ಜ್ವರವೆಂದು ಖಾಸಗಿ ಆಸ್ಪತ್ರೆಗೆ ದಾಖಲಾದ ಯುವಕ ಸಾವು, ವೈದ್ಯರ ನಿರ್ಲಕ್ಷ್ಯ ಆರೋಪ | JANATA NEWS
ಬೆಂಗಳೂರು : ಜ್ವರವೆಂದು ಖಾಸಗಿ ಆಸ್ಪತ್ರೆಗೆ ದಾಖಲಾದ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ರಾಮಮೂರ್ತಿ ನಗರದಲ್ಲಿ ನಡೆದಿದೆ.
ಬೆಂಗಳೂರಿನ ರಾಮಮೂರ್ತಿ ನಗರದ ನಿವಾಸಿ ವಿಜೇತ್ (24) ಎಂಬ ಯುವಕನಿಗೆ ಮೊನ್ನೆ ಜ್ವರ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಆತನನ್ನು ಸ್ಥಳೀಯ ಕ್ಲಿನಿಕ್ಗೆ ತೆರಳಿ ಇಂಜೆಕ್ಷನ್ ಮಾಡಿಸಿಕೊಂಡಿದ್ದನು.
ಅದು ಸೆಪ್ಟಿಕ್ ಆಗಿದೆ. ತಕ್ಷಣ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಆಸ್ಪತ್ರೆಯವರು ಸರ್ಜರಿ ಮಾಡಬೇಕು ಅಂತಾ ಹೇಳಿ ಸರ್ಜರಿ ಮಾಡಿದ್ದಾರೆ. ಆದರೆ ಕುಟುಂಬಸ್ಥರ ಆರೋಪದ ಪ್ರಕಾರ ಸರ್ಜರಿ ವೇಳೆಯಲ್ಲಿ ತೀವ್ರ ರಕ್ತಸ್ರಾವವಾಗಿದೆ. ಹೀಗಾಗಿ ಆತನ ಪೋಷಕರಿಗೆ ರಕ್ತ ತರುವಂತೆ ತಿಳಿಸಿದ್ದರು. ರಕ್ತ ತರುವಷ್ಟರಲ್ಲಿ ಯುವಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.
ಕುಟುಂಬಸ್ಥರು ವಿಜೇತ್ ಸಾವಿಗೆ ವೈದ್ಯರ ನಿರ್ಲಕ್ಷ್ಯ ಅಂತಾ ಆರೋಪಿಸಿದ್ದಾರೆ. ನಿನ್ನೆ ಆಸ್ಪತ್ರೆಯ ಗ್ಲಾಸ್ ಒಡೆದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕುಟುಂಬದ ಆಕ್ರಂದನ ಮುಗಿಲು ಮುಟ್ಟಿತ್ತು.
ಆದರೆ ವಿಜೇತ್ ಸಾವಿನ ಬಗ್ಗೆ ಆಸ್ಪತ್ರೆಯವರು ಕಾರಣ ಬೇರೆ ನೀಡುತ್ತಿದ್ದಾರೆ. ಹೀಗಾಗಿ ಸಿಟ್ಟಿಗೆದ್ದ ಕುಟುಂಬಸ್ಥರು ರಾಮಮೂರ್ತಿ ನಗರ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ.