) ನಿಂದ ಕೊಲೆಯಾದ ಮಹಿಳೆಯಾಗಿದ್ದಾರೆ. ದಿವಾಕರ್ ಕೊಲೆಗೈದು ಪರಾರಿಯಾಗಿರುವ ಆರೋಪಿಯಾಗಿದ್ದಾನೆ.
ಮೃತ ಏಳರಸಿಯ ಮೊದಲನೇ ಮಗಳು ತಮಿಳರಸಿಯ ಜೊತೆಗೆ ದಿವಾಕರ್ ವಿವಾಹವಾಗಿದ್ದು, ಕೆಜಿಎಫ್ ಬಳಿ ವಾಸವಿದ್ದನು. ಮದುವೆಯಾಗಿ 12 ವರ್ಷಗಳಾಗಿದ್ದು, ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ಕೂಡ ಇದ್ದಾರೆ. ಈ ಹಿಂದೆಯೂ ಸಾಕಷ್ಟು ಬಾರಿ ಹಲವು ಕಾರಣಗಳಿಗೆ ಇಬ್ಬರ ಮಧ್ಯೆ ಗಲಾಟೆಗಳಾಗಿ, ಕೋರ್ಟ್ವರೆಗೂ ಹೋಗಿತ್ತು. ನಂತರ ಕಾಂಪ್ರಮೈಸ್ ಆಗಿ ಇಬ್ಬರು ಜೊತೆಯಾಗಿಯೇ ಜೀವನ ನಡೆಸುತ್ತಿದ್ದರು ಎನ್ನಲಾಗಿದೆ.
ಶಿವರಾತ್ರಿ ಹಬ್ಬಕ್ಕೆಂದು ತವರಿಗೆ ತೆರಳಿದ್ದ ಪತ್ನಿ ಮನೆಗೆ ಬರುವುದು ವಿಳಂಬವಾಯಿತು ಎಂಬ ಕಾರಣಕ್ಕೆ ಆತ ಹಾಗೂ ಆತನ ಪತ್ನಿ ಮಧ್ಯೆ ಜಗಳವಾಗಿದೆ. ಪತ್ನಿಯ ಮೇಲೆ ಕೋಪಗೊಂಡಿದ್ದ ದಿವಾಕರ್ ಒಬ್ಬಳು ಮಗಳನ್ನು ಬೆಂಗಳೂರಿನ ಬೃಂದಾವನ ಲೇಔಟ್ನಲ್ಲಿರುವ ತನ್ನ ಸಹೋದರಿಯ ಮನೆಗೆ ಕರೆದುಕೊಂಡು ಬಂದಿದ್ದನು. ಎಕ್ಸಾಂ ಇದೆ, ಆದ್ದರಿಂದ ಮಗಳನ್ನು ಕಳುಹಿಸಿಕೊಡುವಂತೆ ಕೇಳಿದ್ದಾರೆ. ಆದರೆ, ಆತ ಕಳುಹಿಸಿಕೊಟ್ಟಿಲ್ಲ.
ದಿವಾಕರ್ ಅವರ ಅತ್ತೆ ಹಾಗೂ ಅವರ ಇನ್ನಿಬ್ಬರು ಮಕ್ಕಳು ಸೇರಿ, ಕೆಂಗೇರಿ ವ್ಯಾಪ್ತಿಯಲ್ಲಿರುವ ದಿವಾಕರ್ನ ತಂಗಿ ಮನೆಗೆ ಬಂದಿದ್ದರು. ಆಗಲೂ ಮಗಳನ್ನು ತಮ್ಮೊಂದಿಗೆ ಕಳುಹಿಸಿಕೊಡುವಂತೆ ಕೇಳಿಕೊಂಡಿದ್ದಾರೆ. ದಿವಾಕರ ಒಪ್ಪದ ಕಾರಣ ಅಳಿಯ ದಿವಾಕರ್ ಹಾಗೂ ಏಳಲ್ ಅರಸಿ ಜೊತೆ ಜಗಳ ನಡೆದಿದೆ. ಮಾತಿಗೆ ಮಾತು ಬೆಳೆದು, ಏಳರಸಿಯ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ, ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ತಡೆಯಲು ಬಂದಿದ್ದ ಆಕೆಯ ಮಗಳ ಕೈಗೆ ಕೂಡ ಗಾಯವಾಗಿತ್ತು. ಘಟನೆ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.