ಮೈಸೂರು-ಬೆಂಗಳೂರು ಹೆದ್ದಾರಿ ಮಳೆ ನೀರು ಹೋಗುವ ಚರಂಡಿಯನ್ನು ಅನಧಿಕೃತವಾಗಿ ಮುಚ್ಚಿದ್ದರು - ಸಂಸದ ಸಿಂಹ | JANATA NEWS
ಬೆಂಗಳೂರು : ಬಹುಶಃ ಬೈದು, ಟೀಕಿಸಿ, ಕುಹಕವಾಡಿ ಸಾಲದು ಎಂದು, ಈಗ ಮಳೆ ನೀರು ಹೋಗುವ ಚರಂಡಿಯನ್ನು ಅನಧಿಕೃತವಾಗಿ ಮುಚ್ಚಿದ್ದರಿಂದ ಮೈಸೂರು-ಬೆಂಗಳೂರು ಹೆದ್ದಾರಿ ಕೆಲಕಾಲ ಈಜುಕೊಳವಾಗಿತ್ತು, ಎಂದು ಮೈಸೂರಿನ ಬಿಜೆಪಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಶುಕ್ರವಾರ ಸಂಜೆ ಬಿದ್ದ ಭಾರಿ ಮಳೆಗೆ ಒಂದು ವಾರ ಹಿಂದೆಯಷ್ಟೆ ಉದ್ಘಾಟನೆಗೊಂಡಿದ್ದ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ಒಂದು ಅಂಡರ್ ಪಾಸ್ ಬಳಿ ಜಲವೃತ ಗೊಂಡಿದೆ ಎಂದು ಟೀಕಿಸಿ ಸಾಕಷ್ಟು ಮಾಧ್ಯಮಗಳು ಸುದ್ಧಿ ಮಾಡಿತ್ತು.
"ಬಹುಶಃ ಬೈದು, ಟೀಕಿಸಿ, ಕುಹಕವಾಡಿ ಮುಗಿಯಿತು ಅಂದುಕೊಳ್ಳುತ್ತೀನಿ! ಮಳೆ ನೀರು ಹೋಗುವ ಚರಂಡಿಯನ್ನು ಯಾರೋ ರಸ್ತೆ ಮಾಡಿಕೊಳ್ಳಲು ಅನಧಿಕೃತವಾಗಿ ಮುಚ್ಚಿದ್ದರಿಂದ ಮೈಸೂರು-ಬೆಂಗಳೂರು ಹೆದ್ದಾರಿ ಕೆಲಕಾಲ ಈಜುಕೊಳವಾಗಿತ್ತು. ಎರಡು ಹುಮೆ ಪೈಪ್ ಹಾಕಿ ಸರಿಪಡಿಸಿದ್ದೇವೆ. ಧನ್ಯವಾದಗಳು." ಎಂದು ಹೇಳಿರುವ ಸಂಸದ ಪ್ರತಾಪ್ ಸಿಂಹ ಸ್ಥಳದ ವಿಡಿಯೋಗಳೊಂದಿಗೆ ಟ್ವೀಟ್ ಮಾಡಿದ್ದಾರೆ.
ಬೆಂಗಳೂರು-ಮೈಸೂರು ಹೆದ್ದಾರಿ ಉದ್ಘಾಟನೆಗೆ ಸಿದ್ದಗೊಳ್ಳುತ್ತಿದ್ದಂತೆ ಕೆಲ ವಿರೋಧಪಕ್ಷದ ಮುಖಂಡರು ಹೈವೇ ನಿರ್ಮಾಣದ ರೂವಾರಿ ನಾವು ಎಂದು ಹೇಳಿಕೆಗೆ ಮುಂದಾಗಿದ್ದು, ಈ ಕುರಿತು ಸಂಸದ ಪ್ರತಾಪ್ ಸಿಂಹ ಅವರ ವಾಗ್ದಾಳಿಯ ಬಳಿಕ, ಹೆದ್ದಾರಿ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ ಎಂದು ವಿರೋಧಪಕ್ಷದ ಮುಖಂಡರಲ್ಲಿ ಹಲವಾರು ದೂಷಿಸಿದ್ದರು.