ಬಿಜೆಪಿ ತೊರೆದು ಕಾಂಗ್ರೆಸ್ ಬಾಗಿಲು ತಟ್ಟುತ್ತಿದ್ದಾರೆ: ಡಿ.ಕೆ.ಶಿವಕುಮಾರ್ | JANATA NEWS
ಬೆಂಗಳೂರು : ರಾಜ್ಯದ ಜನರ ಧ್ವನಿ ಕಾಂಗ್ರೆಸ್ ಕಡೆ ವಾಲುತ್ತಿದೆ. ನಮ್ಮ ನಡೆ ಅಧಿಕಾರದ ಕಡೆ ಇದೆ ಎಂಬುದಕ್ಕೆ ಬಿಜೆಪಿ ನಾಯಕರು ಕಾಂಗ್ರೆಸ್ ಪಕ್ಷದ ಕಡೆ ಬರುತ್ತಿರುವುದೇ ಸಾಕ್ಷಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ರಾಜ್ಯದ ಜನರ ಧ್ವನಿ ಕಾಂಗ್ರೆಸ್ ಕಡೆ ವಾಲುತ್ತಿದೆ. ನಮ್ಮನಡೆ ಅಧಿಕಾರದ ಕಡೆ ಸಾಗುತ್ತಿದೆ. ಇನ್ನು ಹಲವು ಶಾಸಕರು ಕೂಡ ಬಿಜೆಪಿ ತೊರೆದು ಕಾಂಗ್ರೆಸ್ ಬಾಗಿಲು ತಟ್ಟುತ್ತಿದ್ದಾರೆ.
ಕೂಡ್ಲಿಗಿ ಶಾಸಕ ಎನ್.ವೈ. ಗೋಪಾಲಕೃಷ್ಣ ಅವರು ನಿನ್ನೆ ಬಿಜೆಪಿಯ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಇಂದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಜಡೆಇಎಸ್ ತೊರೆದಿರುವ ಶಿವಲಿಂಗೇಗೌಡ ಕೂಡ ಕರೆ ಮಾಡಿದ್ದರು. ಏ.9ಕ್ಕೆ ನೀವು ಕ್ಷೇತ್ರಕ್ಕೆ ಬನ್ನಿ ಕಾಂಗ್ರೆಸ್ ಸೇರುತ್ತೇನೆ ಅಂದಿದ್ದಾರೆ. ಈ ವಿಚಾರವಾಗಿ ಮೊದಲು ಅರ್ಜಿ ಸಲ್ಲಿಸಿ ಎಂದು ನಾನು ಅವರಿಗೆ ಹೇಳಿದ್ದೇನೆ ಎಂದರು.
ಭ್ರಷ್ಟಾಚಾರ ಬೆಲೆ ಏರಿಕೆ ವಿರುದ್ಧ ಜನರು ಕಾಂಗ್ರೆಸ್ಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಪುಟ್ಟಣ್ಣ, ಬಾಬುರಾವ್ ಚಿಂಚನಸೂರು, ಎನ್ವೈ ಹನುಮಂತಪ್ಪ ದಡ್ಡರಲ್ಲ. ಬದಲಾವಣೆಗೆ ಜನ ತೀರ್ಮಾನ ಮಾಡಿದ್ದಾರೆ. ಡಬಲ್ ಇಂಜಿನ್ ಸರ್ಕಾರದಿಂದ ಯಾವುದೇ ಉಪಯೋಗವಾಗುತ್ತಿಲ್ಲ ಎಂಬುದು ಅರಿವಿಗೆ ಬಂದಿದೆ ಎಂದರು.
ಇನ್ನೂ ಬಹಳ ಜನರು ಬಾಗಿಲು ತಟ್ಟುತ್ತಿದ್ದಾರೆ. ಆದರೆ, ಮುಂದೆ ಅದರ ಬಗ್ಗೆ ತೀರ್ಮಾನ ಮಾಡುತ್ತೇವೆ. ಈಗ ಗೋಪಾಲಕೃಷ್ಣ ಕಾಂಗ್ರೆಸ್ ಸೇರಿದ್ದಾರೆ. ಯೋಗೇಶ್ ಬಾಬು ಕೂಡ ಕಾಂಗ್ರೆಸ್ಸಿಗೆ ದುಡಿದಿದ್ದಾರೆ. ಅವರನ್ನು ಮನಸಲ್ಲಿ ಇಟ್ಟುಕೊಂಡಿದ್ದೇವೆ. ನಿಮಗೆ ಕ್ಷೇತ್ರ ಇದೆ, ಯಾಕೆ ಬರ್ತಾ ಇದ್ದೀರಾ ಅಂತ ಕೇಳಿದಾಗ ಅವರು, ಸಾಯುವುದಕ್ಕೆ ಮುಂಚೆ ನಾನು ಕಾಂಗ್ರೆಸ್ಸಿಗ ಆಗಿ ಸಾಯಬೇಕು ಎಂದು ಹೇಳಿದ್ದಾರೆ. ಹೀಗಾಗಿ, ನಾವು ಅವರನ್ನು ಪಕ್ಷಕ್ಕೆ ಸ್ವಾಗತ ಮಾಡಕೊಂಡಿದ್ದೇವೆ ಎಂದು ಮಾಹಿತಿ ನೀಡಿದರು.