ಹಾಸನದ ಜೆಡಿಎಸ್ ಟಿಕೆಟ್ ಗೊಂದಲ, ನಾಳೆ/ನಾಡಿದ್ದು 2ನೇ ಪಟ್ಟಿ ಬಿಡುಗಡೆ: ಎಚ್ಡಿಕೆ | JANATA NEWS
ಬೆಂಗಳೂರು : ಚುನಾವಣೆಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಗೆ ಸಿದ್ಧವಾಗಿದೆ. ಇಂದು ಮಂಗಳವಾರ ಆದ್ದರಿಂದ ಪಟ್ಟಿ ಬಿಡುಗಡೆ ಮಾಡಿಲ್ಲ. ನಾಳೆ ಅಥವಾ ಗುರುವಾರ ಬೆಳಗ್ಗೆ ಮಾಡುತ್ತೇವೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ನನಗಿಂತ ಹೆಚ್ಚು ಮಾಧ್ಯಮಗಳಿಗೆ ಹಾಸನ ಟಿಕೆಟ್ ಘೋಷಣೆ ಬಗ್ಗೆ ಕುತೂಹಲವಿದೆ. ಅದನ್ನು ಬಿಟ್ಟು ಟಿಕೆಟ್ ಘೋಷಣೆ ಮಾಡಿದರೆ ಇನ್ಯಾವುದೋ ಕಥೆ ಹುಟ್ಟಿಕೊಳ್ಳುತ್ತದೆ. ಹಾಗಾಗಿ ಆ ಪಟ್ಟಿಯಲ್ಲಿ ಹಾಸನದ್ದೂ ಒಳಗೊಂಡಂತೆ ತೀರ್ಮಾನ ಮಾಡಬೇಕು ಎಂಬ ಲೆಕ್ಕಾಚಾರವಿದೆ.
ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೆಗೌಡರು ಬುಧವಾರ ಸಂಜೆ ದೆಹಲಿಯಿಂದ ವಾಪಸ್ ಆಗುತ್ತಾರೆ. ನಂತರವೇ ಎರಡು ಪಟ್ಟಿಯಲ್ಲಿನ ಹೆಸರುಗಳು ಬಹಿರಂಗಗೊಳ್ಳಲಿವೆ ಎಂದರು.
ಮೊದಲ ಪಟ್ಟಿ ಬಿಡುಗಡೆಯಾದಗಲೂ ಯಾವುದೇ ಸಮಸ್ಯೆ ಇರಲಿಲ್ಲ. ಎರಡನೇ ಪಟ್ಟಿ ವೇಳೆ ಹಾಸನದ್ದು ಹೆಚ್ಚು ಪ್ರಚಾರವಾಗಿದೆ. ಹಾಸನ ವಿಚಾರದಿಂದ ಜನತಾದಳಕ್ಕೂ ಹೆಚ್ಚು ಪ್ರಚಾರ ಸಿಕ್ಕಿದೆ. ಇದರಿಂದಾಗಿ ರಾಜ್ಯದಲ್ಲಿ ಶೇ. 2-3 ರಷ್ಟು ನಮ್ಮ ಮತ ಪ್ರಮಾಣ ಹೆಚ್ಚಾಗಲಿದೆ. ಇದರಿಂದ ಜನತಾದಳಕ್ಕೆ ಲಾಭವಾಗಿದೆ. ಇದಕ್ಕೆ ಹಾಸನ ಜಿಲ್ಲೆಯ ಬೆಳವಣಿಗೆಗೆ ಆದ ಕಾರಣಕರ್ತರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ನಮ್ಮ ಗುರಿ ಮುಟ್ಟಲು ಯಾವುದೇ ದುಡುಕಿ ತೀರ್ಮಾನ ಮಾಡಲ್ಲ. ಕಾರ್ಯಕರ್ತರ ಅಪೇಕ್ಷೆ, ಗೆಲ್ಲುವ ಮಾನದಂಡದಲ್ಲೇ ಟಿಕೆಟ್ ಕೊಡಲಾಗುವುದು ಎಂದು ತಿಳಿಸಿದರು.
ಪಟ್ಟಿ ರಿಲೀಸ್ ಆಗದ ಹಿನ್ನೆಲೆ ಜೆಡಿಎಸ್ ಪಟ್ಟಿ ವಿಳಂಬ ಆಗುತ್ತಿದೆಯಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಪಟ್ಟಿ ಬಗ್ಗೆ ಚಿಂತೆ ನಮಗಿಲ್ಲ. ಜೆಡಿಎಸ್ ಪಕ್ಷವು ನಮ್ಮದೇ ಆದ ರೀತಿಯಲ್ಲಿ ಅಭ್ಯರ್ಥಿಗಳನ್ನು ನಿರ್ಧರಿಸಿ ಪಟ್ಟಿ ಬಿಡುಗಡೆ ಮಾಡಲಿದೆ ಎಂದರು.