ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಗಳಿಗೆ ಆಂಬುಲೆನ್ಸ್ ಡಿಕ್ಕಿ, ಇಬ್ಬರ ಸಾವು | JANATA NEWS
ಬೆಂಗಳೂರು : ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಗಳಿಗೆ ಆಂಬುಲೆನ್ಸ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿರುವ ಘಟನೆ ಚಿಕ್ಕಜಾಲ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೈಸೂರಿನ ಪ್ರಕಾಶ್ ಹಾಗೂ ಬನಶಂಕರಿ ಮೂಲದ ನಾಗೇಂದ್ರ ಮೃತ ದುದೈರ್ವಿಗಳು. ಅಪಘಾತವೆಸಗಿದ ಆಂಬುಲೆನ್ಸ್ ಚಾಲಕ ಪ್ರಸನ್ನ ಸ್ಥಳದಿಂದ ಪರಾರಿಯಾಗಿದ್ದು, ವಾಹನದಲ್ಲಿದ್ದ ಸಿಬ್ಬಂದಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಮೃತರಾದ ಪ್ರಕಾಶ್, ನಾಗೇಂದ್ರ ಸೇರಿದಂತೆ 15ಕ್ಕಿಂತ ಹೆಚ್ಚು ಮಂದಿ ಲೆವಿಸ್ಟಾ ಕಾಫಿ ಶಾಪ್ನಲ್ಲಿ ಕೆಲಸ ಮಾಡುತ್ತಿದ್ದರು. ವೃತ್ತಿಗೆ ಸಂಬಂಧಿಸಿದಂತೆ ಹೊಟೇಲ್ವೊಂದರಲ್ಲಿ ಹಮ್ಮಿಕೊಂಡಿದ್ದ ತರಬೇತಿಗಾಗಿ ಬಂದಿದ್ದರು. ಟೀ ಕುಡಿಯಲು ಇಂದು ಬೆಳಗ್ಗೆ ಇಬ್ಬರು ನಡೆದುಕೊಂಡು ಹೋಗುವಾಗ ವೇಗವಾಗಿ ಬಂದ ಅಂಬುಲೆನ್ಸ್ ವಾಹನ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಪ್ರಕಾಶ್ ಸ್ಥಳದಲ್ಲಿ ಮೃತಪಟ್ಟಿರೆ, ಗಾಯಗೊಂಡಿದ್ದ ನಾಗೇಂದ್ರ ಆಸ್ಪತ್ರೆಗೆ ತೆರಳುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.
ಆಂಬುಲೆನ್ಸ್ ನಲ್ಲಿ ರೋಗಿ ಇಲ್ಲದಿದ್ದರೂ ವೇಗವಾಗಿ ಚಾಲನೆ ಮಾಡಿದ ಚಾಲಕ, ಇಬ್ಬರ ಸಾವಿಗೆ ಕಾರಣನಾಗಿದ್ದಾನೆ. ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.