ಶಿವಮೊಗ್ಗದ ವಿಮಾನ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ, ಸಾಮನ್ಯ ಜನರೂ ವಿಮಾನ ಯಾನ ಮಾಡುವಂತಾಗಬೇಕು! | JANATA NEWS
ಶಿವಮೊಗ್ಗ : ಶಿವಮೊಗ್ಗದ ನೂತನ ವಿಮಾನ ನಿಲ್ದಾಣವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಲೋಕಾರ್ಪಣೆಗೊಳಿಸಿದರು. 450 ಕೋಟಿ ರೂ ವೆಚ್ಚದಲ್ಲಿ ಶಿವಮೊಗ್ಗದ ಸೋಗಾನೆಯಲ್ಲಿ ನಿರ್ಮಾಣವಾಗಿರುವ ವಿಮಾನ ನಿಲ್ದಾಣವನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು.
ಶಿವಮೊಗ್ಗದ ಕುವೆಂಪು ವಿಮಾನ ನಿಲ್ದಾಣವನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, ಇದು ಕೇವಲ ಒಂದು ವಿಮಾನ ನಿಲ್ದಾಣವಲ್ಲ, ಇದೊಂದು ಉಡಾನ್ ಅಭಿಯಾನ್. ರೈಲ್ವೇ, ರಸ್ತೆ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದೇನೆ. ಇದರಿಂದ ಶಿವಮೊಗ್ಗದ ಅಕ್ಕಪಕ್ಕದ ಜಿಲ್ಲೆಗಳ ಜನರಿಗೆ ಅನುಕೂಲವಾಗಿದೆ. ಡಬಲ್ ಇಂಜಿನ್ ಸರ್ಕಾರದಿಂದಾಗಿ ಕರ್ನಾಟಕ ಅಭಿವೃದ್ಧಿ ಪಥದ ವೇಗ ಹೆಚ್ಚಾಗಿದೆ ಎಂದು ಹೇಳಿದರು.
ಹವಾಯಿ ಚಪ್ಪಲಿ ಧರಿಸುವವರೂ ವಿಮಾನದಲ್ಲಿ ಪ್ರಯಾಣಿಸ್ಬೇಕು. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಸಣ್ಣಪುಟ್ಟ ನಗರಗಳಿಗೂ ಏರ್ ಪೋರ್ಟ್ ಆಗಿದೆ. ಹವಾಯಿ ಚಪ್ಪಲಿ ಹಾಕಿಕೊಂಡು ಹೋಗುವವರು ವಿಮಾನದಲ್ಲಿ ಪ್ರಯಾಣಿಸುವಂತಾಗಬೇಕು. ಶಿವಮೊಗ್ಗದ ಬಹುದಿನದ ಬೇಡಿಕೆ ಈಗ ಈಡೇರಿದೆ ಎಂದರು. ವಿದೇಶಿಯರು 'ಮೇಡ್ ಇನ್ ಇಂಡಿಯಾ' ವಿಮಾನಗಳಲ್ಲಿ ಪ್ರಯಾಣಿಸುವ ದಿನ ಬರಲಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಇಂದಿನಿಂದ ನಾವು ಇತರ ದೇಶಗಳಿಂದ ವಿಮಾನಗಳನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ಆದರೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಜನರು 'ಮೇಡ್ ಇನ್ ಇಂಡಿಯಾ' ವಿಮಾನಗಳನ್ನು ಬಳಸುವ ದಿನ ದೂರವಿಲ್ಲ. ವಾಯುಯಾನ ಕ್ಷೇತ್ರದಲ್ಲಿನ ನಮ್ಮ ಯೋಜನೆಗಳು ರಾಷ್ಟ್ರದ ಅಭಿವೃದ್ಧಿಯತ್ತ ನಮ್ಮ ಬದ್ಧತೆಯ ಬಗ್ಗೆ ಹೇಳುತ್ತವೆ ಎಂದು ಅವರು ಹೇಳಿದರು.
ಕರ್ನಾಟಕದಲ್ಲಿ ಅಭಿವೃದ್ದಿಯ ರಥ ಸಾಗುತ್ತಿದೆ. ಡಬಲ್ ಇಂಜಿನ್ ಸರ್ಕಾರ ಅಭಿವೃದ್ದಿಯ ಕೆಲಸ ಮಾಡುತ್ತಿದೆ ಎಂದರು. ಆಗುಂಬೆ ಸೂರ್ಯಾಸ್ತವನ್ನು ಎಂದಿಗೂ ಮರೆಯಲು ಆಗಲ್ಲ, ಇಲ್ಲಿ ಜೋಗ ಜಲಪಾತವೂ ಇದೆ. ಸಿಗಂದೂರು ಚೌಡೇಶ್ವರಿ, ಕೋಟೆ ಆಂಜನೇಯ ದೇವಸ್ಥಾನವಿದೆ. ಇಲ್ಲಿಗೆ ವಿಮಾನ ಪ್ರಯಾಣದ ಸಂಪರ್ಕ ಅವಶ್ಯಕವಾಗಿದೆ. ಶಿವಮೊಗ್ಗ ವಿಮಾನ ನಿಲ್ದಾಣದಿಂದ ಅಭಿವೃದ್ಧಿ ಆಗಲಿದೆ. ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ಹೊಸ ರೈಲು ಮಾರ್ಗ ನಿರ್ಮಾಣವಾದ್ರೆ ಸಾಕಷ್ಟು ಅನುಕೂಲವಾಗುತ್ತದೆ. ಹಾವೇರಿವರೆಗೂ ಜನರಿಗೆ ಸಂಪರ್ಕ ಸಾಧ್ಯವಾಗುತ್ತದೆ ಎಂದರು.
ಫೆ.28 ವಿಶೇಷವಾಗಿದ್ದು ಬಿ.ಎಸ್. ಯಡಿಯೂರಪ್ಪ ಅವರ ಜನ್ಮ ದಿನ. ಅವರ ಆರೋಗ್ಯ, ಆಯಸ್ಸು ಹೆಚ್ಚಲಿ ಎಂದು ಆಶಿಸುತ್ತೇನೆ. ಯಡಿಯೂರಪ್ಪ ಅವರು ಬಡವರ ಹಾಗೂ ರೈತರ ಕಲ್ಯಾಣಕ್ಕೆ ಶ್ರಮಿಸಿದ್ದು, ಪ್ರತಿಯೊಬ್ಬ ವ್ಯಕ್ತಿಗೂ ಮಾದರಿಯಾಗಿದ್ದಾರೆ. ಅವರ ಭಾಷಣ ಹಾಗೂ ಜೀವನ ಪ್ರೇರಣೆಯಾಗಿದೆ ಎಂದರು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.