ಸಿಎಂ ನಾನೇ ಎನ್ನುವ ಸಿದ್ದರಾಮಯ್ಯಗೆ ಒಂದು ಕ್ಷೇತ್ರ ಹುಡುಕಿ ಕೊಳ್ಳಲಾಗಲಿಲ್ಲ: ಪ್ರತಾಪ್ ಸಿಂಹ | JANATA NEWS
ಮೈಸೂರು : ಕಾಂಗ್ರೆಸ್ ಪ್ರಶ್ನಾತೀತ ನಾಯಕ ನಾನೇ, ಮುಂದಿನ ಸಿಎಂ ನಾನೇ ಎನ್ನುವ ಸಿದ್ದರಾಮಯ್ಯಗೆ ಒಂದು ಕ್ಷೇತ್ರ ಹುಡುಕಿ ಕೊಳ್ಳಲಾಗಲಿಲ್ಲ. ಊರಿಗೊಬ್ಳೇ ನಾನೇ ಪದ್ಮಾವತಿ ಅಂತಾ ಸಿದ್ದರಾಮಯ್ಯ ಓಡಾಡುತ್ತಿದ್ದರು. ಈಗ ಕೊನೆಗೆ ಹಳೆ ಗಂಡನ ಪಾದವೇ ಗತಿ ಅಂತಾ ವರುಣಾಗೆ ಬಂದಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಟೀಕಿಸಿದರು.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ಸಂಸದ ಪ್ರತಾಪ್ ಸಿಂಹ, ಮಗನ ನೆಲೆ ಕಳೆದು ವರುಣಾಗೆ ಬರುವ ಸ್ಥಿತಿ ಸಿದ್ದರಾಮಯ್ಯ ಅವರಿಗೆ ಬಂತು. ಸಿದ್ದರಾಮಯ್ಯ ಪುಕ್ಕಲತನದಿಂದ ವರುಣಾ ಕ್ಷೇತ್ರಕ್ಕೆ ಬರುತ್ತಿದ್ದಾರೆ. ಕಳೆದ ಬಾರಿ ಸಣ್ಣ ಅಂತರದಿಂದ ಸಿದ್ದರಾಮಯ್ಯ ಎಸ್ಕೇಪ್ (ಬಾದಾಮಿಯಲ್ಲಿ ಅಲ್ಪ ಮತಗಳಿಂದ ಗೆಲುವು) ಆಗಿಬಿಟ್ಟಿದ್ದರು. ಈ ಬಾರಿ ಅವರು ಎಲ್ಲೇ ನಿಂತರು ಸೋಲುತ್ತಾರೆ ಎಂದು ಹೇಳಿದರು.
ಹೈಕಮಾಂಡ್ ಟಿಕೆಟ್ ಕೊಟ್ಟರೆ ನಾನು ಕೋಲಾರದಲ್ಲಿ ಸ್ಪರ್ಧಿಸುತ್ತೇನೆಂದು ಸಿದ್ದರಾಮಯ್ಯ ಹೇಳುತ್ತಾರೆ. ಕ್ಷೇತ್ರ ಕೊಡಲು ಹೈಕಮಾಂಡ್ ರೆಡಿ ಇಲ್ಲವೆಂದ ಮೇಲೆ ಯಾವ ಧೈರ್ಯದ ಮೇಲೆ ಮುಂದಿನ ಸಿಎಂ ನಾನೇ ಎನ್ನುತ್ತಾರೆ? ಟಿಕೆಟ್ ಕೊಡದೆ ಇದ್ದ ಪಕ್ಷ ಅವರಿಗೆ ಸಿಎಂ ಸ್ಥಾನ ಕೊಡುತ್ತಾ? 2018 ರಲ್ಲೇ ಸಿದ್ದರಾಮಯ್ಯ ರಾಜಕೀಯ ಮುಗಿದು ಹೋಗಿದೆ ಎಂದರು.
ಕ್ಷೇತ್ರ ಹುಡುಕಾಟದ ನಡುವೆ ಸಿದ್ದರಾಮಯ್ಯ ಅವರು ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುವುದು ಬಹುತೇಕ ಖಚಿತ ಎಂಬಂತಾಗಿತ್ತು. ಎರಡು ಮೂರು ಸುತ್ತಿನ ಸರ್ವೆ ಕೂಡ ಸಿದ್ದರಾಮಯ್ಯ ಅವರ ಬೆಂಬಲಿಗರು ನಡೆಸಿದ್ದರು. ಆದರೆ ಸಿದ್ದರಾಮಯ್ಯ ಅವರು ಕೋಲಾರದಿಂದ ಸ್ಪರ್ಧಿಸುವುದಿಲ್ಲ ಎಂದು ಬಿಜೆಪಿ ಹೇಳಿಕೊಂಡೇ ಬಂದಿತ್ತು ಎಂದರು.
ವಿಧಾನಸಭೆಗೆ ಪ್ರತಾಪ್ ಸಿಂಹ ಸ್ಪರ್ಧಿಸುತ್ತಾರೆ ಎಂಬ ವಿಚಾರವಾಗಿ ಮಾತನಾಡಿದ ಅವರು, 2029 ರವರೆಗೂ ಮೋದಿ ಅವರ ಆಡಳಿತದಲ್ಲಿ ಸಂಸದನಾಗಿ ಕೆಲಸ ಮಾಡುತ್ತೇನೆ. 8 ವಿಧಾನಸಭಾ ಕ್ಷೇತ್ರ ಪ್ರತಿನಿಧಿಸುವ ಸಂಸದನ ಸ್ಥಾನ ಬಿಟ್ಟು ಒಂದು ವಿಧಾನಸಭಾ ಕ್ಷೇತ್ರ ಹುಡುಕಿಕೊಳ್ಳುವಷ್ಟು ದಡ್ಡ ನಾನಲ್ಲ ಎಂದರು.