ರಾಹುಲ್ ಗಾಂಧಿ ಬ್ರಿಟನ್ಗೆ ಹೋಗಿ ಭಾರತದ ಪ್ರಜಾಪ್ರಭುತ್ವದ ಬಗ್ಗೆ ಬಾಲಿಶ ಹೇಳಿಕೆ ಖಂಡನೀಯ: ಪ್ರಲ್ಹಾದ್ ಜೋಶಿ | JANATA NEWS
ಬಳ್ಳಾರಿ : ಬ್ರಿಟನ್ನಲ್ಲಿ ಭಾರತದ ಪ್ರಜಾಪ್ರಭುತ್ವದ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅತ್ಯಂತ ಬಾಲಿಶವಾಗಿ ಹೇಳಿಕೆ ನೀಡಿರುವುದು ಖಂಡನೀಯ ಎಂದು ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ಬಳ್ಳಾರಿಯಲ್ಲಿ ಮಾತನಾಡಿದ ಸಚಿವ ಪ್ರಲ್ಹಾದ್ ಜೋಶಿ, "ಬ್ರಿಟನ್, ಅಮೆರಿಕಾ ಎಂದು ಓಡಾಡುತ್ತಿರುವ ರಾಹುಲ್ ಗಾಂಧಿ ದೇಶದ ಪ್ರಜಾಪ್ರಭುತ್ವದ ಬಗ್ಗೆ ನೀಡುತ್ತಿರುವ ಹೇಳಿಕೆ ಖಂಡನೀಯ. ರಾಹುಲ್ ಗಾಂಧಿ ಅವರು ಬ್ರಿಟನ್ ನಲ್ಲಿ ಭಾರತದ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದಿದ್ದಾರೆ. ಪ್ರಪಂಚದ ಮೂರನೇ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತ" ಎಂದು ಹೇಳಿದ್ದಾರೆ.
"ರಾಹುಲ್ ಗಾಂಧಿ ಅವರಿಗೆ ಮಾನಸಿಕವಾಗಿ ಏನೋ ಸಮಸ್ಯೆ ಆದ ಹಾಗಿದೆ. ಸತತ ಸೋಲಿನಿಂದ ಹತಾಶರಾಗಿ ಅವರು ದೇಶದ ಪ್ರಜಾಪ್ರಭುತ್ವದ ಬಗ್ಗೆ ಅತ್ಯಂತ ಬಾಲಿಶವಾಗಿ ಮಾತನಾಡುತ್ತಿದ್ದಾರೆ. ಮಾನಸಿಕವಾಗಿ ಅವರಿಗೆ ತೊಂದರೆ ಇದ್ದಂತೆ ಕಾಣ್ತಿದೆ. ಪ್ರತಿಪಕ್ಷಗಳ ಮೈಕ್ ಗಳು ಆಫ್ ಆಗ್ತಾ ಇವೆ ಅಂದಿದ್ದಾರೆ. ಆದರೆ ದೇಶದ ಜನರೇ ಅವರ ಮೈಕ್ ಗಳನ್ನ ಆಫ್ ಮಾಡಿದ್ದಾರೆ ಅನ್ನೋ ಸತ್ಯವನ್ನ ರಾಹುಲ್ ಗಾಂಧಿ ತಿಳಿದುಕೊಳ್ಳಬೇಕು" ಎಂದು ಲೇವಡಿ ಮಾಡಿದ್ದಾರೆ.
ಇತ್ತೀಚೆಗೆ ಲೋಕಸಭೆಯಲ್ಲಿ ಮೋಷನ್ ಆಫ್ ಥ್ಯಾಂಕ್ಸ್ ವೇಳೆ ರಾಹುಲ್ ಗಾಂಧಿ ಅವರಿಗೆ 1 ಗಂಟೆ 9 ನಿಮಿಷ ಮಾತನಾಡಲು ಸಮಯದ ಅವಕಾಶವಿತ್ತು. ಆದ್ರೆ ಸ್ಪೀಕರ್ ಅವರು ಅವರು 2 ಗಂಟೆ ಸಮಯ ಕೊಟ್ಟಿದ್ರು. ಸದನದಲ್ಲಿ ಪ್ರತಿಪಕ್ಷಗಳಿಗೆ ಹೆಚ್ಚಿನ ಕಾಲಾವಕಾಶ ನೀಡಲಾಗ್ತಿದೆ. ಆದರೆ, ಪ್ರತಿಪಕ್ಷಗಳೇ ಸದನದಲ್ಲಿ ಚರ್ಚಿಸದೆ ಗದ್ದಲ ಎಬ್ಬಿಸಿದ್ದನ್ನ ದೇಶದ ಜನ ನೋಡಿದ್ದಾರೆ.
ಹೊರದೇಶಕ್ಕೆ ಹೋಗಿ ದೇಶದ ಪ್ರಜಾಪ್ರಭುತ್ವದ ಬಗ್ಗೆ ನೆಗೆಟಿವ್ ಆಗಿ ಮಾತಾಡುವ ರಾಹುಲ್ ಗಾಂಧಿ ತಮ್ಮ ಅಜ್ಜಿ ತುರ್ತು ಪರಿಸ್ಥಿತಿ ಜಾರಿ ಮಾಡಿದ್ದು ಮರೆತಿದ್ದಾರೆ. ಇಡೀ ಪ್ರಜಾಪ್ರಭುತ್ವದ ವಿರುದ್ಧ ತುರ್ತು ಪರಿಸ್ಥಿತಿ ಹೇರಿ ಸರ್ವಾಧಿಕಾರಿ ಧೋರಣೆ ಅನುಸರಿಸಿದವರು ಕಾಂಗ್ರೆಸ್ ನವರೇ ಎಂದು ಪ್ರಲ್ಹಾದ್ ಜೋಶಿ ತಿರುಗೇಟು ನೀಡಿದ್ದಾರೆ.
ಹೊರದೇಶಕ್ಕೆ ಹೋಗಿ ದೇಶದ ಪ್ರಜಾಪ್ರಭುತ್ವದ ಬಗ್ಗೆ ನೆಗೆಟಿವ್ ಆಗಿ ಮಾತಾಡುವ ರಾಹುಲ್ ಗಾಂಧಿ ತಮ್ಮ ಅಜ್ಜಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಜಾರಿ ಮಾಡಿದ್ದು ಮರೆತಿದ್ದಾರೆ. ಇಡೀ ಪ್ರಜಾಪ್ರಭುತ್ವದ ವಿರುದ್ಧ ತುರ್ತು ಪರಿಸ್ಥಿತಿ ಹೇರಿ ಸರ್ವಾಧಿಕಾರಿ ಧೋರಣೆ ಅನುಸರಿಸಿದವರು ಕಾಂಗ್ರೆಸ್ನವರೇ. ಇಡೀ ಮಂತ್ರಿಮಂಡಲ ಜಾರಿ ಮಾಡಿದ ನಿರ್ಣಯಗಳನ್ನ ಹರಿದುಹಾಕುವ ಮೂಲಕ ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡಿದವರು ರಾಹುಲ್ ಗಾಂಧಿ. ಈಗ ಪ್ರಜಾಪ್ರಭುತ್ವ ತೊಂದರೆಯಲ್ಲಿದೆ ಅಂತಿದ್ದಾರೆ ಎಂದು ಪ್ರಲ್ಹಾದ್ ಜೋಶಿ ಕಿಡಿಕಾರಿದ್ದಾರೆ.