ತಮ್ಮನನ್ನು ಕೊಂದು ತುಂಡು ತುಂಡು ಮಾಡಿ ಬಿಸಾಡಿದ್ದ ಅಕ್ಕ 8 ವರ್ಷಗಳ ನಂತರ ಸೆರೆ | JANATA NEWS
ಬೆಂಗಳೂರು : ವಿಜಯಪುರ ಜಿಲ್ಲೆಯ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಹತ್ಯೆಗೈದು ಎಂಟು ವರ್ಷಗಳಿಂದ ತಲೆಮರೆಸಿಕೊಂಡಿದ್ದ ದಂಪತಿ ಕೊನೆಗೂ ಮಹಾರಾಷ್ಟ್ರದ ನಾಸಿಕ್ನಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.
2015ರ ಆಗಸ್ಟ್ನಲ್ಲಿ ಎಲೆಕ್ಟ್ರಾನಿಕ್ ಸಿಟಿ ಬಳಿಯ ಜಿಗಣಿ ಇಂಡಸ್ಟ್ರಿಯಲ್ ಏರಿಯಾದಲ್ಲಿ 21 ವರ್ಷದ ಲಿಂಗರಾಜು ಸಿದ್ದಪ್ಪ ಪೂಜಾರಿ ಎಂಬುವವರು ಕೊಲೆಯಾಗಿದ್ದರು. ಮೃತ ದೇಹದ ಭಾಗಗಳು ಜಿಗಣಿಯ ಹಲವೆಡೆ ಪತ್ತೆಯಾಗಿತ್ತು. ಜಿಗಣಿ ಸುತ್ತಮುತ್ತ ಮೂರು ಕಡೆ ಪ್ಲಾಸ್ಟಿಕ್ ಚೀಲದಲ್ಲಿ ಶವದ ತುಂಡುಗಳು ಪೊಲೀಸರಿಗೆ ಸಿಕ್ಕಿದ್ದವು. ಒಂದು ಚೀಲ ಜಿಗಣಿ ಕೆರೆಯಲ್ಲೂ ಸಿಕ್ಕಿತ್ತು. ಆದ್ರೆ, ಮೃತನ ತಲೆ ಮಾತ್ರ ಎಲ್ಲಿಯೂ ಪತ್ತೆ ಆಗಿರಲಿಲ್ಲ.
ಆರೋಪಿಗಳನ್ನು ಭಾಗ್ಯಶ್ರೀ (31) ಮತ್ತು ಆಕೆಯ ಪತಿ ಸುಪುತ್ರ ಶಂಕರಪ್ಪ ತಳವಾರ (32) ಎಂದು ಗುರುತಿಸಲಾಗಿದ್ದು, ಮೂಲತಃ ವಿಜಯುರ ಜಿಲ್ಲೆಯವರಾದ ಲಿಂಗರಾಜು ಸಿದ್ದಪ್ಪ ಪೂಜಾರಿಯನ್ನು ಆಕೆಯ ಸ್ವಂತ ಅಕ್ಕನೇ ಕೊಂದಿರುವುದು ತನಿಖೆ ವೇಳೆ ಬಯಲಾಗಿದೆ
ಆರೋಪಿಗಳಾದ ಭಾಗ್ಯ ಶ್ರೀ ಹಾಗೂ ಶಿವಪುತ್ರ ಕಾಲೇಜು ದಿನಗಳಿಂದಲೂ ಸ್ನೇಹಿತರು. ಇವರಿಬ್ಬರ ಸ್ನೇಹ ವಿಜಯಪುರ ಜಿಲ್ಲೆಯಲ್ಲಿ ಇದ್ದಾಗಲೇ ಪ್ರೇಮಕ್ಕೆ ತಿರುಗಿತ್ತು. ಆದ್ರೆ, ಕುಟುಂಬ ಸದಸ್ಯರು ತಮ್ಮ ಪ್ರೀತಿಯನ್ನು ಒಪ್ಪೋದಿಲ್ಲ ಅನ್ನೋದು ಇವರಿಬ್ಬರಿಗೂ ಗೊತ್ತಿತ್ತು. ಹೀಗಾಗಿ, ಜೊತೆಯಲ್ಲಿ ಬಾಳಲೇ ಬೇಕು ಎಂದು ನಿರ್ಧರಿಸಿದ್ದ ಈ ಜೋಡಿ, 2015ರಲ್ಲಿ ಬೆಂಗಳೂರಿಗೆ ಬಂದಿದ್ದರು. ಜಿಗಣಿ ಸಮೀಪದ ವಡೇರಮಂಚನಹಳ್ಳಿಯಲ್ಲಿ ಬಾಡಿಗೆ ಮನೆಯೊಂದನ್ನು ಪಡೆದು ಇಬ್ಬರೂ ಗಂಡ - ಹೆಂಡತಿ ರೀತಿ ಒಂದೇ ಮನೆಯಲ್ಲಿ ಜೀವನ ಮಾಡುತ್ತಿದ್ದರು. ಜಿಗಣಿ ಕೈಗಾರಿಕಾ ಪ್ರದೇಶದಲ್ಲೇ ಇಬ್ಬರೂ ಕೆಲಸ ಮಾಡುತ್ತಿದ್ದರು.
ವಿಜಯಪುರದಿಂದ ತನ್ನ ಅಕ್ಕ ಪರಾರಿಯಾಗಿ ಬೆಂಗಳೂರಿಗೆ ಹೋಗಿದ್ದಾಳೆ ಎಂದು ಭಾಗ್ಯ ಶ್ರೀ ತಮ್ಮ ಲಿಂಗರಾಜುಗೆ ಗೊತ್ತಾಯ್ತು. ಆಕೆಯನ್ನು ಹುಡುಕಿಕೊಂಡು ಜಿಗಣಿಗೆ ಬಂದ ಲಿಂಗರಾಜುಗೆ ಶಾಕ್ ಕಾದಿತ್ತು. ತನ್ನ ಅಕ್ಕ ಮದುವೆಯನ್ನೇ ಆಗದೆ ಶಿವಪುತ್ರನ ಜೊತೆ ವಾಸ ಮಾಡುತ್ತಿದ್ದಾಳೆ ಎಂದು ಗೊತ್ತಾಗಿ ಸಿಟ್ಟಾಗಿದ್ದ.
ಭಾಗ್ಯಶ್ರೀ ಹಾಗೂ ಶಿವಪುತ್ರನ ಸಂಬಂಧದ ಬಗ್ಗೆ ತಗಾದೆ ತೆಗೆದ ಲಿಂಗರಾಜು, ಇವರಿಬ್ಬರೂ ಇದ್ದ ಬಾಡಿಗೆ ಮನೆಯ ಬಳಿ ಬಂದು ಜಗಳವಾಡಿದ. ಇದರಿಂದ ಕುಪಿತಳಾದ ಭಾಗ್ಯಶ್ರೀ ತನ್ನ ಸಹೋದರನ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದು, ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ನಂತರ ಇಬ್ಬರೂ ಆತನ ಶವವನ್ನು ವಿಲೇವಾರಿ ಮಾಡುವ ಸಲುವಾಗಿ ಶವವನ್ನು ತುಂಡು ತುಂಡಾಗಿ ಕತ್ತರಿಸಿದರು. ಬಳಿಕ ಮೂರ್ನಾಲ್ಕು ದೊಡ್ಡ ದೊಡ್ಡ ಪ್ಲಾಸ್ಟಿಕ್ ಚೀಲಗಳನ್ನು ತಂದು ಅದರಲ್ಲಿ ತುಂಬಿದರು.
ಲಿಂಗರಾಜು ಮೃತದೇಹದ ಕೈಗಳನ್ನು ಕತ್ತರಿಸಿ ತುಂಬಿದ್ದ ಒಂದು ಚೀಲವನ್ನ ಸಮೀಪದ ಮಾಂಸದ ಅಂಗಡಿ ಬಳಿ ಇಟ್ಟು ಬಂದಿದ್ದರು. ಮತ್ತೊಂದು ಚೀಲವನ್ನು ಜಿಗಣಿ ಕೆರೆಗೆ ಬಿಸಾಕಿದ್ದರು. ಬಳಿಕ ಮನೆ ಖಾಲಿ ಮಾಡಿಕೊಂಡು ಬೆಂಗಳೂರನ್ನು ಬಿಟ್ಟು ಪರಾರಿಯಾಗಿದ್ದರು.
ಭಾಗ್ಯಶ್ರೀ ಹಾಗೂ ಶಿವಪುತ್ರನ ಇರುವಿಕೆಯ ಬಗ್ಗೆ ಸುಳಿವು ಸಿಕ್ಕಿ, ಇಬ್ಬರನ್ನೂ ಬಂಧಿಸಿ ಇದೀಗ ಬೆಂಗಳೂರಿಗೆ ಕರೆ ತಂದಿದ್ದಾರೆ.