ಸಚಿವ ಶಿವರಾಂ ಹೆಬ್ಬಾರ್ ರ ಸಕ್ಕರೆ ಕಾರ್ಖಾನೆ ಯಂತ್ರಕ್ಕೆ ಸಿಲುಕಿ ಕಾರ್ಮಿಕ ಸಾವು | JANATA NEWS
ಹಾವೇರಿ : ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಮಾಲೀಕತ್ವದ ಸಕ್ಕರೆ ಕಾರ್ಖಾನೆಯಲ್ಲಿ ಯಂತ್ರಕ್ಕೆ ಸಿಲುಕಿ ಕಾರ್ಮಿಕನೋರ್ವ ಸಾವನ್ನಪ್ಪಿರುವ ಘಟನೆ ನಡೆದಿದೆ.
ಕಾರ್ಮಿಕನನ್ನು ದುಂಢಸಿ ಗ್ರಾಮದ ನವೀನ ಬಸಪ್ಪ ಚಲವಾದಿ (19) ಎಂದು ಗುರುತಿಸಲಾಗಿದೆ. ಕಾರ್ಖಾನೆಯಲ್ಲಿ ಕಬ್ಬಿನ ಪುಡಿ ತುಂಬುವಾಗ ಈ ದುರ್ಘಟನೆ ಸಂಭವಿಸಿದೆ.
ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಕೋಣನಕೇರಿ ಎಂಬಲ್ಲಿರುವ ವಿವೇಕ ಹೆಬ್ಬಾರ್ ಒಡೆತನದ ಸಕ್ಕರೆ ಕಾರ್ಖಾನೆ ಇದಾಗಿದೆ. ಕಬ್ಬು ತುಂಬುವ ಯಂತ್ರದ ಬೆಲ್ಟಿಗೆ ನವೀನನ ಎರಡು ಕೈಗಳು ಸಿಲುಕಿ ತುಂಡಾಗಿ, ತೀವ್ರ ರಕ್ತಸ್ರಾವದಿಂದ ಕಾರ್ಮಿಕ ನವೀನ್ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಕಾರ್ಖಾನೆಯಲ್ಲಿ ಯಾವುದೇ ಸುರಕ್ಷತಾ ಕ್ರಮವಿರಲಿಲ್ಲ ಕೋಣನಕೇರಿಯ ವಿಐಪಿಎನ್ ಡಿಸ್ಟಿಲರಿ ಕಾರ್ಖಾನೆಯಲ್ಲಿ ಯಾವುದೇ ಸುರಕ್ಷಾ ಕ್ರಮವಿಲ್ಲದೇ, ದೊಡ್ಡ ದೊಡ್ಡ ಯಂತ್ರಗಳ ಬೆಲ್ಟ್ ಹತ್ತಿರ ಕೌಶಲರಹಿತ ಕಾರ್ಮಿಕನಿಂದ ಬುಟ್ಟಿಯಿಂದ ಕಬ್ಬಿನ ಪುಡಿಯನ್ನು ತುಂಬಿ ಹಾಕಿಸಲಾಗುತ್ತಿತ್ತು. ಸ್ಥಳದಲ್ಲಿ ಯಾವುದೇ ಜಾಲರಿ, ಸುರಕ್ಷಾ ಕ್ರಮಗಳಿಲ್ಲದ ಕಾರಣ ಈ ದುರ್ಘಟನೆ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.
ಸದ್ಯ ಘಟನೆಯ ಬಗ್ಗೆ ಕಾರ್ಖಾನೆ ಮಾಲೀಕ ಸೇರಿ ಆರು ಜನರ ವಿರುದ್ಧ ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.