ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪಗೆ ಮಧ್ಯಂತರ ಜಾಮೀನು ಮಂಜೂರು | JANATA NEWS
ಬೆಂಗಳೂರು : ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪಗೆ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (ಕೆಎಸ್ಡಿಎಲ್) ರಾಸಾಯನಿಕಗಳ ಪೂರೈಕೆಗೆ ಗುತ್ತಿಗೆ ಪಡೆದವರಿಗೆ ಕಾರ್ಯಾದೇಶ ನೀಡಲು ಲಂಚ ಸ್ವೀಕರಿಸಿದ ಗಂಭೀರ ಆರೋಪದಲ್ಲಿ ಸಿಲುಕಿದ್ದ ಕೆಎಸ್ಡಿಎಲ್ ಅಧ್ಯಕ್ಷ ಮಾಡಾಳ್ ವಿರುಪಾಕ್ಷಪ್ಪಗೆ ಇಂದು ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತು.
ನ್ಯಾಯಮೂರ್ತಿ ಕೆ.ನಟರಾಜನ್ ವಿರುಪಾಕ್ಷಪ್ಪ ಅವರು ಅರ್ಜಿ ವಿಚಾರಣೆ ನಡೆಸಿದರು. ಆದೇಶದ ಪ್ರತಿ ಸಿಕ್ಕ 48 ಗಂಟೆಗಳಲ್ಲಿ ತನಿಖಾಧಿಕಾರಿಗಳ ಮುಂದೆ ಹಾಜರಾಗಬೇಕು. 5 ಲಕ್ಷ ರೂ. ಗಳ ಬಾಂಡ್ ನೀಡಬೇಕು. ಸಾಕ್ಷ್ಯಾಧಾರಗಳ ನಾಶಕ್ಕೆ ಮುಂದಾಗಬಾರದು ಎಂದು ನ್ಯಾಯಪೀಠ ಸೂಚನೆ ನೀಡಿ ವಿಚಾರಣೆಯನ್ನು ಮಾರ್ಚ್ 17ಕ್ಕೆ ಮುಂದೂಡಿದೆ.
ಶಾಸಕ ವಿರೂಪಾಕ್ಷಪ್ಪನವರು KSDL ಅಧ್ಯಕ್ಷರಾಗಿದ್ದರು. ಈ ಕೇಸಿಗೂ ವಿರೂಪಾಕ್ಷಪ್ಪ ಅವರಿಗೂ ಸಂಬಂಧವೇ ಇಲ್ಲ. ವಿರೂಪಾಕ್ಷಪ್ಪ ಅವರ ಮಗ ಹಣ ಪಡೆದಿದ್ದಾನೆ ಎಂದು ದೂರು ನೀಡಲಾಗಿದೆ.
ಕೆಮಿಕಲ್ ಒಂದನ್ನ ಸರಬರಾಜು ಮಾಡುವ ಕಂಪನಿಯವರೇ ದೂರುದಾರರು. ದೂರುದಾರನೇ ಪದೆ ಪದೇ ಪ್ರಶಾಂತ್ ಮಾಡಾಳು ಅವರನ್ನ ಭೇಟಿ ಮಾಡಿ ಹಣ ನೀಡಿದ್ದಾರೆ. ಹಣ ನೀಡುವಾಗ ಟ್ರ್ಯಾಪ್ ಮಾಡಲಾಗಿದೆ ಎಂದು ವಿರೂಪಾಕ್ಷಪ್ಪ ಪರ ವಕೀಲರು ವಾದಿಸಿದರು.
KSDL ಟೆಂಡರ್ ಅಂತಿಮಗೊಳಿಸುವ ಅಧಿಕಾರ ವಿರೂಪಾಕ್ಷಪ್ಪರಿಗೆ ಇಲ್ಲ. FIRನಲ್ಲಿ ವಿರೂಪಾಕ್ಷಪ್ಪ ವಿರುದ್ಧ ಯಾವುದೇ ಆರೋಪಗಳಿಲ್ಲ. ಮಾಡಾಳು ಅವರಿಗೆ ವಯಸ್ಸಾಗಿದೆ. ಅಲ್ಲದೇ ಅನಾರೋಗ್ಯ ಸಮಸ್ಯೆಗಳಿವೆ ಎಂದು ಜಾಮೀನಿಗೆ ಮನವಿ ಮಾಡಿಕೊಂಡರು.