ಬೆಳಗಾವಿಯಲ್ಲಿ ಪಿಎಂ ಕಿಸಾನ್ 13ನೇ ಕಂತು ಬಿಡುಗಡೆ ಮಾಡಿದ ಪ್ರಧಾನಿ ಮೋದಿ | JANATA NEWS
ಬೆಳಗಾವಿ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಕುಂದಾನಗರಿಯ ಮಾಲಿನಿ ಸಿಟಿಯಲ್ಲಿ ನಡೆದ ಸಮಾವೇಶದಲ್ಲಿ ಪಿಎಂ ಕಿಸಾನ್ ಯೋಜನೆಯೆ 13ನೇ ಕಂತಿನ ಹಣವನ್ನು ಬಿಡುಗಡೆ ಮಾಡಿದರು.
ಪಿಎಂ ನರೇಂದ್ರ ಮೋದಿ ಅವರು ಇಂದು ಕರ್ನಾಟಕದ 49 ಲಕ್ಷ ಸೇರಿ ದೇಶದ 8 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ 16,800 ಕೋಟಿ ರೂಪಾಯಿಗಳನ್ನ ಜಮಾ ಮಾಡಿದರು. ಇದರೊಂದಿಗೆ 8 ಕೋಟಿಗೂ ಹೆಚ್ಚು ರೈತರ ಖಾತೆಗಳಿಗೆ ತಲಾ 2 ಸಾವಿರ ರೂ ಜಮೆಯಾಗಲಿದೆ.
ನರೇಂದ್ರ ಮೋದಿ ಅವರು ಮಾತನಾಡಿ, ದೇಶದ ಎಲ್ಲಾ ಫಲಾನುಭವಿ ರೈತರ ಖಾತೆಗಳಿಗೆ ಒಂದು ಕ್ಲಿಕ್ ಮೂಲಕ ಹಣ ವರ್ಗಾವಣೆ ಆಗಿದೆ. ಮಧ್ಯವರ್ತಿಗಳ ಕಾಟ ಇಲ್ಲದೇ ನೇರವಾಗಿ ಹಣ ರೈತರನ್ನು ತಲುಪಿದೆ. ಕಾಂಗ್ರೆಸ್ ಸರ್ಕಾರ ಇದ್ದಾಗ ಕೋಟಿ ಹಣ ಬಿಡುಗಡೆ ಮಾಡಿದರೆ ಪೂರ್ಣವಾಗಿ ಯಾರ ಕೈಗೂ ತಲುಪುತ್ತಿರಲಿಲ್ಲ. ದಶಕಗಳವರೆಗೂ ಕಾಂಗ್ರೆಸ್ಸಿಗರು ರೈತರನ್ನು ಕಡೆಗಣಿಸಿದ್ದರು ಎಂದರು.
ಪ್ರಧಾನಿ ಮೋದಿ ಪುನರ್ ಅಭಿವೃದ್ಧಿ ಪಡಿಸಿದ ಬೆಳಗಾವಿ ರೈಲ್ವೇ ನಿಲ್ದಾಣ, ಲೋಂಟ, ಬೆಳಗಾವಿ, ಘಟಪ್ರಭಾ ಮಾರ್ಗದ ಡಬ್ಲಿಂಗ್ ಯೋಜನೆಗಳನ್ನು ಲೋಕಾರ್ಪಣೆಗೊಳಿಸಿದರು. ಜತೆಗೆ ಜಲ ಜೀವನ್ ಮಿಷನ್ ಅಡಿ ಬೆಳಗಾವಿ ಜಿಲ್ಲೆಯ ಬಹು ಹಳ್ಳಿ ಯೋಜನೆಗಳಿಗೆ ಶಂಕು ಸ್ಥಾಪನೆ ಮಾಡಿದರು.
ಭಾರತದ ಭವಿಷ್ಯದ ದೃಷ್ಟಿಯಿಂದ ಕೃಷಿ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿದ್ದೇವೆ. ಬಜೆಟ್ನಲ್ಲಿ ಈ ಕ್ಷೇತ್ರಕ್ಕೆ 1 ಲಕ್ಷ ಕೋಟಿಗೂ ಹೆಚ್ಚು ಅನುದಾನ ಮೀಸಲಿಡಲಾಗಿದೆ. ರೈತರಿಗೆ ಪಿಎಂ ಪ್ರಮಾಣ್ ಸೇರಿದಂತೆ ಹಲವು ಯೋಜನೆಗಳನ್ನು ಪ್ರಕಟಿಸಿದ್ದೇವೆ ಎಂದು ಪ್ರಧಾನಿಗಳು ಹೇಳಿದರು.
ಈ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಸೇರಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಪ್ರಹ್ಲಾದ್ ಜೋಶಿ, ಸಚಿವ ಗೋವಿಂದ ಕಾರಜೋಳ ಭಾಗಿಯಾಗಿದ್ದರು.