ಶಿವಾಜಿ ಪ್ರತಿಮೆಯನ್ನು ಮತ್ತೊಮ್ಮೆ ಅನಾವರಣಗೊಳಿಸಿದ ಲಕ್ಷ್ಮಿ ಹೆಬ್ಬಾಳ್ಕರ್ | JANATA NEWS
ಬೆಳಗಾವಿ : ರಾಜಹಂಸಗಡ ಕೋಟೆಯಲ್ಲಿ ಇಂದು ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತೊಮ್ಮೆ ಶಿವಾಜಿ ಪ್ರತಿಮೆ ಅನಾವರಣಗೊಳಿಸಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದ ರಾಜಹಂಸಗಡ ಕೋಟೆ ಆವರಣದಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಉದ್ಘಾಟಿಸಿ ಬಳಿಕ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್ , ನಿಮ್ಮೆಲ್ಲರ ಮಗಳಾಗಿ 2018ರಲ್ಲಿ ಪ್ರಮಾಣ ಮಾಡಿದ್ದೆ. ಧೈರ್ಯಕ್ಕೆ ಏನೂ ಲಕ್ಷ್ಮೀ ಹೆಬ್ಬಾಳ್ಕರ್ ಕಡಿಮೆ ಇಲ್ಲ. ಆದ್ರೇ ಇವತ್ತು ಭಾವುಕ ಆಗಿದ್ದೇನೆ. ಕೊಡಬಾರದಷ್ಟು ಕಷ್ಟ ಕೊಡುತ್ತಿದ್ದಾರೆ. ಹೀಗಾಗಿ ಭಾವುಕ ಆಗಿದ್ದೇನೆ.
ನನ್ನ ಮೇಲೆ ಬಿಜೆಪಿ ಸರ್ಕಾರ ಎರಡು ಕೇಸ್ ಹಾಕಿದೆ, ನಾನು ಏನು ಮಾತನಾಡಲಿಲ್ಲ. ಬಹಳ ವಿನಮ್ರತೆಯಿಂದ ಸತ್ಯಮೇವ ಜಯತೇ ಅಂತಾ ಕೆಲಸ ಮಾಡಿದೆ. ಬಹಳ ಜನ ಬರ್ತಾರೆ, ಪಹಣಿ ಮಾಡ್ತಾರಂತೆ. ಶಿಷ್ಟಾಚಾರದ ಪ್ರಕಾರ ಉದ್ಘಾಟನೆ ಮಾಡ್ತಾರಂತೆ. ಸಿಎಂ ಮೇಲೆ ನನಗೆ ಹೆಚ್ಚಿನ ಗೌರವ ಇದೆ, ಅವರದ್ದೇನು ತಪ್ಪಿಲ್ಲ. ಅವರ ಮೇಲೆ ರಾಜಕೀಯ ಒತ್ತಡ ಹಾಕಿ ಶಿವಾಜಿ ಪ್ರತಿಮೆ ಲೋಕಾರ್ಪಣೆ ಮಾಡಿಸಿದ್ದಾರೆ.
ಶಿವಾಜಿ ಪ್ರತಿಮೆ ಇನ್ನೂ ಪೂರ್ಣಗೊಂಡಿರಲಿಲ್ಲ. ಸಂಜಯ್ ಪಾಟೀಲ್, ಗೋಕಾಕ್ ಶಾಸಕ ಇಲ್ಲಿ ಭೇಟಿ ನೀಡಿ ಹೋದ ಬಳಿಕ ಒಂದು ದಿನ ಬರಲಿಲ್ಲ. ಅವರು ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ನಿರತರಾಗಿದ್ದರು. ಅಷ್ಟೇ ಅಲ್ಲದೇ ಅಂದು ನಮ್ಮ ಮಹಾರಾಜರ ಪ್ರತಿಮೆ ಪಕ್ಕದಲ್ಲಿಯೇ ಪೊರಕೆ, ಪೇಂಟ್ ಬಕೆಟ್ ಇತ್ತು. ಕೇವಲ 12 ನಿಮಿಷದಲ್ಲಿ ಅಪೂರ್ಣ ಮೂರ್ತಿ ಉದ್ಘಾಟನೆ ಮಾಡಿ ಅಪಮಾನ ಮಾಡಿದ್ದರು. ಶಿವಭಕ್ತರ ಅಪಮಾನ ಮಾಡಿದ್ರು, ರಾಜಕಾರಣ ಮಾಡಿದ್ದಾರೆ ಎಂದು ಕಿಡಿಕಾರಿದರು.
ಯಾರಾರೋ ಬಂದು ಶಿಷ್ಟಾಚಾರ ಬಂದು ಮಾತನಾಡುತ್ತಾರೆ. ಸಿಎಂ ಬಸವರಾಜ ಬೊಮ್ಮಾಯಿ ಬಗ್ಗೆ ಗೌರವ ಇದೆ. ಅವರ ದಿಕ್ಕು ತಪ್ಪಿಸಿ, ಕರೆದುಕೊಂಡು ಬಂದು ಉದ್ಘಾಟನೆ ಮಾಡಿಸಿದ್ರು. ಅರ್ಧ ಬಣ್ಣ ಬಳಿದ ಮೂರ್ತಿಯನ್ನು 12 ನಿಮಿಷದಲ್ಲಿ ಉದ್ಘಾಟನೆ ಮಾಡಿದ್ರು. ಶಿವಾಜಿ ಮಹಾರಾಜರಿಗೆ ಮಾಡಿದ ದೊಡ್ಡ ಅಪಮಾನ ಎಂದು ಹೆಸರು ಹೇಳದೇ ರಮೇಶ್ ಜಾರಕಿಹೊಳಿ ವಿರುದ್ಧ ಕಿಡಿಕಾರಿದರು.
ತಪ್ಪು ಮಾಡಿದ್ರು, ಪ್ರತಿಷ್ಠಾಪನೆ ವಿಚಾರದಲ್ಲಿ ಅವರು ರಾಜಕೀಯ ಮಾಡಿದ್ರು. ಸಿದ್ದೇಶ್ವರನ ಮೇಲೆ ಪ್ರಮಾಣ ಮಾಡುತ್ತೇನೆ. ಈ ವಿಚಾರದಲ್ಲಿ ನಾನು ರಾಜಕೀಯ ಮಾಡಿಲ್ಲ. ಡಿಕೆ ಶಿವಕುಮಾರ್ ಮಂತ್ರಿಯಾಗಿದ್ದ ವೇಳೆಯಲ್ಲಿ ಮೂರು ತಿಂಗಳಲ್ಲಿ ಅನುದಾನ ಬಿಡುಗಡೆ ಮಾಡಿಸಿದ್ದೆ. ನಂತರ ಕೊವಿಡ್, ಪ್ರವಾಹದಿಂದ ವಿಳಂಬವಾಯಿತು. ಈಗ ಚುನಾವಣೆ ಬಂದಿದೆ. ಪ್ರತಿಮೆ ಉದ್ಘಾಟನೆಯನ್ನ ಚುನಾವಣೆ ಬಳಸುವ ಅವಶ್ಯಕತೆ ನನಗೆ ಇಲ್ಲ. ಪುಣ್ಯದ ಕೆಲಸ ಮಾಡಲು ನನಗೆ ಅವಕಾಶ ಕೊಟ್ಟರಿ ಇದು ನಮ್ಮ ಭಾಗ್ಯ ಎಂದರು. ಈ ಕೆಲಸ ನಾನಲ್ಲ ನಾವು ಎಲ್ಲರೂ ಸೇರಿ ಮಾಡಿದ್ದೇವೆ ಎಂಬ ಅಭಿಮಾನವಿದೆ ಎಂದು ಹೇಳಿದರು.